"ವಿಷ್ಣು ಸಮಾಧಿಗೆ ಪೂಜೆ ಮಾಡಲು ಬಾಲಣ್ಣನ ಮಕ್ಕಳ ಅನುಮತಿ ಪಡೆಯಿರಿ ಅಭಿಮಾನಿಗಳೇ": ಅನಿರುದ್ಧ್ ಬಹಿರಂಗ ಪತ್ರ.
ಮೈಸೂರಿನಲ್ಲಿ ನಟ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ ನಿರ್ಮಾಣವಾಗಿದೆ. ಇದೇ ಜನವರಿ 29ರಂದು ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಬರುವಂತೆ ಅಭಿಮಾನಿಗಳಿಗೆ ವಿಷ್ಣು ಅಳಿಯ ಅನಿರುದ್ಧ್ ಬಹಿರಂಗ ಪತ್ರ ಬರೆದಿದ್ದಾರೆ.
2009 ಡಿಸೆಂಬರ್ 30ರಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗಿತ್ತು. ಹಾಗಾಗಿ ವಿಷ್ಣು ಕುಟುಂಬಸ್ಥರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾದರು. ಸರ್ಕಾರ ಸುಮಾರಿ 11 ಕೋಟಿ ವೆಚ್ಚದಲ್ಲಿ ಎರಡು ಮುಕ್ಕಾಲು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ. ವಿಷ್ಣು ಅಗಲಿ 12 ವರ್ಷಗಳ ನಂತರ ಸ್ಮಾರಕ ನಿರ್ಮಾಣವಾಗಿದೆ. ಆದರೆ ಬಹುತೇಕ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂದು ಬಯಸಿದ್ದರು.
ಕೆಲ ಅಭಿಮಾನಿಗಳಿಗೆ ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ಸ್ಮಾರಕ ನಿರ್ಮಾಣ ಆಗಿರುವುದು ಇಷ್ಟ ಇಲ್ಲ. ಇದೀಗ ಬಹಿರಂಗ ಪತ್ರ ಬರೆದು ಅನಿರುದ್ಧ್ ಅಭಿಮಾನಿಗಳನ್ನು ಸ್ಮಾರಕ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.

ಸ್ಟುಡಿಯೋದಲ್ಲಿ ಪೂಜೆ ನಡೆಯಲಿ
"ಅಭಿಮಾನ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಇತ್ಯಾದಿ ಮಾಡಿಕೊಂಡು ಬರಲಿ, ನಮಗೆ ಯಾವತ್ತೂ ಅಭ್ಯಂತರ ಇರಲಿಲ್ಲ, ಇರೋದೂ ಇಲ್ಲ. ಇದ್ದಿದ್ದಿರೆ ಅಭಿಮಾನಿಗಳಿಗೆ ಇಷ್ಟು ವರ್ಷ ಪೂಜೆ ಇತ್ಯಾದಿ ಮಾಡಿಕೊಂಡು ಬರೋದಕ್ಕೆ ಅವಕಾಶಾನೇ ಸಿಗುತ್ತಿರಲಲ್ಲ...
ನಮ್ಮ ಅಭ್ಯಂತರಾನೇ ಇಲ್ಲ ಅಂದಮೇಲೆ ನಮ್ಮ ಅನುಮತಿ ಯಾತಕ್ಕೆ? ಅನುಮತಿ ಕೊಡಬೇಕಾಗಿರೋದು ಬಾಲಣ್ಣರವರ ಮಕ್ಕಳು ಅಭಿಮಾನಿಗಳಿಗೆ."

10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ?
"ಅಭಿಮಾನಿಗಳೇ! ಅವರ ಅನುಮತಿ ಪಡೆದುಕೊಳ್ಳಿ, ನೆನಪಿಡಿ ಅದು ಅವರ ಜಾಗ, ಎಲ್ಲಾ ಸಮಸ್ಯೆ ಬಗೆಹರಿಯತ್ತೆ. ಹಾಗೇನೆ ನಾವು ಯಾವತ್ತೂ ಕೂಡ ಅದು ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸೋದೂ ಇಲ್ಲ. ಆದರೆ ಬಾಲಣ್ಣರವರ ಕುಟುಂಬದವರ ಅಪೇಕ್ಷೆ ಈಗ ಏನು? 10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ? 6 1/2 ವರ್ಷಗಳು ಕೇಳಿ, ಕೇಳಿ, ಎಷ್ಟೇ, ಹೇಗೆೇ ಪ್ರಯತ್ನ ಪಟ್ಟರೂ, ಆಗ ಅವರು ಮನಸ್ಸು ಮಾಡಲಿಲ್ಲ, ಅಪ್ಪಾವರನ್ನ, ಅಮ್ಮಾವರನ್ನ ಅವಮಾನ ಮಾಡಿದ್ದಾರೆ. ಕೊನೆಗೆ ಸರಕಾರನೇ ಬೇರೆಕಡೆ ಮಾಡಿ ಅಂತ ಹೇಳಿದಮೇಲೆ ನಾವು ನಿರ್ಧಾರ ತೆಗೆದುಕೊಳ್ಳೇ ಬೇಕಾಯಿತು."

ಜ.29ಕ್ಕೆ ಸ್ಮಾರಕ ಲೋಕಾರ್ಪಣೆ
"ತುಂಬಾ ನೊಂದುಕೊಂಡಿದ್ದೇವೆ, ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದೇವೆ, ಹೋರಾಡಿದ್ದೇವೆ...ನಮ್ಮ ಪ್ರಯತ್ನಗಳ ಬಗ್ಗೆ, ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ...
ಸರಕಾರ ಈಗಾಗಲೆ ಮೈಸೂರಲ್ಲಿ ಸ್ಮಾರಕ ಮಾಡಾಗಿದೆ...ಅಲ್ಲಿ ಅಪ್ಪಾವರ ಅಸ್ಥಿಯನ್ನು ಪೂಜಾವಿಧಿಯಿಂದ ಇಟ್ಟು ಅದರ ಮೇಲೆ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ...ಇದೇ ತಿಂಗಳು 29ಕ್ಕೆ, ಭಾನುವಾರ ಲೋಕಾರ್ಪಣೆ ಆಗಲಿದೆ. ನಾವೂ ಅಲ್ಲಿ ಅತ್ಯಂತ ಶ್ರದ್ಧೆಯಿಂದ ನಮ್ಮ ನಮನಗಳನ್ನು ಸಲ್ಲಿಸುತ್ತೇವೆ."

ಕಹಿ ಭಾವನೆ ಮರೆತು ಬನ್ನಿ
"ಅಭಿಮಾನಿಗಳೇ! ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ, ಯಾವುದೇ ಕಹಿ ಭಾವನೆಗಳು ಇಟ್ಟುಕೊಳ್ಳದೇ, ಬಂದು ಸಂಭ್ರಮಿಸಿ, ಅಪ್ಪಾವರಗೆ ತಮ್ಮ ನಮನಗಳನ್ನು , ಶ್ರದ್ಧಾಂಜಲಿಯನ್ನು ಸಲ್ಲಿಸಿ. ಧನ್ಯವಾದಗಳು, ಎಂದು ಅನಿರುದ್ಧ್ ಪತ್ರದಲ್ಲಿ ಬರೆದುಕೊಂಡಿದ್ದಾರೆ."


Click it and Unblock the Notifications











