ಕಲ್ಲಿನಕೇರಿ ಮಲ್ಲನಗೌಡನ ಕಿರಿಯ ಸೊಸೆ ಭಾಗೀರಥಿ
ಬರುವ ತಿಂಗಳ ಎಂಟನೇ ತಾರೀಖು 'ಭಾಗಿರತಿ'ಯನ್ನ ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಪ್ರಕಟಣೆ ಹೊರಡಿಸಿದ್ದಾರೆ ಶ್ರೀನಿವಾಸ್. ಆರ್ಟ್ ಸಿನಿಮಾವಾದರೂ ಕಮರ್ಷಿಯಲ್ ಸಿನಿಮಾಗಳನ್ನ ತೆರೆಗೆ ತರಲು ಏನೇನು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೋ, ಅದೇ ರೀತಿ ಭಾಗೀರಥಿಯನ್ನೂ ತೆರೆಗೆ ತರಲಾಗುತ್ತದೆ ಎಂದು ಹೇಳಿದ್ದಾರೆ ಶ್ರೀನಿವಾಸ್. ಸುಮಾರು ನಲವತ್ತಕ್ಕೂ ಹೆಚ್ಚು ಥೇಟರುಗಳಲ್ಲಿ ಭಾಗೀರಥಿ ಬಿಡುಗಡೆಯಾಗಲಿದೆ.
ರಾಜ್ಯದ ಒಂದೇ ಒಂದು ಚಿತ್ರಮಂದಿರದಲ್ಲಿ ಕೂಡಾ ಬಿಡುಗಡೆಯಾಗದೆ ಅತ್ಯುತ್ತಮ ಚಿತ್ರ ಅಂತೆಲ್ಲ ಹೆಸರು ಗಳಿಸಿದ ಚಿತ್ರಗಳಿವೆ. ಜನರ ವೀಕ್ಷಣೆಗೇ ಸಿಕ್ಕದಿದ್ದರೂ, ಅವು ಅತ್ಯುತ್ತಮ ಚಿತ್ರ ಆಗುವ ವಿಪರ್ಯಾಸ ಹೇಗೆಂದು ಇವತ್ತಿಗೂ ನಿಗೂಢ. ಪುಣ್ಯಕ್ಕೆ ಶ್ರೀನಿವಾಸ್ ಆ ಕೆಟಗರಿಗೆ ಸೇರಿಲ್ಲ. 'ಭಾಗಿರತಿ' ನಿರ್ದೇಶಕ ಬರಗೂರು ರಾಮಚಂದ್ರಪ್ಪನವರಿಗೇ ದಿಗ್ಭ್ರಮೆಯಾಗುವಂತೆ ಅವರು ಇದರ ಪ್ರಚಾರ ಹಾಗು ಬಿಡುಗಡೆಗೆ ಹಣ- ಶ್ರಮ ಖರ್ಚು ಮಾಡುತ್ತಿದ್ದಾರೆ. ಹಾಗಾಗಿ ಜೂನ್ ಎಂಟನೆ ತಾರೀಖು ಭಾಗಿರತಿಯನ್ನ ಆಸಕ್ತ ಪ್ರೇಕ್ಷಕರು ನೋಡಿ ಕಣ್ತುಂಬಿಕೊಳ್ಳಬಹುದು.
ಈ ಚಿತ್ರದ ಕೇಂದ್ರ ಪಾತ್ರ ಭಾಗೀರಥಿ. ಕಲ್ಲಿನಕೇರಿ ಮಲ್ಲನಗೌಡನ ಕಿರಿಯ ಸೊಸೆ. ಈಕೆಯ ಗಂಡ ಮಾದೇವರಾಯ ದೊರೆಯ ದಂಡಿನಲ್ಲಿ ಸೈನಿಕ. ಮದುವೆ ಬಳಿಕ ಆತ ದಂಡಿಗೆ ಹೋಗುತ್ತಾನೆ. ಇತ್ತೆ ಕೆರೆಗೆ ನೀರು ಬರುವುದಿಲ್ಲ. ಮಲ್ಲನಗೌಡನ ಹಿರಿಯ ಸೊಸೆಯನ್ನು ಕೆರೆಗೆ ಆಹಾರ (ಆತ್ಮಬಲಿ) ಮಾಡಬೇಕೆಂದು ಜೋಯೀಸರು ಪರಿಹಾರ ಸೂಚಿಸುತ್ತಾರೆ.
ಆದರೆ ಮಲ್ಲನಗೌಡರಿಗೆ ಮನಸ್ಸು ಬರುವುದಿಲ್ಲ. ಕಿರಿ ಸೊಸೆಯಾದರೂ ಸರಿ ಎಂದು ಜೋಯೀಸರು ಸೂಚಿಸುತ್ತಾರೆ. ಈ ಮಾತುಗಳನ್ನು ಕೇಳಿಸಿಕೊಂಡ ಕಿರಿಸೊಸೆ ಭಾಗೀರಥಿ ತಳಮಳಿಸುತ್ತಾಳೆ. ತವರಿಗೆ ಹೋಗಿ ತಂದೆತಾಯಿಗೆ ವಿಷಯ ತಿಳಿಸಲು ಸಾಧ್ಯವಾಗದೆ ಸಂಕಟಪಡುತ್ತಾಳೆ. ಕಡೆಗೆ ಕೆರೆಗೆ ಹಾರಿ ಪ್ರಾಣ ಬಿಡುತ್ತಾಳೆ. ದಂಡಿನಿಂದ ಆಕೆಯ ಪತಿ ಮಾದೇವರಾಯ ವಿಷಯ ತಿಳಿದು ತಾನೂ ಕೆರೆಗೆ ಹಾರಿ ಸಾಯುತ್ತಾನೆ. ಇದಿಷ್ಟು ಮೂಲಕತೆಯನ್ನಿಟ್ಟುಕೊಂಡು ಬರಗೂರರು ಸಿನಿಮಾ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












