ನೀನೆ ಬರಿ ನೀನೆ ಎಂದ ಚಿಂಗಾರಿ ದೀಪಿಕಾ ಕಾಮಯ್ಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವ ಹಾಗೂ ಖ್ಯಾತ ಕೋರಿಯೋಗ್ರಾಫರ್ ಎ ಹರ್ಷ ನಿರ್ದೇಶನದ 'ಚಿಂಗಾರಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಕೊಡಗಿನ ಬೆಡಗಿ ದೀಪಿಕಾ ಕಾಮಯ್ಯ. ಚಿಂಗಾರಿ ಚಿತ್ರ ಹಾಕಿದ ಹಣಕ್ಕೆ ಮೋಸ ಮಾಡದಿದ್ದರೂ ಅಷ್ಟೇನೂ ಯಶಸ್ಸು ದಾಖಲಿಸಲಿಲ್ಲ. ನಾಯಕಿ ನಟಿ ದೀಪಿಕಾ ಕಾಮಯ್ಯ ನಂತರ ಯಾವುದೇ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ.
ಈಗ 'ನೀನೆ ಬರಿ ನೀನೆ' ಎಂಬ ಚಿತ್ರ ದೀಪಿಕಾ ಕಾಮಯ್ಯ ಕೈಸೇರಿದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬರು ತಶು ಕೌಶಿಕ್, ಇನ್ನೊಬ್ಬರು ಇದೀಗ ಆಯ್ಕೆಯಾಗಿರುವ ದೀಪಿಕಾ ಕಾಮಯ್ಯ. ನಮ್ ಏರಿಯಾಲಿ ಒಂದಿನ ಖ್ಯಾತಿಯ ನಟ ಅನೀಶ್ ತೇಜೇಶ್ವರ್ ಈ ಚಿತ್ರದ ನಾಯಕ. ಪತ್ರಕರ್ತ, ನಿರೂಪಕರಾಗಿ ಖ್ಯಾತರಾಗಿರುವ ದೀಪಕ್ ತಿಮ್ಮಯ ಈ ಚಿತ್ರಕ್ಕೆ ನಿರ್ದೇಶಕರು. ದೀಪಕ್ ತಿಮ್ಮಯ ಕಥೆಗೆ ಚಿತ್ರಕಥೆ ಹಾಗೂ ಸಂಭಾಷಣೆ ವಿನಾಯಕ್ ಭಟ್ ಅವರದು.
ಕಳೆದ ತಿಂಗಳು, ಜೂನ್ 13, 2012 ರಂದು ಸೆಟ್ಟೇರಿರುವ ಅನೀಶ್ ನಟನೆಯ ಈ ಚಿತ್ರವನ್ನು ನಿರ್ಮಿಸಲಿರುವವರು ಅಶೋಕ್ ಖೇಣಿ. ಇತ್ತೀಚಿಗೆ ಅವರದೇ ನಿರ್ಮಾಣ ಹಾಗೂ ಅರ್ಜುನ್ ಸರ್ಜಾ ನಾಯಕತ್ವದ 'ಪ್ರಸಾದ್' ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ಸ್ವಲ್ಪ ಕಾಲದ ಹಿಂದಷ್ಟೇ ಇದೇ ಸೋನು ನಿಗಮ್ ಧ್ವನಿಯಲ್ಲಿ 'ನೀನೆ ಬರಿ ನೀನೆ' ಶೀರ್ಷಿಕೆ ಹೊತ್ತ ಆಲ್ಬಾಂ ಕೂಡ ಹೊರತಂದಿದ್ದಾರೆ ಅಶೋಕ್ ಖೇಣಿ. ಈಗ ಅದೇ ಹೆಸರಿನ ಚಿತ್ರ ನಿರ್ಮಿಸುತ್ತಿದ್ದಾರೆ.
ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಈ ಮೊದಲು ಪೊಲೀಸ್ ಕ್ವಾಟ್ರಸ್, ನಮ್ ಏರಿಯಾಲಿ ಒಂದಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರಿಗೆ ಪರಿಚಿತರಾದವರು. ಇವರು ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಇತ್ತೀಚಿಗಷ್ಟೇ 'ನಮ್ ಲೈಫಲ್ಲಿ' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದು ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈಗವರು ನೀನೆ ಬರಿ ನೀನೆ ಚಿತ್ರೀಕರಣದಲ್ಲಿ ಬಿಜಿ.
ಚಿತ್ರದಲ್ಲಿ ಒಟ್ಟೂ ಆರು ಹಾಡುಗಳಿದ್ದು ಎಲ್ಲದಕ್ಕೂ ಸಾಹಿತ್ಯ ಬರೆದಿರುವವರು ಜಯಂತ್ ಕಾಯ್ಕಿಣಿ. ಸಂಗೀತ ಮನೋಮೂರ್ತಿಯವರದು. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಹಾಡುಗಳು ಈ ಚಿತ್ರದ ಬೋನಸ್. ಅಂದಹಾಗೆ, ಈ ಚಿತ್ರದಲ್ಲಿ ಸೋನು ನಿಗಮ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಅವರೂ ನಾಯಕರಲ್ಲೊಬ್ಬರೋ ಅಥವಾ ಖಳನಾಯಕರೋ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications












