ಯಡಿಯೂರಪ್ಪ ಜೊತೆ ಹೆಜ್ಜೆ ಹಾಕಲಿರುವ ನಟಿ ಶ್ರುತಿ

ಗುರುವಾರ (ಫೆ.7)ಯಡಿಯೂರಪ್ಪ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಶ್ರುತಿ ಅವರು ಪಾಲ್ಗೊಳ್ಳುವ ಮೂಲಕ ಕೆಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಕಾವೇರಿಗಾಗಿ ಯಡಿಯೂರಪ್ಪ ಪಕ್ಷಾತೀತ ಹೋರಾಟ ಹಮ್ಮಿಕೊಂಡಿದ್ದು, ಮೈಸೂರಿನಿಂದ ಬೆಂಗಳೂರಿನ ತನಕ ಪಾದಯಾತ್ರೆಗೆ ಮುಂದಾಗಿರುವುದು ಗೊತ್ತೇ ಇದೆ.
ಶ್ರುತಿ ಅವರು ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಚುನಾವಣೆ ವೇಳೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದರು. ಇದೆಲ್ಲದರ ಫಲವಾಗಿ ಅವರನ್ನು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯನ್ನಾಗಿ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ನಿರ್ದೇಶಕ ಎಸ್ ಮಹೇಂದರ್ ಅವರೊಂದಿಗೆ ವೈವಾಹಿಕ ಬಿಕ್ಕಟ್ಟುಗಳು ಬಹಿರಂಗವಾದವು. ವಿಚ್ಛೇದನ ನೀಡುವ ಮೂಲಕ ಅವರಿಂದ ಬೇರ್ಪಟ್ಟರು. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಶ್ರುತಿ ಅವರನ್ನು ಮಹಿಳಾ ಅಭಿವೃದ್ಧಿ ನಿಗಮದಿಂದ ಕೈಬಿಡಲಾಯಿತು.
ಬಳಿಕ ಅವರು ಚಿತ್ರಗಳಲ್ಲೂ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ರಾಜಕೀಯದಿಂದಲೂ ದೂರ ಉಳಿದರು. ಈಗ ಕೆಜೆಪಿ ಪಕ್ಷದ ಕಡೆಗೆ ವಾಲುವ ಮೂಲಕ ಎರಡನೇ ಇನ್ನಿಂಗ್ಸ್ ಗೆ ರೆಡಿಯಾಗುತ್ತಿದ್ದಾರೆ.
ಅತ್ತ ಅವರ ಮಾಜಿ ಪತಿ ಎಸ್ ಮಹೇಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಇಬ್ಬರೂ ಬಿಜೆಪಿ ಪಕ್ಷಕ್ಕೆ ಮಣ್ಣು ಹೊತ್ತಿದ್ದರು. ಈಗ ಇಬ್ಬರೂ ಬೇರೆ ಬೇರೆಯಾಗಿದ್ದು ಬೇರೆ ಬೇರೆ ಪಕ್ಷಗಳಲ್ಲಿ ತೊಡಗಿಕೊಂಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











