ಅಂಬಿ ಉಮಾಶ್ರೀಗೆ ಸಿದ್ದು ಸಂಪುಟದಲ್ಲಿ ಮಂತ್ರಿಗಿರಿ
ಸಿದ್ದರಾಮಯ್ಯ ಸಂಪುಟದಲ್ಲಿ ಹಲವಾರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗಲಿಲ್ಲವೆಂದು ಅಸಮಾಧಾನದ ಬೆಂಕಿ ಹೊತ್ತಿಕೊಂಡಿದ್ದರೆ, ಕನ್ನಡ ಚಿತ್ರರಂಗದ ಇಬ್ಬರು ಸಿದ್ದು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಮಂಡ್ಯದಿಂದ ಆಯ್ಕೆಯಾಗಿರುವ 'ರೆಬೆಲ್ ಸ್ಟಾರ್' ಅಂಬರೀಷ್ ಮತ್ತು ತೇರದಾಳದಿಂದ ಗೆದ್ದಿರುವ 'ಕ್ಯಾರೆಕ್ಟರ್ ಆರ್ಟಿಸ್ಟ್' ಉಮಾಶ್ರೀ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಅಂಬರೀಷ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಲಭಿಸಿದ್ದರೆ, ಮಹಿಳಾ ಕೋಟಾದಲ್ಲಿ ಸ್ಥಾನ ಗಿಟ್ಟಿಸಿರುವ ಉಮಾಶ್ರೀ ಅವರಿಗೆ ರಾಜ್ಯ ದರ್ಜೆಯ ಸ್ಥಾನ ಲಭಿಸಿದೆ. ಖಾತೆ ಹಂಚಿಕೆ ಇನ್ನಷ್ಟೇ ಆಗಬೇಕಿದೆ. ಇವರಿಬ್ಬರೂ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿ ಸ್ಪರ್ಧಿಸಿ ಗೆದ್ದಿರುವ ವಿವಾದಾತ್ಮಕ ನಿರ್ಮಾಪಕ ಮುನಿರತ್ನ ನಾಯ್ಡು ಅವರಿಗೆ ಸಂಪುಟದಲ್ಲಿ ಸ್ಥಾನ ಲಭಿಸಿಲ್ಲ.

ಪತ್ನಿ ಸುಮಲತಾ ಅವರೊಂದಿಗೆ ಆಗಮಿಸಿದ್ದ ನಟ ಅಂಬರೀಷ್ ಅವರು ಯಾವುದೇ ದರ್ಜೆ, ಯಾವುದೇ ಖಾತೆ ಕೊಟ್ಟರೂ ಕಾಯಾ, ವಾಚಾ ಮನಸಾ ಕೆಲಸ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪತ್ರಕರ್ತರಿಗೆ ತಿಳಿಸಿದರು. ಉಮಾಶ್ರೀ ಅವರು ಕೂಡ, ನಾನು ಯಾವುದೇ ಖಾತೆಯ ಆಕಾಂಕ್ಷಿಯಾಗಿರಲಿಲ್ಲ. ಈಗ ಖಾತೆ ಸಿಕ್ಕಿರುವುದು ಸಂತೋಷ ತಂದಿದೆ ಎಂದು ನುಡಿದಿದ್ದಾರೆ.
ಇವರಿಬ್ಬರು ಸಂಪುಟ ಸೇರುವುದು ಖಾತ್ರಿಯಾಗುತ್ತಿದ್ದಂತೆ ಚಿತ್ರರಂಗದ ಮಂದಿಯಿಂದ ಶುಭಾಶಯದ ಸಂದೇಶಗಳು ಸುನಾಮಿಯಂತೆ ಹರಿದುಬರುತ್ತಿವೆ. ಮಂಡ್ಯದಲ್ಲಿ ಅಂಬರೀಷ್ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿದೆ. ಮಂಡ್ಯದ ಗಂಡು ಸಂಪುಟ ಸೇರಿದ ಖುಷಿಯಲ್ಲಿ ಸಿಹಿ ಹಂಚಿ, ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಅತ್ತ ತೇರದಾಳದಲ್ಲಿ ಕೂಡ ಸಂಭ್ರಮ ಮೇರೆ ಮೀರಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಕುಮಾರ್ ಬಂಗಾರಪ್ಪ ಅವರು ಸೊರಬದಲ್ಲಿ ಮತ್ತು ಬಿ.ಸಿ. ಪಾಟೀಲ್ ಅವರು ಹಿರೇಕೇರೂರಿನಲ್ಲಿ ಈ ಬಾರಿ ಪರಾಭವಗೊಂಡಿದ್ದರಿಂದ, ಸಂಪುಟ ಸೇರುವುದರಿಂದ ವಂಚಿತರಾಗಿದ್ದಾರೆ. ಕುಮಾರ್ ಬಂಗಾರಪ್ಪ ಅವರು ತನ್ನ ತಮ್ಮ ಮಧು ಬಂಗಾರಪ್ಪ ಅವರ ವಿರುದ್ಧ ಪರಾಭವಗೊಂಡಿದ್ದಾರೆ.


Click it and Unblock the Notifications











