ನಟಿ ಅದಿತಿ ವಿವಾಹ: ಆಮಂತ್ರಣ ಪತ್ರಿಕೆ ಮೇಲೆ ರಾರಾಜಿಸಿದ ನಟಿಯ ಕನ್ನಡ ಪ್ರೇಮ
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಅದಿತಿ ಪ್ರಭುದೇವ ಅವರ ವಿವಾಹ ನಿಶ್ಚಯವಾಗಿದ್ದು, ನಟಿಯ ಮದುವೆ ಆಮಂತ್ರಣ ಪತ್ರಿಕೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆಂಮತ್ರಣ ಪತ್ರಿಕೆಯ ವಿನ್ಯಾಸ ಹಾಗೂ ಪತ್ರಿಕೆಯ ಮೇಲಿರುವ ಸಾಲುಗಳನ್ನು ಓದಿ ಅಭಿಮಾನಿಗಳು ಅದಿತಿಯ ಕನ್ನಡ ಪ್ರೇಮಕ್ಕೆ ಶಭಾಷ್ ಹೇಳಿದ್ದಾರೆ.
ಯಶಸ್ವಿ ಎನ್ನುವವರನ್ನು ವಿವಾಹವಾಗುತ್ತಿರುವ ನಟಿ ಅದಿತಿ ಪ್ರಭುದೇವ, ತಮ್ಮ ಮದುವೆ ಆಮಂತ್ರಣ ಪತ್ರಿಕೆಯ ಮೇಲೆ ಕನ್ನಡಾಂಭೆಯ ಚಿತ್ರವನ್ನು ಹಾಕಿಸಿರುವುದಲ್ಲದೆ, 'ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ' ಎಂದು ಬರೆಸಿದ್ದಾರೆ. 'ಗುರು-ಹಿರಿಯರ ಆಶೀರ್ವಾದ', 'ಕುಲದೇವರ ಆಶೀರ್ವಾದ' ಎಂಬಿತ್ಯಾದಿಗಳನ್ನು ವಿವಾಹ ಪತ್ರಿಕೆಯ ಮೇಲೆ ಹಾಕಿಸುವ ಸಂಪ್ರದಾಯ ಇದೆ. ಆದರೆ ನಟಿ, ತಾಯಿ ಕನ್ನಡಾಂಭೆಯ ಆಶೀರ್ವಾದ ಎಂದು ಹಾಕಿಸಿ ಕನ್ನಡ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಇದೇ ಕಾರಣಕ್ಕೆ ಅದಿತಿಯ ಮದುವೆ ಆಮಂತ್ರಣ ಪತ್ರಿಕೆ ಎಲ್ಲೆಡೆ ವೈರಲ್ ಆಗುತ್ತಿದ್ದು, ಅದಿತಿ ಪ್ರಭುದೇವ ಅವರ ಕನ್ನಡ ಪ್ರೇಮಕ್ಕೆ ಭೇಷ್ ಎನ್ನುತ್ತಿದ್ದಾರೆ ನೆಟ್ಟಿಗರು.

ಕನ್ನಡ ಪ್ರೇಮವುಳ್ಳ ನಟಿ ಅದಿತಿ
ಅದಿತಿ ಪ್ರಭುದೇವ ಅವರ ವಿವಾಹ ನಿಶ್ಚಯ ಕಳೆದ ವರ್ಷವೇ ಆಗಿತ್ತಂತೆ, ಈಗ ಇದೇ ತಿಂಗಳು 27 ಮತ್ತು 28 ರಂದು ವಿವಾಹವಾಗುತ್ತಿದ್ದಾರೆ ಅದಿತಿ ಹಾಗೂ ಯಶಸ್ವಿ. ಈ ಜೋಡಿಯ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿವೆ. ಕನ್ನಡ ಪ್ರೇಮವುಳ್ಳ ಈ ನಟಿ ನವೆಂಬರ್ ತಿಂಗಳಿನಲ್ಲಿಯೇ ಹಸೆಮಣೆ ಏರುತ್ತಿರುವುದು ಮತ್ತೊಂದು ವಿಶೇಷ.

ಧಾರಾವಾಹಿ ಮೂಲಕ ನಟನೆಗೆ ಪ್ರವೇಶ
'ಗುಂಡ್ಯಾನ್ ಹೆಂಡ್ತಿ' ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ಅದಿತಿ ಪ್ರಭುದೇವ, 2017 ರಲ್ಲಿ 'ಧೈರ್ಯಂ' ಮೂಲಕ ಸಿನಿಮಾಗಳಲ್ಲಿ ನಟನೆ ಆರಂಭಿಸಿದರು. ಆಗಿನಿಂದ ಇತ್ತೀಚಿಗೆ ಬಿಡುಗಡೆ ಆದ 'ತೋತಾಪುರಿ' ಸಿನಿಮಾದ ವರೆಗೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅದಿತಿ ನಟಿಸಿದ್ದಾರೆ.

ಹಲವು ಸಿನಿಮಾಗಳು ಅದಿತಿ ಕೈಯಲ್ಲಿವೆ
ಈಗಲೂ ಅದಿತಿ ಕೈಯಲ್ಲಿ ಹಲವು ಸಿನಿಮಾಗಳಿವೆ, 'ಜಮಾಲಿಗುಡ್ಡ', 'ತೋತಾಪುರಿ 2' ಸಿನಿಮಾಗಳ ಚಿತ್ರೀಕರಣವನ್ನು ಅದಿತಿ ಈಗಾಗಲೇ ಮುಗಿಸಿದ್ದಾರೆ. ಅದರ ಹೊರತಾಗಿ, 'ದಿಲ್ಮಾರ್', ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್', '5ಡಿ', 'ಅಂದೊಂದಿತ್ತು ಕಾಲ', 'ಮಾಫಿಯಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಡಾಲಿ ಜೊತೆ ಮದುವೆ ಮಾಡಿಸಲು ಜಗ್ಗೇಶ್ ಯತ್ನ
'ತೋತಾಪುರಿ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ, ಅದಿತಿ ಹಾಗೂ ನಟ ಡಾಲಿ ಧನಂಜಯ್ಗೆ ಮದುವೆ ಮಾಡಿಸುವ ಪ್ರಯತ್ನವನ್ನು ನಟ ಜಗ್ಗೇಶ್ ಮಾಡಿದ್ದರಂತೆ. ಆದರೆ ಅದಿತಿಯವರ ತಾಯಿ ಅದಕ್ಕೆ ಒಪ್ಪಿರಲಿಲ್ಲ ಎಂದು ಜಗ್ಗೇಶ್ ಹೇಳಿದ್ದರು. ಅದಿತಿಗೆ ಮೊದಲೇ ಮದುವೆ ನಿಗದಿಯಾಗಿದ್ದ ಕಾರಣದಿಂದಲೇ ಅದಿತಿ ಹಾಗೂ ಅವರ ತಾಯಿ ಜಗ್ಗೇಶ್ ಅವರು ಕೊಟ್ಟ ಆಫರ್ ಅನ್ನು ನಿರಾಕರಿಸಿದ್ದಾರೆ ಎನಿಸುತ್ತದೆ.


Click it and Unblock the Notifications











