ರಾಘವೇಂದ್ರ ರಾಜ್ ಅವರಿಗೆ ಮತ್ತೊಂದು ಸರ್ಜರಿ?
ವರನಟ ಡಾ.ರಾಜ್ ಕುಮಾರ್ ಅವರ ದ್ವಿತೀಯ ಪುತ್ರ ಹಾಗೂ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಬುಧವಾರ (ಅ.16) ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಟ್ರೆಡ್ ಮಿಲ್ ವ್ಯಾಯಾಮ ಮಾಡುತ್ತಿರಬೇಕಾದರೆ ಕುಸಿದು ಬಿದ್ದಿದ್ದರು.
ಕೂಡಲೆ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಮಿದುಳಿನಲ್ಲಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಕುಸಿದು ಬಿದ್ದಿದ್ದರು. ವೈದ್ಯರು ಹೆಪ್ಪುಗಟ್ಟಿದ್ದ ರಕ್ತವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದರು. ಇನ್ನೊಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎನ್ನುತ್ತವೆ ಮೂಲಗಳು.

ರಾಜ್ ಕುಟುಂಬಿಕರು ಹಾಗೂ ಆಪ್ತರು ಆಸ್ಪತ್ರೆಯಲ್ಲೇ ಇದ್ದು ರಾಘಣ್ಣನ ಆರೋಗ್ಯದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ರಾಘಣ್ಣ ಅಪಾಯದಿಂದ ಪಾರಾಗಿದ್ದಾರೆ. ಕಿಂಚಿತ್ತೂ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದು ನಾವೆಲ್ಲಾ ನಿರಾಳವಾಗಿದ್ದೇವೆ ಎಂದಿದ್ದಾರೆ ಶಿವರಾಜ್ ಕುಮಾರ್.
ಇನ್ನು ರಾಘಣ್ಣ ಅವರನ್ನು ನೋಡಲು ಹೊರಗಿನ ಯಾರಿಗೂ ಅವಕಾಶ ನೀಡುತ್ತಿಲ್ಲ. ಅಭಿಮಾನಿಗಳು ಧಾವಂತದಿಂದ ಆಸ್ಪತ್ರೆಗೆ ಬರುವ ಅಗತ್ಯವಿಲ್ಲ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ನ ಸಕಲ ವಹಿವಾಟುಗಳನ್ನು ರಾಘಣ್ಣ ನೋಡಿಕೊಳ್ಳುತ್ತಿದ್ದು, ಪುನೀತ್ ಅವರಿಗೆ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.


Click it and Unblock the Notifications











