ಬೆಂಗಳೂರಿನಲ್ಲಿ ಒರಟ ಪ್ರಶಾಂತ್ ಎಂಗೇಜ್ಮೆಂಟ್
ಒರಟ ಖ್ಯಾತಿಯ ಪ್ರಶಾಂತ್ 'ಎಂಗೇಜ್ ಮೆಂಟ್' ಬೆಂಗಳೂರಿನಲ್ಲಿ ಸದ್ದುಗದ್ದಲವಿಲ್ಲದೆ ನಡೆದುಹೋಗಿದೆ. ಇನ್ನೇನು ಮದುವೆ ಮುಹೂರ್ತ ಸಮೀಪಿಸುತ್ತಿದೆ. ಆದರೆ ಇದು ನಿಜಜೀವನದಲ್ಲಿ ನಡೆದ ನಿಶ್ಚಿತಾರ್ಥವಲ್ಲ. ಪ್ರಶಾಂತ್ ನಟಿಸುತ್ತಿರುವ ಹೊಸ ಚಿತ್ರದ ಹೆಸರೆ 'ಎಂಗೇಜ್ ಮೆಂಟ್'!
ಶ್ರೀಸತ್ಯನಾರಾಯಣ ಕಂಬೈನ್ಸ್ ಲಾಂಛನದಲ್ಲಿ 'ಎಂಗೇಜ್ಮೆಂಟ್ ಎಂಬ ನೂತನ ಚಿತ್ರ ಆರಂಭವಾಗಿದೆ. ಎಂ.ಗೋಪಾಲಕೃಷ್ಣ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್.ಪಿ.ನಂಜುಂಡಿ ನಿರ್ದೇಶಿಸುತ್ತಿದ್ದಾರೆ. ಭಾರ್ಗವ, ಎಸ್.ನಾರಾಯಣ್, ಮುದ್ದುರಾಜ್ ಅವರಂತಹ ಹಿರಿಯ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ನಂಜುಂಡಿ ಅವರು ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರವಿದು.
ಪ್ರಶಾಂತ್(ಒರಟ ಐ ಲವ್ ಯು) ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಂಗಳೂರು, ಮಡಿಕೇರಿಯಲ್ಲಿ ಮುಂತಾದ ಕಡೆ ಚಿತ್ರದ ಐದು ಹಾಡುಗಳು ಚಿತ್ರೀಕರಣಗೊಳ್ಳಲಿದೆ. ಆಶಾ ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಚಂದನ್, ರಾಮಕೃಷ್ಣ, ರಮೇಶ್ಭಟ್, ಬ್ಯಾಂಕ್ಜನಾರ್ದನ್, ಜ್ಯೋತಿ, ಮೈಕಲ್ಮಧು, ಕಿಲ್ಲರ್ವೆಂಕಟೇಶ್, ಸತ್ಯಜಿತ್, ಮಾಸ್ಟರ್ ಅಭಿಷೇಕ್ ಮುಂತಾದವರಿದ್ದಾರೆ.
ನಿರ್ದೇಶಕರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಅವರ ಸಂಗೀತವಿದೆ. ರೇಣುಕುಮಾರ್ ಛಾಯಾಗ್ರಹಣ, ದಾಮೋದರ್ ಸಂಕಲನ, ಶ್ರೀನಿವಾಸ್ ಕಲಾನಿರ್ದೆಶನ ಹಾಗೂ ದಾಡಿ ರಮೇಶ್ ನಿರ್ಮಾಣ ನಿರ್ವಹಣೆ 'ಎಂಗೇಜ್ಮೆಂಟ್' ಚಿತ್ರಕ್ಕಿದೆ


Click it and Unblock the Notifications











