ನಿಖಿಲ್ ಬರ್ತ್ಡೇ ಸಂಭ್ರಮ.. ಬಾಲ್ಕನಿಯಿಂದ ಕೈ ಬೀಸಿದ ಅವ್ಯಾನ್.. ಚುನಾವಣೆ ಆದ್ಮೇಲೆ ಸಿನಿಮಾ ಎಂದ ನಿಖಿಲ್
ಸ್ಯಾಂಡಲ್ವುಡ್ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಜೆಪಿ ನಗರದ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಈ ಸಂಭ್ರಮದಲ್ಲೇ ನಿಖಿಲ್ ನಟನೆಯ 4ನೇ ಸಿನಿಮಾ ಸಿನಿಮಾ ಘೋಷಣೆಯಾಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ 6 ವರ್ಷಗಳ ಹಿಂದೆ 'ಜಾಗ್ವಾರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 'ಸೀತಾರಾಮ ಕಲ್ಯಾಣ', 'ಕುರುಕ್ಷೇತ್ರ', 'ರೈಡರ್' ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಗಮನ ಸೆಳೆದರು. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾಗಿಯೂ ನಿಖಿಲ್ ಗುರ್ತಿಸಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹಾಗಾಗಿ ಪಕ್ಷ ಸಂಘಟನೆಯಲ್ಲಿ ನಿಖಿಲ್ ನಿರತರಾಗಿದ್ದಾರೆ. ಜೊತೆ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅಂದಹಾಗೆ ನಿಖಿಲ್ ನಟನೆಯ 'ಯದುವೀರ್' ಸಿನಿಮಾ ನಿಂತು ಹೋಗಿದೆ.
ಬೆಳಗ್ಗೆ ಅಭಿಮಾನಿಗಳು ಜೆಪಿ ನಗರದ ನಿಖಿಲ್ ನಿವಾಸದ ಮುಂದೆ ಜಮಾಯಿಸಿದ್ದರು. ಕಟೌಟ್, ಬ್ಯಾನರ್ಗಳನ್ನು ಕಟ್ಟಿ, ಕೇಕ್ಗಳನ್ನು ತಂದು ಕತ್ತರಿಸಿ, ಉಡುಗೊರೆ ನೀಡಿ ಸಂಭ್ರಮಿಸಿದರು. ಪತ್ನಿ ರೇವತಿ ಹಾಗೂ ಪುತ್ರ ಅವ್ಯಾನ್ ದೇವ್ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸಿದರು. ಚಂಡೇ ನೃತ್ಯ ತಂಡದ ಕಲಾವಿದರು ಕುಣಿಡು ಸಂಭ್ರಮಿಸಿದರು.

ಮತದಾರರ ಮನಸ್ಥಿತಿ ಬದಲಾಗಬೇಕು
ಹುಟ್ಟುಹಬ್ಬದ ಸಂಭ್ರಮಾಚರಣೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ "ಇವತ್ತು ಅಭಿಮಾನಿಗಳು ದೊಡ್ಡಮಟ್ಟದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ರಾತ್ರಿಯಿಂದಲೂ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿ ಪ್ರೀತಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ರಾಜಕಾರಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಮುಂದೆ ಬರುವ ಜನಪ್ರತಿನಿಧಿಗಳ ಮನಸ್ಥಿತಿ ಬದಲಾಗಬೇಕು. ಮತದಾರರ ಮನಸ್ಥಿತಿ ಬದಲಾಗಬೇಕು. ಜಾತಿಯ ವ್ಯಾಮೋಹಕ್ಕೆ ಒಳಗಾಗದೇ, ಕಷ್ಟಸುಖಕ್ಕೆ ಸ್ಪಂದಿಸುವವರ ಜೊತೆ ಯುವಕರು ಹೆಜ್ಜೆ ಹಾಕಬೇಕು" ಎಂದರು.

