ಹಿರಿಯ ನಟಿ ಜಯಮಾಲಾ ಮಾತಿಗೆ ಬೆಲೆಯಿಲ್ಲ!
''ಕನ್ನಡ ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳನ್ನ ಕೊಂಡುಕೊಳ್ಳುತ್ತಾಯಿಲ್ಲ. ಹೀಗಿದ್ದರೂ, ಅದೇ ವಾಹಿನಿಗಳಲ್ಲಿ ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರಿಗೆ ನಟರು ಕಾಲ್ ಶೀಟ್ ನೀಡುತ್ತಿಲ್ಲ. ಕನ್ನಡ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಕಲಾವಿದರು ಸ್ಪಂದಿಸುತ್ತಿಲ್ಲ.''
- ಹೀಗಂತ ಕಳೆದ 17 ದಿನಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು ಧರಣಿ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ನಿರ್ಮಾಪಕ ಜಯಸಿಂಹ ಮುಸುರಿ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೂಡ ನಡೆಯುತ್ತಿದೆ. [ನಿರ್ಮಾಪಕರ ಉಪವಾಸ ಸತ್ಯಾಗ್ರಹ ; ಅಂಬರೀಶ್ ಹೊಸ ವರಸೆ]

ಕಲಾವಿದರು ಮತ್ತು ನಿರ್ಮಾಪಕರ ಮಧ್ಯೆ ಇರುವ ಬಿಕ್ಕಟ್ಟನ್ನ ಶಮನ ಮಾಡುವುದಕ್ಕೆ ನಿನ್ನೆ ಹಿರಿಯ ನಟಿ ಮತ್ತು ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದರು. [ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]
ನಿರ್ಮಾಪಕರ ಮನವೊಲಿಸೋಕೆ ನಟಿ ಜಯಮಾಲಾ ಎಷ್ಟೇ ಪ್ರಯತ್ನ ಪಟ್ಟರೂ, ಅವರ ಮಾತಿಗೆ ನಿರ್ಮಾಪಕರು ಬಗ್ಗಲಿಲ್ಲ. ಅವರ ಸಂಧಾನ ಪ್ರಯತ್ನ ವಿಫಲವಾಯ್ತು.

''ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅಂಬರೀಶ್ ಪರಿಹಾರ ಹುಡುಕುತ್ತಾರೆ. ಉಪವಾಸ ಬೇಡ. ನಾವೆಲ್ಲಾ ಒಂದು'' ಅಂತ ಜಯಮಾಲಾ ಕೇಳಿಕೊಂಡರೂ, ಸ್ಟಾರ್ ಕಲಾವಿದರೂ ಬರುವವರೆಗೂ ತಮ್ಮ ಪಟ್ಟನ್ನ ಬಿಡುವುದಿಲ್ಲ ಅಂತ ನಿರ್ಮಾಪಕರು ಹೇಳಿದರು. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

ಇದರಿಂದ ಬೇಸರಗೊಂಡ ಹಿರಿಯ ನಟಿ ಜಯಮಾಲಾ ಬಂದ ದಾರಿಗೆ ಸುಂಕವಿಲ್ಲದೆ ವಾಣಿಜ್ಯ ಮಂಡಳಿಯಿಂದ ನಿರ್ಗಮಿಸಿದರು. ''ನಮ್ಮ ಮಾತಿಗೆ ಅವರು ಬೆಲೆ ಕೊಡಲ್ಲ. ನಮಗೆಲ್ಲಾ ವಯಸ್ಸಾಗಿದೆ. ಅವರಿಗೆ ಸ್ಟಾರ್ ನಟರ ಮಾತು ಮುಖ್ಯ'' ಅಂತ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಯಮಾಲಾ ಮಾತನಾಡಿದರು. ಫಿಲ್ಮ್ ಚೇಂಬರ್ ಕಾರ್ಯದರ್ಶಿ ಬಾಮಾ ಹರೀಶ್ ಮತ್ತು ಅಧ್ಯಕ್ಷ ಥಾಮಸ್ ಡಿಸೋಜ ಮತ್ತು ಇತರರು ಉಪಸ್ಥಿತರಿದ್ದರು.


Click it and Unblock the Notifications











