ಕೃತಿ ಕರಬಂಧಗೆ ಏರ್ ಪೋರ್ಟ್ ನಲ್ಲಿ ಆಗಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಸೂಪರ್ ರಂಗ' ಚಿತ್ರದಲ್ಲಿ ಸೂಪರ್ ಆಗಿ ಅಭಿನಯಿಸಿರುವ 'ಗೂಗ್ಲಿ' ಬೆಡಗಿ ಕೃತಿ ಕರಬಂಧಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಕಿರಿಕಿರಿ ಪ್ರಸಂಗವೊಂದು ಎದುರಾಗಿದೆ.
ಈ ಘಟನೆ ನಡೆದು ಬಹಳ ದಿನಗಳಾಗಿದ್ದರೂ ಅವರು ಆ ನೋವನ್ನು ಈಗ ತೋಡಿಕೊಂಡಿದ್ದಾರೆ. ನನಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂಬ ಸದುದ್ದೇಶದಿಂದ ಅವರಿಗ ಆದ ಕಹಿ ಘಟನೆಯನ್ನು ತಮ್ಮ ಫೇಸ್ ಬುಕ್ ನಲ್ಲಿ ಇಂಗ್ಲಿಷ್ ನಲ್ಲಿ ಸುದೀರ್ಘವಾಗಿ ಬರೆದು ಹಾಕಿಕೊಂಡಿದ್ದಾರೆ.
ಅವರು ಆಗಸ್ಟ್ ತಿಂಗಳ 16ನೇ ತಾರೀಖಿನಂದು ಬೆಂಗಳೂರಿನಿಂದ ಹೈದರಾಬಾದಿಗೆ ಹೋಗಲು ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ದರಂತೆ. ಏರ್ ಪೋರ್ಟ್ ನಲ್ಲಿ ಚೆಕ್ ಇನ್ ಮಾಡುವಾಗ ಅಲ್ಲಿನ ಅಧಿಕಾರಿಯ ಜೊತೆ ಮಾತಿನ ಚಕಮಕಿ ನಡೆದಿದೆ.ಹೆಚ್ಚಿನ ಲಗೇಜ್ ಇದೆ ಎಂದು ಅವರ ಬಳಿ ಹೆಚ್ಚಿನ ದುಡ್ಡು ಪೀಕಿದ್ದಾರಂತೆ ಚೆಕ್ ಇನ್ ಅಧಿಕಾರಿ. ಜೊತೆಗೆ ಅವರ ಜೊತೆ ಬಹಳ ನಿಷ್ಠುರವಾಗಿಯೂ ನಡೆದುಕೊಂಡಿದ್ದಾರಂತೆ. ಇದರಿಂದ ಕೃತಿ ಅವರ ಮನಸ್ಸಿಗೆ ಸಹಜವಾಗಿಯೇ ಬಹಳ ಬೇಜಾರಾಗಿದೆಯಂತೆ.
ತಾನು ಒಬ್ಬ ನಟಿಯಾಗಿ ಈ ರೀತಿ ಮಾತನಾಡುತ್ತಿಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ, ಪ್ರಯಾಣಿಕಳಾಗಿ ಈ ಕಿರಿಕಿರಿ ಅನುಭವಿಸಿದ್ದೇನೆ. ಬೇರೆ ಹೆಣ್ಣುಮಕ್ಕಳಿಗೆ ಈ ರೀತಿ ಆಗುವುದು ಬೇಡ ಎಂದು ಈ ಪತ್ರ ಬರೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಕೃತಿ. ಅವರ ಪತ್ರ ಏರ್ ಇಂಡಿಯಾ ಕಣ್ಣಿಗೆ ಬಿದ್ದಿದ್ದರೆ ಅಷ್ಟೇ ಸಾಕಲ್ಲವೇ?


Click it and Unblock the Notifications












