ಸಿಡಿಯಲ್ಲಿರುವುದೆಲ್ಲಾ ಬೋಗಸ್; ನಟಿ ರಂಜಿತಾ

ಹಸಿರು ಬಣ್ಣದ ದುಪ್ಪಟ ಹಾಗೂ ಕೆಂಪು ಚೂಡಿದಾರ್ ಧರಿಸಿದ್ದ ರಂಜಿತಾ ಆರಂಭದಲ್ಲೆ ತಮ್ಮ ವಿರುದ್ಧದಆರೋಪಗಳನ್ನು ತಳ್ಳಿಹಾಕಿದರು. ಮಾಧ್ಯಮಗಳಲ್ಲಿ ಬಂದ ತಾನು ತಲೆಮರೆಸಿಕೊಂಡಿದ್ದೇನೆ ಎಂಬ ಸುದ್ದಿಯಿಂದ ತೀವ್ರ ಮನನೊಂದಿದ್ದೇನೆ. ನಿತ್ಯಾನಂದನ ರಾಸಲೀಲೆ ಸಿಡಿಯಲ್ಲಿರುವುದೆಲ್ಲಾ ಬೋಗಸ್ ಎಂದು ರಂಜಿತಾ ಸ್ಪಷ್ಟಪಡಿಸಿದರು.
ಇದೆಲ್ಲಾ ಸ್ವಾಮಿ ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್ ಪಿತೂರಿ . ಆತನ ವಿರುದ್ಧ ತಾವು ರಾಮನಗರ ನ್ಯಾಯಾಲಯದಲ್ಲಿ ನೆನ್ನೆಯಷ್ಟೆ(ಡಿ.30) ದೂರು ಸಲ್ಲಿಸಿದ್ದೇನೆ. ರಾಸಲೀಲೆ ಪ್ರಕರಣ ಒಂದು ಸುಳ್ಳಿನ ಕಂತೆ ಎಂದ ಅವರು, ಈ ಎಲ್ಲಾ ನಾಟಕದ ಸೂತ್ರಧಾರ ಲೆನಿನ್ ಎಂದು ಆರೋಪಗಳ ಸುರಿಮಳೆಗರೆದರು.
ಸ್ವಾಮಿ ನಿತ್ಯಾನಂದನ ಕೋಟ್ಯಾಂತರ ಭಕ್ತರಲ್ಲಿ ನಾನು ಒಬ್ಬಳು. ಬಿಡದಿಯ ಧ್ಯಾನಪೀಠಂ ಆಶ್ರಮದಲ್ಲಿ ನಾನು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದೆ. ಈ ವರ್ಷವೆಲ್ಲಾ ನನಗೆ ದುಃಸ್ವಪ್ನದಂತೆ ಭಾಸವಾಗಿದೆ. ನಾನು ಎಲ್ಲೂ ಅಡಗಿಕೊಂಡಿರಲಿಲ್ಲ. ಯಾವುದೇ ರಹಸ್ಯ ಸ್ಥಳದಲ್ಲೂ ಇರಲಿಲ್ಲ. ಕಳೆದ ಕೆಲವು ತಿಂಗಳಿಂದ ಬಹಳಷ್ಟು ನೊಂದಿದ್ದೇನೆ ಎಂದು ತಮ್ಮ ನಿಲುವನ್ನು ಪ್ರಕಟಿಸಿದರು.
ನನಗೆ ಪ್ರಾಣ ಬೆದರಿಕೆ ಒಡ್ಡಲಾಗಿತ್ತು. ನನ್ನನ್ನು ಬಂಧಿಸುವ ಭೀತಿಯಲ್ಲಿದ್ದೆ. ಸತ್ಯವನ್ನು ಹೇಳಬಾರದು ಎಂಬ ಬೆದರಿಕೆಯೂ ಇತ್ತು. ಹಾಗಾಗಿ ತಾವು ಇಷ್ಟು ದಿನ ಮಾಧ್ಯಮಗಳ ಮುಂದೆ ಬರಲು ಸಾಧ್ಯವಾಗಲಿಲ್ಲ ಎಂದು ರಂಜಿತಾ ತಮ್ಮದೇ ಆದಂತಹ ಕಾರಣಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಂಜಿತಾ ಪರ ವಕೀಲ ಗಜೇಂದ್ರ ನಾಯ್ಡು ಸಹ ಉಪಸ್ಥಿತರಿದ್ದರು.
ಮಾರ್ಚ್ 3ರಿಂದ ಜೂನ್ 14ರತನಕ ಅಮೆರಿಕಾದಲ್ಲಿದ್ದೆ. ನನಗೆ ಮತ್ತು ನಮ್ಮ ಕುಟುಂಬಕ್ಕೆ ಶೇಕಡಾ ನೂರರಷ್ಟು ಭದ್ರತೆ ನೀಡುವುದಾದರೆ ರಾಸಲೀಲೆ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬಹಿರಂಗಪಡಿಸುವುದಾಗಿ ಹೇಳಿದರು. ರಾಸಲೀಲೆ ಸಿಡಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದವರದಿ ಬಗ್ಗೆ ನನಗೆ ನಂಬಿಕೆ ಇಲ್ಲ. ಹಾಗಾಗಿ ಆ ವಿಡಿಯೋ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದು ರಂಜಿತಾ ಸ್ಪಷ್ಟಪಡಿಸಿದರು.
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಮಿಷನರಿಗಳ ಕುತಂತ್ರವೂ ಇದೆ. ಇದರಲ್ಲಿ ರಾಜಕಾರಣಿಯೊಬ್ಬರ ಕೈವಾಡವೂ ಇದೆ ಎಂಬ ಅಂಶಗಳು ರಂಜಿತಾ ಆರೋಪದಲ್ಲಿ ವ್ಯಕ್ತವಾದವು. ಕಳೆದ ಒಂದು ಒಂದೂವರೆ ವರ್ಷದಿಂದ ತಾವು ಬಿಡದಿಯ ಧ್ಯಾನಪೀಠಂ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ. ಅಲ್ಲಿಂದ ಕರೆ ಬಂದರೆ ಇನ್ನೂ ಮುಂದೆಯೂ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಸುಮಾರು ಅರ್ಧ ಗಂಟೆ ಕಾಲ ನಡೆದ ಸುದ್ದಿಗೋಷ್ಠಿಯಲ್ಲಿ ರಂಜಿತಾ ಇಂಗ್ಲಿಷ್ನಲ್ಲಿ ಮಾತನಾಡುತ್ತಾ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದರು. ಈ ವರ್ಷವೆಲ್ಲಾ ನನಗೆ ದುಃಸ್ವಪ್ನದಂತೆ ಭಾಸವಾಗಿದೆ ಎಂದು ರಂಜಿತಾ ಹೇಳಿದರು. [ರಂಜಿತಾ]


Click it and Unblock the Notifications











