ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ, ಬಿಜೆಪಿ ಸೇರಲ್ಲ ಎಂದ ಅಂಬರೀಶ್!
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇತ್ತು. ಈ ನಡುವೆ ಕಾಂಗ್ರೆಸ್ ಗೆ ಕೈಕೊಟ್ಟು, ಅಂಬರೀಶ್ ಬಿಜೆಪಿ ಸೇರ್ತಾರೆ ಎಂಬ ಗುಸುಗುಸು ಕೂಡ ಕೇಳಿಬಂದಿತ್ತು.
ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನಲೆ ಅಂಬರೀಶ್ ರನ್ನ ಸೆಳೆಯಲು ಬಿಜೆಪಿ ಕಸರತ್ತು ನಡೆಸಿದೆ. ಕಾಂಗ್ರೆಸ್ ನಾಯಕರ ಜೊತೆಗೆ ಮುನಿಸಿಕೊಂಡಿರುವ ಅಂಬರೀಶ್ ಅವರನ್ನ ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಮುಂದಾಗಿದ್ದರು. ಈ ಸಂಬಂಧ ಹೈದರಾಬಾದ್ ನಲ್ಲಿ ಅಂಬರೀಶ್ ರನ್ನ ಕೇಂದ್ರದ ಮಾಜಿ ಸಚಿವ ಹಾಗೂ ನಟ ಕೃಷ್ಣಂ ರಾಜು ಭೇಟಿಯಾಗಿ ಆಹ್ವಾನ ನೀಡಿದ್ದರು.
ಹಾಗಾದ್ರೆ, ಅಂಬರೀಶ್ ಕಮಲ ಹಿಡಿಯುತ್ತಾರಾ ಅಂತ ಪ್ರಶ್ನೆ ಕೇಳಿದರೆ, ಅವರಿಂದ ಬರುವ ಉತ್ತರ 'ಖಂಡಿತ ಇಲ್ಲ'.

ಮಂಡ್ಯದ ಟಿಕೆಟ್ : ಹೊಸ ಬೇಡಿಕೆ ಮುಂದಿಟ್ಟ ಅಂಬರೀಶ್!
ನಟ ಕೃಷ್ಣಂ ರಾಜು ನೀಡಿದ ಆಹ್ವಾನವನ್ನ ಅಂಬರೀಶ್ ತಿರಸ್ಕರಿಸಿದ್ದಾರೆ. ''ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ನನಗೆ ಎಲ್ಲವನ್ನೂ ಕೊಟ್ಟಿದೆ'' ಎಂದು ಸ್ಪಷ್ಟ ಪಡಿಸಿದ್ದಾರೆ ಅಂಬರೀಶ್.
ಇನ್ನೂ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅಂಬರೀಶ್, ''ಆರೋಗ್ಯ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ಮಾಡಿಲ್ಲ'' ಎಂದರು.


Click it and Unblock the Notifications











