ಹಿಮಾಲಯಕ್ಕೆ ನಟಿ ನಯನತಾರಾ ಅಧ್ಯಾತ್ಮಿಕ ಯಾತ್ರೆ
ಓಹೋ ಹಿಮಾಲಯ ಎಂದು ಅದೆಷ್ಟೋ ಮಂದಿ ಹಿಮಾಲಯದ ಸನ್ನಿಧಿಗೆ ಹೋಗಿಬರುವುದುಂಟು. ಕೆಲವರು ಮಧುಚಂದ್ರ ಎಂದು ಹೊರಟರೆ ಇನ್ನೂ ಕೆಲವರು ಮಾನಸಿಕ ನೆಮ್ಮದಿಗಾಗಿ ಅಧ್ಯಾತ್ಮಿಕ ಚಿಂತನೆಗಾಗಿ ಹಿಮಾಲಯಕ್ಕೆ ಹೋಗಿಬರುತ್ತಾರೆ. ಇದೀಗ ನಟಿ ನಯನತಾರಾ ಹಿಮಾಲಯಕ್ಕೆ ಅಧ್ಯಾತ್ಮಿಕ ಯಾತ್ರೆ ಹೋಗಿಬಂದಿದ್ದಾರೆ.
ಕಾಷಾಯ ವಸ್ತ್ರ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಅಲ್ಲಿನ ಪವಿತ್ರವಾದ ದೇವಾಲಯಗಳನ್ನು ಕಾಲ್ನಡಿಗೆಯಲ್ಲೇ ದರ್ಶನ ಪಡೆದುಕೊಂಡು ಬಂದಿದ್ದಾರೆ. ಮೂರು ವರ್ಷಗಳ ಹಿಂದೆ ಚೆನ್ನೈನ ಆರ್ಯ ಸಮಾಜದಲ್ಲಿ ಹಿಂದು ಧರ್ಮ ಸ್ವೀಕರಿಸಿದ ನಯನಿ ಅಂದಿನಿಂದಲೂ ಹಿಂದು ದೇವಾಲಯಗಳ ದರ್ಶನ ಭಾಗ್ಯ ಪಡೆಯುತ್ತಿದ್ದಾರೆ. [ನಟಿ ನಯನತಾರಾಗೆ ನಿಗೂಢ ಕಾಯಿಲೆಯಂತೆ]
ಈ ನಡುವೆ ಮದುವೆಯಾಗುತ್ತಿರುವ ಕಾರಣ ಚಿತ್ರರಂಗಕ್ಕೆ ಗುಡ್ ಹೇಳುತ್ತಿದ್ದೇನೆ ಎಂದು ಹೇಳಿ ಸುದ್ದಿ ಮಾಡಿದ್ದರು. ಅದಾದ ಸ್ವಲ್ಪ ದಿನಕ್ಕೇ ಮದುವೆ ಸುದ್ದಿಯೇ ಇಲ್ಲದೆ ಮತ್ತೆ ಚಿತ್ರಗಳಲ್ಲಿ ಬಿಜಿಯಾದರು. ಒಂದಷ್ಟು ಹಿಟ್ ಚಿತ್ರಗಳನ್ನೂ ಕೊಟ್ಟರು. ತಮಿಳಿನ ರಾಜಾ ರಾಣಿ ಹಾಗೂ ಆರಂಭಂ ಚಿತ್ರಗಳಿಂದ ಸಾಕಷ್ಟು ಸುದ್ದಿಯಾದರು.ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರಿಬ್ಬರಿಗೂ ಸಲ್ಲುವ ನಟನೆ, ಮಾದಕತೆ ಹೊಂದಿರುವ ನಯನ ತಾರಾ ತನ್ನ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಆರಂಭಂ ಚಿತ್ರದ ಮೂಲಕ ಮರು ಜೀವ ಪಡೆದುಕೊಂಡು ಮತ್ತೊಮ್ಮೆ ಕಾಲಿವುಡ್, ಟಾಲಿವುಡ್ ನ ಕ್ವೀನ್ ಆಗಲು ನಯನಿ ಹೆಜ್ಜೆ ಹಾಕಿದ್ದಾರೆ.
ನಟ ಸಿಂಬು ಅಲಿಯಾಸ್ ಸಿಲಂಬರಸನ್ ಜತೆ ಬ್ರೇಕ್ ಅಪ್ ನಂತರ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಜತೆ ಬ್ರೇಕ್ ಡ್ಯಾನ್ಸ್ ಮಾಡತೊಡಗಿದ್ದ ನಯನಿ ಕಂಡು ಸಂಸಾರಸ್ಥ ಪ್ರಭುದೇವನ ಕಣ್ಣು ಕುಕ್ಕಿತ್ತು. ಸಂಸಾರ ತಾಪತ್ರಯಗಳನ್ನು ಮೀರಿ ನಯನಿಯನ್ನು ಒಪ್ಪಿಕೊಂಡಿದ್ದ. ನಯನಿ ಕೂಡಾ ಕ್ರೈಸ್ತಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಪ್ರಭು ಜತೆ ಇನ್ನೇನು ಸಪ್ತಪದಿ ಇಡುತ್ತಾಳೆ ಎನ್ನುವಷ್ಟರಲ್ಲಿ ಮತ್ತೆ ಎಡವಿದ್ದು ಗೊತ್ತೇ ಇದೆ.


Click it and Unblock the Notifications












