ಮೂರು ದೋಣಿಗಳಲ್ಲಿ ಸಂಚಿತಾ ಪಯಣ
'ರಾವಣ' ಚಿತ್ರದಲ್ಲಿ ನಟಿಸಿದ್ದ ಸಂಚಿತಾ ಪಡುಕೋಣೆ ಇದೀಗ ತೆಲುಗು ಚಿತ್ರರಂಗಕ್ಕೆ ಹಾರಿದ್ದಾರೆ. ಲೂಸ್ ಮಾದ ಅಲಿಯಾಸ್ ಯೋಗೀಶ್ ಜೊತೆ ನಟಿಸಿದ್ದ 'ರಾವಣ' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ತರಲಿಲ್ಲ. ಹಾಗಾಗಿ ಬೇರೆ ಭಾಷೆಯ ಚಿತ್ರಗಳತ್ತ ಸಂಚಿತಾ ತನ್ನ ಚಿತ್ತ ಹರಿಸಿದ್ದಾರೆ. ಒಳ್ಳೆಯ ಅವಕಾಶಗಳು ಸಿಕ್ಕರೆ ಕನ್ನಡಲ್ಲೂ ನಟಿಸುವುದಾಗಿ ಸಂಚಿತಾ ತಿಳಿಸಿದ್ದಾರೆ.
ಕರ್ನಾಟಕದ ಗಡಿ ಭಾಗದ ಪ್ರೇಕ್ಷಕರಿಗೆ ಇಷ್ಟವಾಗಿರುವ ಸಂಚಿತಾ ಇದೀಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಅತ್ತ ದಾಪುಗಾಲು ಹಾಕಿದ್ದಾರೆ. ರಾಜಾ ಎಂಬಾತ ಸಂಚಿತಾ ನಟಿಸಲಿರುವ ತೆಲುಗು ಚಿತ್ರದ ನಾಯಕ. ಮಧುಬಾಲಾ ಪಾತ್ರದಲ್ಲಿ ಸಂಚಿತಾ ಕಾಣಿಸಲಿದ್ದಾರೆ.ಇದೇ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಶ್ರೀನಿವಾಸ ಎಂಬುವವರು.
ಈಗಾಗಲೇ ಸಂಚಿತಾ ಅಭಿನಯಿಸಿದ ತಮಿಳು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳಿನ 'ವೆಟ್ಟೈಕ್ಕಾರನ್' ಚಿತ್ರದ ಸಣ್ಣ ಪಾತ್ರದಲ್ಲಿ ಸಂಚಿತಾ ತಾವೇನೆಂದು ಸಾಬೀತುಪಡಿಸಿಕೊಂಡಿದ್ದಾರೆ. ಇದೀಗ ಸಂಚಿತಾ ತಮಿಳಿನ 'ಪಿಲ್ಲೈಯಾರ್ ಥೇರು ಕಡೈಸಿ ವೀಡು' ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನ ಮೂರು ದೋಣಿಗಳಲ್ಲಿ ಸಂಚಿತಾ ಪಯಣ ಸಾಗಲಿದೆ.


Click it and Unblock the Notifications











