ಅಂಬಿ ಬಗೆಹರಿಸದೇ ಬಿಟ್ಟು ಹೋದ 'ಆ ಎರಡು' ಸಮಸ್ಯೆಗಳ ಭವಿಷ್ಯವೇನು.?
Recommended Video

ಕನ್ನಡ ಚಿತ್ರರಂಗಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಮನೆ ಸುಪ್ರೀಂ ಕೋರ್ಟ್ ಇದ್ದಂತೆ. ನಿರ್ಮಾಪಕ, ನಿರ್ದೇಶಕ, ಕಲಾವಿದ, ಕಾರ್ಮಿಕ ಹೀಗೆ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಯಾದರೂ ಅಂತಿಮವಾಗಿ ಬಗೆಹರಿಯುತ್ತಿದ್ದಿದ್ದು ಅಂಬಿ ಕೋರ್ಟ್ ನಲ್ಲಿ.
ಅಂಬರೀಶ್ ಸಿನಿಮಾ ಇಂಡಸ್ಟ್ರಿಯ ಟ್ರಬಲ್ ಶೂಟರ್. ಡಾ ರಾಜ್ ಕುಮಾರ್ ನಂತರ ಚಂದನವನದ ನಾಯಕನಾಗಿದ್ದ ಅಂಬಿ ಎಲ್ಲಿಯೂ ಇಂಡಸ್ಟ್ರಿ ದಿಕ್ಕುತಪ್ಪದಂತೆ ನೋಡಿಕೊಳ್ಳುತ್ತಿದ್ದರು.
ಆದ್ರೆ, ಅಂಬರೀಶ್ ಅವರ ಅಂತಿಮ ದಿನಗಳಲ್ಲಿ ಎರಡು ಸಮಸ್ಯೆಗಳು ಬಗೆಹರಿಯಲೇ ಇಲ್ಲ. ಅದರಲ್ಲೂ ಒಂದು ಸಮಸ್ಯೆಯಂತೂ ಅಂಬಿಯನ್ನ ತುಂಬಾ ಕಾಡಿದೆ. ಆ ಸಮಸ್ಯೆಗೆ ಹೇಗಾದರೂ ಮುಕ್ತಿ ನೀಡಬೇಕು ಎಂಬ ಆಸೆ ಜಲೀಲನಿಗಿತ್ತು. ಅಷ್ಟಕ್ಕೂ, ಆ ಎರಡು ಸಮಸ್ಯೆ ಯಾವುದು.?

ಅರ್ಜುನ್ ಸರ್ಜಾ ಮೀಟೂ ಸಮಸ್ಯೆ
ಅಂಬರೀಶ್ ಬಳಿ ಕೊನೆಯದಾಗಿ ಹೋದ ಸಮಸ್ಯೆ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಅವರ ಮೀಟೂ ಆರೋಪ. ಹೇಗಾದರೂ ಮಾಡಿ ಇದನ್ನ ವಾಣಿಜ್ಯ ಮಂಡಳಿಯಲ್ಲೇ ಬಗೆಹರಿಸಬೇಕು ಎಂದು ರೆಬೆಲ್ ಸ್ಟಾರ್ ಪ್ರಯತ್ನ ಪಟ್ಟರು. ಹಿರಿಯ ನಿರ್ದೇಶಕ, ನಟ, ನಿರ್ಮಾಪಕರನ್ನ ಆಹ್ವಾನಿಸಿ, ಇಬ್ಬರ ನಡುವೆ ಸಂಧಾನ ಮಾಡಿಸುವ ಪ್ರಯತ್ನ ಮಾಡಿದ್ದರು. ಆದ್ರೆ, ಈ ಸಮಸ್ಯೆ ಬಗೆಹರಿಸಲು ಆಗಲಿಲ್ಲ. ಅಂಬಿಯ ಮಾತು ಕೇಳದ ಇಬ್ಬರು ಕಾನೂನು ಹೋರಾಟ ಮಾಡುವುದಾಗಿ ಹೇಳಿ ಹೊರಟು ಹೋದರು.

ಬೇಸರ ಮಾಡಿಕೊಂಡಿದ್ದ ಅಂಬಿ
ಈ ವೇಳೆ ಅಂಬರೀಶ್ ಬೇಸರ ಮಾಡಿಕೊಂಡಿದ್ದರು. ನಾನೇನೋ ಸ್ವಲ್ಪ ದೊಡ್ಡವನು ಅಂತ ನನ್ನನ್ನು ಕರೆಯುತ್ತಾರೆ. ನಾನು ಏನಾದರೂ ಸಮಸ್ಯೆ ಇದ್ರೆ ಬಂದು ಎರಡು ಮಾತು ಹೇಳ್ತೀನಿ. ನಾನೇನೂ ಸುಪ್ರೀಂ ಅಲ್ಲ. ಆಗೊಂದು ಟೈಂ ಇತ್ತು. ನಾನೇ ಹೇಳಿದ್ದು ತೀರ್ಪು. ಹೇ ಬಿಡ್ರೋ ಅಂದ್ರೆ ಅಲ್ಲೇ ಮುಗಿತ್ತಿತ್ತು. ಆದ್ರೆ, ಈಗ ಆ ರೀತಿ ಇಲ್ಲ ಎಂದು ಬೇಜಾರು ಮಾಡಿಕೊಂಡಿದ್ದರು. ಬಹುಶಃ ಇದೇ ಅಂಬಿಯ ಬಳಿ ಬಂದಿದ್ದ ಕೊನೆಯ ಗಲಾಟೆ.

