'ಕನ್ನಡ್' ಎಂದ ನಿರೂಪಕಿಯ ಕಿವಿ ಹಿಂಡಿದ ಕಿಚ್ಚ ಸುದೀಪ್: ವಿಡಿಯೋ ವೈರಲ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಪಾಠ ಮುಂದುವರೆದಿದೆ. ಅಂದು ಬಾಲಿವುಡ್ ನಟ ಅಜಯ್ ದೇವಗನ್ಗೆ ರಾಷ್ಟ್ರಭಾಷೆಯ ಪಾಠ ಮಾಡಿದ್ದ ಕಿಚ್ಚ ಈಗ ಕನ್ನಡವನ್ನು 'ಕನ್ನಡ್' ಅನ್ನುವ ಉತ್ತರ ಭಾರತದವರಿಗೆ ಸರಿಯಾಗಿ ತಿಳಿ ಹೇಳುತ್ತಿದ್ದಾರೆ.
ಅದೇನೋ ಗೊತ್ತಿಲ್ಲ. ಈ ಉತ್ತರ ಭಾರತದವರು ಕನ್ನಡ ಎಂದು ಉಚ್ಛಾರಣೆ ಮಾಡಲು ನಾಟಕ ಮಾಡುತ್ತಾರೆ. ಅದ್ಯಾರು ಕನ್ನಡವನ್ನು'ಕನ್ನಡ್' ಎಂದು ಅವರಿಗೆಲ್ಲಾ ಹೇಳಿಕೊಟ್ಟರೋ ಗೊತ್ತಿಲ್ಲ. ಇಂತಹವರಿಗೆ ನಟ ಸುದೀಪ್ ಸರಿಯಾಗಿ ಪಾಠ ಮಾಡುತ್ತಿದ್ದಾರೆ. ತಮ್ಮ ಎದುರು ಯಾರಾದರೂ 'ಕನ್ನಡ್' ಎಂದ ತಕ್ಷಣವೇ ಅದು 'ಕನ್ನಡ್' ಅಲ್ಲ ಕನ್ನಡ ಎಂದು ಮುಟ್ಟಿನೋಡಿಕೊಳ್ಳುವಂತೆ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ 'ವಿಕ್ರಾಂತ್ ರೋಣ' ಸುದ್ದಿಗೋಷ್ಠಿಯ ವೇದಿಕೆಯಲ್ಲೂ ಇಂತಹ ಪ್ರಸಂಗ ನಡೆದಿತ್ತು.
'ವಿಕ್ರಾಂತ್ ರೋಣ' ಚಿತ್ರದ ಪ್ರಚಾರದ ಭಾಗವಾಗಿ ಸುದೀಪ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಯೂಟ್ಯೂಬ್ ಹಾಗೂ ರಾಷ್ಟ್ರೀಯ ಸುದ್ಧಿವಾಹಿನಿಗಳಿಗೂ ಸಂದರ್ಶನ ನೀಡಿದ್ದಾರೆ. ಅದೇ ರೀತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರೂಪಕಿಯೊಬ್ಬಳು ಕನ್ನಡವನ್ನು 'ಕನ್ನಡ್' ಅಂದಿದ್ದಾಳೆ. ಕೂಡಲೇ ಆಕೆಯ ಕಿವಿ ಹಿಂಡಿದ ಕಿಚ್ಚ ಕನ್ನಡದ ಬಗ್ಗೆ ಸರಿಯಾದ ಪಾಠ ಮಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಸೆಲೆಬ್ರೆಟಿಗಳು ಕಿಚ್ಚನಿಗೆ ಜೈಕಾರ ಹಾಕುತ್ತಿದ್ದಾರೆ.
ಸುದೀಪ್ ಕನ್ನಡ ಪಾಠ ಹೇಗಿತ್ತು?
