ಡಿಜೆ ಹಳ್ಳಿ ಗಲಭೆ ಖಂಡಿಸಿ ನಟಿ ಪ್ರಣಿತಾ ಸುಭಾಷ್ ಟ್ವೀಟ್
ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರವನ್ನು ಕನ್ನಡ ನಟಿ ಪ್ರಣಿತಾ ಸುಭಾಷ್ ಖಂಡಿಸಿದ್ದಾರೆ.
Recommended Video
'ಡಿ.ಜೆ.ಹಳ್ಳಿಯಲ್ಲಿ ನಿನ್ನೆ ನಡೆದ ಘಟನೆಗಳನ್ನು ನಾನು ಖಂಡಿಸುತ್ತೇನೆ. ಪೊಲೀಸ್ ಸ್ಟೇಷನ್ ಹಾಗು ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನಾರ್ಹ!' ಎಂದು ಘಟನೆಯನ್ನು ವಿರೋಧಿಸಿದ್ದಾರೆ.
ಇದಕ್ಕೂ ಮುಂಚೆ ಕನ್ನಡ ನಟ ಚೇತನ್ ಸಹ ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. 'ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ಕುರಿತು ಮುಸ್ಲಿಂ ಜನ ಸಮೂಹ ನಡೆಸಿದ ಹಿಂಸಾಚಾರವೂ ಸಮರ್ಥನೀಯವಲ್ಲ. ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನು ಪ್ರಚೋದಿಸುತ್ತದೆ, ಕೋಮು ಸೌಹಾರ್ದತೆಯನ್ನು ಅಡ್ಡಿಪಡಿಸುತ್ತದೆ. ವಾಕ್ ಸ್ವಾತಂತ್ರ್ಯವನ್ನು ಗರಿಷ್ಠ ಮಟ್ಟಿಗೆ ಎತ್ತಿ ಹಿಡಿಯಬೇಕು ಮತ್ತು ಸರಿಯಾದ ಪ್ರಕ್ರಿಯೆಯ ಮೂಲಕ ವಿರೋಧಿಸಬೇಕು. ಎಲ್ಲಾ ಧರ್ಮಗಳು ಇಸ್ಲಾಂ ಸೇರಿದಂತೆ ವಿಮರ್ಶೆಗೆ ಮುಕ್ತವಾಗಿವೆ' ಎಂದಿದ್ದರು.

ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಪ್ರಣಿತಾ ಸುಭಾಷ್ ಅವುಗಳ ಅಭಿವೃದ್ದಿ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕೊರೊನಾ ವೈರಸ್ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಅನೇಕರಿಗೆ ಪ್ರಣಿತಾ ಫೌಂಡೇಶನ್ ಮೂಲಕ ಸಹಾಯಹಸ್ತ ಚಾಚಿದ್ದರು.
ಘಟನೆಯ ವಿವರ:
ಮಂಗಳವಾರ ರಾತ್ರಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲೆ ಸಾವಿರಾರು ದುಷ್ಕರ್ಮಿಗಳು ದಾಳಿ ನಡೆಸಿ, ಠಾಣೆಗೆ ಹಾಗೂ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಈ ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಹತ್ತಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ, ಘಟನೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


Click it and Unblock the Notifications