'ಆಪ್ತಮಿತ್ರ'ನ ಸ್ಮಾರಕ
ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗಿಲ್ಲ ಎನ್ನುವುದು ಅಂಬರೀಶ್ ಅವರ ಬಹುದೊಡ್ಡ ಕೊರಗಾಗಿತ್ತು. ಸುಮಾರು 9 ವರ್ಷ ಕಳೆದರೂ ಗೆಳೆಯನ ಸ್ಮಾರಕಕ್ಕೆ ಮುಕ್ತಿ ಕೊಡಿಸುವಲ್ಲಿ ಅಂಬಿಗೂ ಸಾಧ್ಯವಾಗಿರಲಿಲ್ಲ. ಆರಂಭದಲ್ಲಿ ನಾಲ್ಕೈದು ವರ್ಷ ಅಂಬರೀಶ್ ಅವರು ಪ್ರಯತ್ನ ಪಟ್ಟರಾದರೂ, ಇತ್ತೀಚಿನ ವರ್ಷಗಳಲ್ಲಿ ಈ ಬಗ್ಗೆ ಎಲ್ಲಿಯೂ ಮಾತನಾಡುತ್ತಿರಲಿಲ್ಲ.

ವಿಷ್ಣು ಬಗ್ಗೆ ಮಾತನಾಡಿದ್ರೆ ಮೌನ
ವಿಷ್ಣುವರ್ಧನ್ ಅವರ ಬಗ್ಗೆ ಯಾರಾದ್ರೂ ಪ್ರಶ್ನಿಸಿದರೇ, ಅಂಬರೀಶ್ ಮೌನಕ್ಕೆ ಜಾರುತ್ತಿದ್ದರು ಎಂದು ನಿರ್ಮಾಪಕ ಜಾಕ್ ಮಂಜು ಹೇಳುತ್ತಿದ್ದರು. ವಿಷ್ಣುವರ್ಧನ್ ಸತ್ತಿಲ್ಲ, ಬದುಕಿದ್ದಾನೆ ಎಂದು ಅಂಬಿ ಜೀವಿಸುತ್ತಿದ್ದರು. ಅದನ್ನ ಅಂಬಿ ಕೂಡ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಬಟ್, ಸ್ಮಾರಕ ವಿಚಾರಕ್ಕೆ ಬಂದ್ರೆ, ಅದೇನೋ ಅಡ್ಡಿ. ಕೆಲಸವೇ ನೆರವೇರುತ್ತಿರಲಿಲ್ಲ.

ಅಂಬಿ ಇದ್ದಾಗಲೇ ಆಗಿಲ್ಲ ಯಾಕೆ.?
ಅಂಬರೀಶ್ ಕೇವಲ ನಟ, ಕಲಾವಿದರ ಸಂಘದ ಅಧ್ಯಕ್ಷ ಮಾತ್ರ ಆಗಿರಲಿಲ್ಲ. ಅವರೊಬ್ಬರ ಮಾಜಿ ಕೇಂದ್ರ ಸಚಿವ, ರಾಜ್ಯ ಸಚಿವರಾಗಿದ್ದರ ರಾಜಕಾರಣಿ. ಅಂತಹ ವ್ಯಕ್ತಿಯಿದ್ದು ಕೂಡ ಸ್ನೇಹಿತನ ಸ್ಮಾರಕ ಯಾಕೆ ಆಗಿಲ್ಲ ಎಂಬುದಕ್ಕೆ ಉತ್ತರವಿಲ್ಲ.

ಅಂಬಿಯಿಲ್ಲದ ವಿಷ್ಣು ಸ್ಮಾರಕ
ಅಭಿಮಾನಿಗಳು, ಭಾರತಿ ವಿಷ್ಣುವರ್ಧನ್ ಅವರ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಅಂಬರೀಶ್ ನೆನಸಿಕೊಂಡರೇ, ಸ್ಮಾರಕ ಗಂಟೆಗಳಲ್ಲಿ ಆಗುತ್ತೆ ಎಂಬ ಮಾತಿತ್ತು. ಬಟ್, ಈಗ ಅಂಬರೀಶ್ ಅವರೇ ಇಲ್ಲ. ತಮ್ಮ ಆಪ್ತಮಿತ್ರನ ಹುಡುಕಿಕೊಂಡು ಇಹಲೋಕ ತ್ಯಜಿಸಿಬಿಟ್ಟರು. ಇಂತಹ ಕ್ಷಣದಲ್ಲಿ ಈಗ ವಿಷ್ಣು ಸ್ಮಾರಕದ ಬಗ್ಗೆ ಮತ್ತೆ ಪ್ರತಿಭಟನೆ, ಹೋರಾಟ ಆರಂಭವಾಗಿದೆ. ಈ ಸಮಸ್ಯೆ ಹೇಗೆ ಪರಿಹಾರವಾಗುತ್ತೋ ಕಾದು ನೋಡಬೇಕಿದೆ.


Click it and Unblock the Notifications











