ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಸಾಲು-ಸಾಲು ಗುಡ್ನ್ಯೂಸ್
ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಇಂದು (ಅಕ್ಟೋಬರ್ 3) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸ್ಯಾಂಡಲ್ವುಡ್ನ ಖ್ಯಾತ ನಟಿ ಸುಮಲತಾ ಅಂಬರೀಶ್ ಅವರ ಪುತ್ರನಾಗಿರುವ ಅಭಿಷೇಕ್ ಅಂಬರೀಶ್ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಇಂದು (ಅಕ್ಟೋಬರ್ 3) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರಿಗೆ ಸಿನಿಮಾ ನಟ-ನಟಿಯರು ಸೇರಿದಂತೆ ಅಪಾರ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಮಧ್ಯೆರಾತ್ರಿಯಿಂದಲೇ ಅಭಿಷೇಕ್ ಅಂಬರೀಶ್ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿದ್ದು, ಮೆಚ್ಚಿನ ನಾಯಕನಿಗೆ ಶುಭಾಶಯ ತಿಳಿಸಿದ್ದಾರೆ. ತಮ್ಮ ಮನೆಯ ಬಳಿ ಬಂದಿರುವ ಅಪಾರ ಅಭಿಮಾನಿಗಳು ಹಾಗೂ ಗೆಳೆಯರ ಜೊತೆ ಅಭಿಷೇಕ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಬಾಲ್ಯದಿಂದಲೂ ಚಿತ್ರರಂಗದ ನಂಟಿನೊಂದಿಗೆ ಬೆಳೆದ ಅಭಿಷೇಕ್ ಅಂಬರೀಶ್ ಮೊದಲು ತಮ್ಮ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಭಿಷೇಕ್ ಅಂಬರೀಶ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ನ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ತಮ್ಮ ಶಿಕ್ಷಣ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳಿದ ಅಭಿಷೇಕ್ ನಟನೆಯತ್ತ ಒಲವು ತೋರಿದರು.

ಮೊದಲ ಚಿತ್ರದಲ್ಲೇ ಭರವಸೆಯ ನಟನೆ
2019ರಲ್ಲಿ ತೆರೆ ಕಂಡ 'ಅಮರ್' ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಾಗಶೇಖರ್ ನಿರ್ದೇಶನದ ಚಿತ್ರದ ಮೂಲಕ ಗ್ರಾಂಡ್ ಎಂಟ್ರಿ ಪಡೆದ ಅಭಿಷೇಕ್ ಅಂಬರೀಶ್ ಮೊದಲ ಚಿತ್ರದ ನಟಯ ಮೂಲಕವೇ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ನಟನೆಯ 'ಅಮರ್' ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿತ್ತು.

ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾದ ಅಭಿಷೇಕ್
ತಮ್ಮ ಮೊದಲ ಚಿತ್ರ 'ಅಮರ್' ಮೂಲಕವೇ ಸಿನಿಮಾ ರಂಗದಲ್ಲಿ ಜನಪ್ರಿಯತೆ ಪಡೆದಿರುವ ಅಭಿಷೇಕ್ ಅಂಬರೀಶ್ ಸದ್ಯ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. 'ಅಮರ್' ಚಿತ್ರದ ಬಳಿಕ ಅಭಿಷೇಕ್ ಅಂಬರೀಶ್ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಕೊರೊನಾ ಲಾಕ್ಡೌನ್ ಸೇರಿದಂತೆ ಇತರ ಕಾರಣಗಳಿಂದ ಅವರ ಮುಂದಿನ ಚಿತ್ರಕ್ಕೆ ಸಮಯ ತೆಗೆದುಕೊಂಡಿತು. 'ಬ್ಯಾಡ್ ಮ್ಯಾನರ್ಸ್' ಇದು ಅಭಿಷೇಕ್ ಅಂಬರೀಶ್ ಅವರ ಎರಡನೇ ಚಿತ್ರವಾಗಿದ್ದು, ಇನ್ನೇನು ತೆರೆ ಕಾಣಲು ಸಜ್ಜಾಗುತ್ತಿದೆ.

'ಬ್ಯಾಡ್ ಮ್ಯಾನರ್ಸ್' ಚಿತ್ರದ ಟೀಸರ್ ರಿಲೀಸ್
ಜೂನಿಯರ್ ರೆಬಲ್ ಸ್ಟಾರ್ ಮುಂದಿನ ಚಿತ್ರದ ಹೆಸರೇ ವಿಭಿನ್ನವಾಗಿದ್ದು, 'ಬ್ಯಾಡ್ ಮ್ಯಾನರ್ಸ್' ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ. ಈಗಾಗಲೇ ಟೀಸರ್ ಬಿಡುಗಡೆಗಾಗಿ ಟೀಸರ್ವೊಂದನ್ನು ರಿಲೀಸ್ ಮಾಡಲಾಗಿದ್ದು, ಅಭಿಷೇಕ್ ಅಂಬರೀಶ್ ಸಖತ್ ಖದರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 3) ಬೆಳಗ್ಗೆ 10:35ಕ್ಕೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ನಾಲ್ಕನೇ ಚಿತ್ರಕ್ಕೂ ಓಕೆ ಎಂದ ಅಭಿಷೇಕ್
ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಗುಡ್ನ್ಯೂಸ್ ಸಿಗಲಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಬಿಡುಗಡೆ ಜೊತೆಗೆ ಅಭಿಷೇಕ್ ಅಭಿನಯದ ಮುಂದಿನ ಚಿತ್ರ 'ಕಾಳಿ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಲಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರ ನಿರ್ದೇಶನದ 'ಕಾಳಿ' ಅಭಿಷೇಕ್ ಅವರ ಮೂರನೇ ಚಿತ್ರವಾಗಿದ್ದು, ಇಂದು ಹೊಸ ಪೋಸ್ಟರ್ ಮೂಲಕ ಚಿತ್ರತಂಡ ಶುಭಾಶಯ ತಿಳಿಸಿದೆ.
ಈಗಾಗಲೇ ಎರಡು ಚಿತ್ರಗಳಲ್ಲಿ ಬ್ಯೂಸಿ ಇರುವ ಅಭಿಷೇಕ್ ಅಂಬರೀಶ್ ತಮ್ಮ ನಾಲ್ಕನೇ ಚಿತ್ರಕ್ಕೂ ಕೂಡ ಓಕೆ ಹೇಳಿದ್ದಾರೆ. ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ನಾಯಕ ನಟನಾಗಿ ನಟಿಸಲಿದ್ದು, ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ದಿನ 'AA04' ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇಂದು (ಅಕ್ಟೋಬರ್ 3) ಅಭಿಷೇಕ್ ಹುಟ್ಟುಹಬ್ಬದ ಕಾರಣ 'AA04' ಚಿತ್ರತಂಡದಿಂದ ಹೊಸ ಅಪ್ಡೇಟ್ ಸಿಗುವ ಸಾಧ್ಯತೆ ಇದೆ.


Click it and Unblock the Notifications