ನಿರೂಪಕಿ ತೆಲುಗು, ತಮಿಳು, ಮಲಯಾಳಂ, 'ಕನ್ನಡ್' ಎನ್ನುತ್ತಿದ್ದಂತೆ ಸುದೀಪ್, "ಕನ್ನಡ್ ಅಲ್ಲ ಮೇಡಂ ಕನ್ನಡ. ಹೇಗೆ ಹಿಂದಿ 'ಹಿಂದ್' ಆಗಲ್ವೋ ಅದೇ ತರ ಕನ್ನಡ 'ಕನ್ನಡ್" ಆಗಲ್ಲ. ನೀವು ನಮ್ಮ ಭಾಷೆ ಕಲಿಯಿರಿ. ಭಾಷೆ ಬಿಡಿ ಅದರ ಹೆಸರನ್ನಾದರೂ ಸರಿಯಾಗಿ ಹೇಳಿ. ತಮಿಳು ಸರಿಯಾಗಿ ಹೇಳ್ತಿರಿ, ತೆಲುಗು ಸರಿಯಾಗಿ ಹೇಳ್ತಿರಿ. ಆದರೆ ಕನ್ನಡವನ್ನು 'ಕನ್ನಡ್' ಅಂತೀರಾ. 'ಕನ್ನಡ್' ಅಲ್ಲ ಕನ್ನಡ" ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲೂ ಕನ್ನಡ ಪಾಠ
ಇನ್ನು 'ವಿಕ್ರಾಂತ್ ರೋಣ' ಚಿತ್ರಕ್ಕೆ ಎನ್ಎಫ್ಟಿ ಟೆಕ್ನಾಲಜಿ ಬಳಸಿಕೊಳ್ಳಲಾಗಿದೆ. ಇದರ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಅಂದು ಎನ್ಎಫ್ಟಿ ಬ್ಲಾಕ್ ಟಿಕೆಟ್ಸ್ನ ಸಂಸ್ಥಾಪಕ ಅಭಿನವ್ ಗಾರ್ಗ್ ಕೂಡ ಮಾತನಾಡುತ್ತಾ ಕನ್ನಡವನ್ನು 'ಕನ್ನಡ್' ಎಂದಿದ್ದರು. ಪಕ್ಕದಲ್ಲೇ ಕೂತಿದ್ದ ಕಿಚ್ಚ ಕನ್ನಡ ಎಂದು ತಿಳಿ ಹೇಳಿದ್ದರು. ಗಾರ್ಗ್ ಕ್ಷಮೆ ಕೇಳಿ ಕನ್ನಡ ಎಂದು ಮಾತು ಮುಂದುವರೆಸಿದ್ದರು.

ದೇವಗನ್ಗೆ ತಿರುಗುಬಾಣ ಬಿಟ್ಟಿದ್ದ ಕಿಚ್ಚ!
ಕೆಲ ದಿನಗಳ ಹಿಂದೆ ಹಿಂದಿ ರಾಷ್ಟ್ರಭಾಷೆ ಎಂದು ಟ್ವೀಟ್ ಮಾಡಿ ಹಾರಾಡಿದ್ದ ಬಾಲಿವುಡ್ ನಟ ಅಜಯ್ ದೇವಗನ್ಗೂ ಸುದೀಪ್ ಇದೇ ರೀತಿ ಪಾಠ ಮಾಡಿದ್ದರು. ಅಂದು ಇವರಿಬ್ಬರ ಟ್ವೀಟ್ ವಾರ್ ಭಾರೀ ಸದ್ದು ಮಾಡಿತ್ತು. ಕಿಚ್ಚನ ಟ್ವೀಟ್ ಏಟಿಗೆ ದೇವಗನ್ ಸುಸ್ತಾಗಿದ್ದರು. ಕಿಚ್ಚನ ಕನ್ನಡಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಬುರ್ಜ್ ಖಲೀಫಾ ಮೇಲೆ ಕನ್ನಡ ಬಾವುಟ!
ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದುಬೈನ ಬುರ್ಜ್ ಖಲೀಫಾದಲ್ಲಿ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಮಾಡಲಾಗಿತ್ತು. ಅಂದು ಜಗತ್ತಿನ ಅತಿ ಎತ್ತರದ ಕಟ್ಟಡದ ಎಲ್ಇಡಿ ಪರದೆ ಮೇಲೆ 'ವಿಕ್ರಾಂತ್ ರೋಣ' ಚಿತ್ರದ ಸಣ್ಣ ಟೀಸರ್ ಜೊತೆಗೆ ಕನ್ನಡ ಬಾವುಟ ರಾರಾಜಿಸಿತ್ತು. ಇದು ಕೋಟ್ಯಾಂತರ ಕನ್ನಡಿಗರ ಹಿರಿಮೆ ಹೆಚ್ಚಿಸಿತ್ತು.


Click it and Unblock the Notifications











