ಮೈಲಾರಿ ಶೀರ್ಷಿಕೆ; ಎಲ್ಲ ಶಿವಣ್ಣನ ಕೈಯಲ್ಲೇ ಇದೆ
'ಮೈಲಾರಿ' ಶೀರ್ಷಿಕೆ ವಿವಾದ ದಿನೇ ದಿನೇ ಬಿಗಡಾಯಿಸುತ್ತಿದೆ. ಈ ಶೀರ್ಷಿಕೆ ಯಾರಿಗೆ ಸೇರಬೇಕು ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಮೈಲಾರಿ' ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಆದರೆ ಶೀರ್ಷಿಕೆ ಕುರಿತ ವಿವಾದ ಮಾತ್ರ ತಣ್ಣಗಾಗಿಲ್ಲ.
ಈಗಾಗಲೆ 'ಮೈಲಾರಿ' ಶೀರ್ಷಿಕೆಯನ್ನು ಫಿಲಂ ಚೇಂಬರ್ ನಲ್ಲಿ ತಾವು ನೋಂದಾಯಿಸಿಕೊಂಡಿರುವುದಾಗಿ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಪಟ್ಟು ಹಿಡಿದು ಕೂತಿದ್ದಾರೆ. ಯಾವುದೇ ಕಾರಣಕ್ಕೂ ಈ ಶೀರ್ಷಿಯನ್ನು ಬಿಟ್ಟುಕೊಡುವುದಿಲ್ಲ ಎಂಬುದು ಅವರ ವಾದ. ಈ ವಿವಾದವನ್ನು ಆದಷ್ಟು ಬೇಗನೆ ಶಿವಣ್ಣ ಬಗೆಹರಿಸುತ್ತಾರೆ. ಎಲ್ಲವೂ ಅವರ ಕೈಯಲ್ಲೇ ಇದೆ ಎನ್ನುತ್ತಾರೆ ಆರ್ ಚಂದ್ರು.
'ಮೈಲಾರಿ' ಶೀರ್ಷಿಕೆ ಬಗ್ಗೆ ಚಿತ್ರದ ನಿರ್ದೇಶಕ ಆರ್ ಚಂದ್ರು ಅಪಾರ ವಿಶ್ವಾಸವಿಟ್ಟುಕೊಂಡಿದ್ದು ಇದೇ ಶೀರ್ಷಿಕೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಮತ್ತು ಅಶ್ವಿನಿ ರಾಮ್ ಪ್ರಸಾದ್ ಇಬ್ಬರು ಒಳ್ಳೆಯ ಗೆಳೆಯರು. ಅಶ್ವಿನಿ ರಾಮ್ ಪ್ರಸಾದ್ ಜೊತೆ ಶಿವಣ್ಣ 'ಜೋಗಿ' ಚಿತ್ರವನ್ನು ಮಾಡಿದ್ದರು. ರಾಮ್ ಪ್ರಸಾದ್ ಅವರನ್ನು ಶಿವಣ್ಣ ಒಪ್ಪಿಸಿಯೇ ತೀರುತ್ತಾರೆ. 'ಮೈಲಾರಿ' ಶೀರ್ಷಿಕೆ ನಮಗೆ ದಕ್ಕುತ್ತದೆ ಎನ್ನುತ್ತಾರೆ ಆರ್ ಚಂದ್ರು.


Click it and Unblock the Notifications











