ಬೆಳ್ಳಿಪರದೆಗೆ ಚರಣ್ ರಾಜ್ ಪುತ್ರ ಪಾದಾರ್ಪಣೆ
ಜನಪ್ರಿಯ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಚರಣ್ ರಾಜ್ ಪುತ್ರ ತೇಜ ರಾಜ್ ಅವರು ಬೆಳ್ಳಿಪರದೆಗೆ ಅಡಿಯಿಡಲು ಸಿದ್ಧರಾಗಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸರಿಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಚರಣ್ ರಾಜ್ ಅವರದು.
ಈಗ ತಮ್ಮ ಪುತ್ರನನ್ನು ಬೆಳ್ಳಿಪರದೆಗೆ ಪರಿಚಯಿಸುತ್ತಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ಇಷ್ಟು ದಿನಗಳ ಕಾಲ ತಮ್ಮ ಮಗ ಅಭಿನಯದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಕೇವಲ ನಟನೆಯಷ್ಟೇ ಅಲ್ಲ. ಡಾನ್ಸ್, ಸ್ಟಂಟ್ಸ್ ನಲ್ಲೂ ತರಬೇತಿ ಪಡೆದಿದ್ದಾನೆ. ಶೀಘ್ರದಲ್ಲೇ ಒಂದು ಉತ್ತಮ ಕಥಾವಸ್ತುವುಳ್ಳ ಚಿತ್ರದ ಮೂಲಕ ಅವನನ್ನು ಪರಿಚಯಿಸುತ್ತಿದ್ದೇನೆ" ಎಂದಿದ್ದಾರೆ.
"ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದ್ದೇ ಇರುತ್ತದೆ. ಈ ಸ್ಪರ್ಧೆಯನ್ನು ಮೆಟ್ಟಿನಿಂತಾಗಲೇ ಅವರವರ ಪ್ರತಿಭೆ ಹೊರಬೀಳುವುದು. ಸ್ಪರ್ಧೆಗೆ ಭಯ ಬಿದ್ದರೆ ಪ್ರಯೋಜನವಿಲ್ಲ. ತನ್ನ ಮಗ ಸ್ಪರ್ಧೆಯನ್ನು ಎದುರಿಸಲು ಚಿತ್ರರಂಗಕ್ಕೆ ಬರುತ್ತಿದ್ದಾನೆ. ಅವನು ಇಲ್ಲಿ ನೆಲೆನಿಲ್ಲುತ್ತಾನೆ ಎಂಬ ನಂಬಿಕೆ ಇದೆ" ಎನ್ನುತ್ತಾರೆ ಚರಣ್ ರಾಜ್.

ಚರಣ್ ರಾಜ್ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರತನ್ ಮಹಲ್ ಹೋಟೆಲ್ ನ ಸಣ್ಣ ರೂಮಿನಲ್ಲಿದ್ದುಕೊಂಡು ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ ಬದುಕು ರೂಪಿಸಿಕೊಂಡವರು. ಬಳಿಕ ತೆಲುಗು,ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಕೋಟ್ಯಾಂತರ ರುಪಾಯಿ ಸಂಪಾದನೆ ಮಾಡಿದರು.
ಗಡಿ ಜಿಲ್ಲೆ ಬೆಳಗಾವಿ ಚರಣ್ ರಾಜ್ ಅವರ ಹುಟ್ಟೂರು. ಕನ್ನಡ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿಪರದೆ ಪ್ರವೇಶಿಸಿದ ಚರಣ್ ಬಳಿಕ ಮಾಫಿಯಾ, ತಾಳಿಯ ಭಾಗ್ಯ (ಶಂಕರ್ ನಾಗ್ ಜೊತೆ), ತವರಿನ ತೊಟ್ಟಿಲು, ಮಿಸ್ಟರ್ ತೀರ್ಥ, ಶಿಕಾರಿ, ಆಫ್ರಿಕಾದಲ್ಲಿ ಶೀಲಾ, ಹೃದಯ ಪಲ್ಲವಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