ಚುನಾವಣೆ ಮುಗಿದ ಮೇಲೆ ಸಿನಿಮಾ
"ಇನ್ನು 3 ಸಿನಿಮಾಗಳು ಪೈಪ್ಲೈನ್ನಲ್ಲಿದೆ. ಈಗ ಲಹರಿ ಸಂಸ್ಥೆ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಸದ್ಯ ಚುನಾವಣೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀನಿ. ಚುನಾವಣೆ ಮುಗಿದ ಮೇಲೆ ಮತ್ತೆ ಚಿತ್ರರಂಗಕ್ಕೆ ಬರ್ತೀನಿ. ಎಲ್ಲೂ ಹೋಗಲ್ಲ. ಸಿನಿಮಾಗಳನ್ನು ಮಾಡ್ತೀನಿ. ನನಗೆ ಒಂದು ವ್ಯಕ್ತಿತ್ವ ಇರುವುದು ದೇವೆಗೌಡರ ಮೊಮ್ಮಗ, ಕುಮಾರಸ್ವಾಮಿ ಮಗ ಎನ್ನುವುದನ್ನು ಹೊರತು ಪಡಿಸಿ ನನ್ನನೇ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದೇನೆ. ನನ್ನ 4 ಸಿನಿಮಾಗಳನ್ನು ಅಭಿಮಾನಿಗಳು ಪ್ರೀತಿಯಿಂದ ತಗೊಂಡಿದ್ದಾರೆ ಎನ್ನುವುದು ನನ್ನ ಅನಿಸಿಕೆ.

ಕಥೆ ಬಗ್ಗೆ ಈಗಲೇ ಮಾತು ಬೇಡ
"ಚಿತ್ರರಂಗ, ರಾಜಕಾರಣ ಎರಡರಲ್ಲೂ ನನ್ನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇವೆ. ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಕೆಲಸ ಮಾಡುತ್ತೇನೆ. ಮನೋಹರ್ ಹಾಗೂ ನಾವು ಬಹಳ ದಿನಗಳಿಂದ ಚರ್ಚೆ ಮಾಡ್ತಿದ್ದೀವಿ. ಲಹರಿ ಸಂಸ್ಥೆಯವರು ಸಿನಿಮಾ ಮಾಡಲು ಒಲವು ತೋರಿಸಿದರು. ಈಗಲೇ ಸಿನಿಮಾ ಕಥೆ ಬಗ್ಗೆ ಹೆಚ್ಚು ಮಾತನಾಡುವುದು ಬೇಡ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ" ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ನಿಖಿಲ್ 4ನೇ ಸಿನಿಮಾ ಘೋಷಣೆ
ಹೀರೊ ಆಗಿ ನಿಖಿಲ್ ಅಭಿನಯದ 4ನೇ ಸಿನಿಮಾವನ್ನು ಹುಟ್ಟುಹಬ್ಬದ ಸಂಭ್ರಮದಲ್ಲೇ ಘೋಷಿಸಲಾಗಿದೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮನೋ ಹರ ಆಕ್ಷನ್ ಕಟ್ ಹೇಳಲಿದ್ದಾರೆ. 'ಟಗರು' ಸಿನಿಮಾ ಖ್ಯಾತಿಯ ಕೆ. ಪಿ ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯ ಮನೋಹರನ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ಕಾಲೇಜು ಸ್ಟೂಡೆಂಟ್ ಪಾತ್ರದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಥೀಮ್ ಪೋಸ್ಟರ್ ಕೂಡ ರಿಲೀಸ್ ಆಗಿದ್ದು ನಿಖಿಲ್ ಜೆರ್ಸಿ ತೊಟ್ಟು ಸ್ಪೋರ್ಟ್ಸ್ ಪರ್ಸನ್ ಲುಕ್ನಲ್ಲಿ ದರ್ಶನ ಕೊಟ್ಟಿದ್ದಾರೆ.


Click it and Unblock the Notifications











