ರವಿಚಂದ್ರನ್ ಇನ್ನು ಮುಂದೆ ಕನಸುಗಾರನಲ್ಲ
ಕ್ರೇಜಿಸ್ಟಾರ್ ರವಿಚಂದ್ರನ್ ಇನ್ನು ಮುಂದೆ ಕನಸುಗಾರನಲ್ಲ.ಭಾನುವಾರವಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರವಿಚಂದ್ರನ್ ಕನಸುಗಳು ಬದಲಾಗಿವೆ. ರವಿಚಂದ್ರನ್ ಹೆಸರಿನ ಮುಂದಿದ್ದ ಕನಸುಗಾರ ಇನ್ನು ಮುಂದೆ ನಾಪತ್ತೆಯಾಗಲಿದ್ದಾನೆ.
ಇನ್ನು ಮುಂದೆ ರವಿಚಂದ್ರನ್ ಚಿತ್ರಗಳಲ್ಲಿ ಕನಸುಗಾರ ರವಿಚಂದ್ರನ್ ಎಂಬ ಹೆಸರು ಕಾಣಿಸುವುದಿಲ್ಲ. ಅದರ ಬದಲಿಗೆ ವೀರಸ್ವಾಮಿ ರವಿಚಂದ್ರನ್ ಎಂಬ ಹೊಸ ಹೆಸರು ಕಾಣಿಸಲಿದೆ. ರವಿಚಂದ್ರನ್ ಸಿನಿಮಾ ಭಿತ್ತಿ ಪತ್ರಗಳಲ್ಲಿ 'ಕನಸುಗಾರನ ಒಂದು ಕನಸು' ಎಂದು ಮುದ್ರಿಸಲಾಗುತ್ತಿತ್ತು. ಅದು ಇನ್ನು ಮುಂದೆ ನಾಪತ್ತೆಯಾಗಲಿದೆ.
ಕೇವಲ ಎರಡೇ ಎರಡು ಪಾತ್ರಗಳಿರುವ ರವಿಚಂದ್ರನ್ ಹೊಸ ಚಿತ್ರ 'ಆಸೆ' ಶೀಘ್ರದಲ್ಲೆ ಸೆಟ್ಟೇರಲಿದೆ. ರವಿಚಂದ್ರನ್ ಪುತ್ರ ಮನೋಹರ್ ಅವರ ಚೊಚ್ಚಲ ಚಿತ್ರವಿದು. ಈ ಚಿತ್ರದ ಮೂಲಕ ಮನೋಹರ್ ಸಹಾಯಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾನೆ.
"ನಟನಾಗುವುದಕ್ಕೂ ಮುನ್ನ ಅವನಿಗೆ ಸಿನಿಮಾದ ತಾಂತ್ರಿಕ ಅಂಶಗಳನ್ನು ತಿಳಿಸಬೇಕು. ಹಾಗಾಗಿ ಅವನನ್ನು ಸಹಾಯಕ ನಿರ್ದೇಶನಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ ಎನ್ನುತ್ತಾರೆ ರವಿಚಂದ್ರನ್. 'ಆಸೆ' ಚಿತ್ರ ಹೊಸತನದಿಂದ ಕೂಡಿದ್ದು ವಿಭಿನ್ನವಾಗಿರುತ್ತದೆ. ಈ ಚಿತ್ರದ ಮೂಲಕ ಚಿತ್ರ ನಿರ್ಮಾಣದ ಸಿದ್ಧಸೂತ್ರಗಳು ಬದಲಾಗಲಿವೆ ಎಂದು ರವಿ ತಿಳಿಸಿದ್ದಾರೆ. 'ಮಂಜಿನ ಹನಿ' ಬಳಿಕವಷ್ಟೆ 'ಆಸೆ' ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











