ಕನಸುಗಾರ ರವಿಚಂದ್ರನ್ ಜೊತೆ ಒಂದು ದಿನ
ಕರ್ನಾಟಕ ಚಲನಚಿತ್ರ ಅಕಾಡೆಮಿ ತುಂಬು ಪ್ರೀತಿಯಿಂದ ನಡೆಸುಕೊಂಡು ಬರುತ್ತಿರುವ ವಿಶಿಷ್ಟ, ವಿಭಿನ್ನ ಕಾರ್ಯಕ್ರಮ ಬೆಳ್ಳಿಹೆಜ್ಜೆ. ಈ ಕಾರ್ಯಕ್ರಮ ಪ್ರತಿ ತಿಂಗಳ ಎರಡನೇ ಶನಿವಾರ ಆಯೋಜಿಸಲಾಗುತ್ತಿದೆ. ಈಗಾಗಲೆ ಹಲವಾರು ಕಲಾವಿದರು, ತಂತ್ರಜ್ಞರು ಬೆಳ್ಳಿತೆರೆ ಮೇಲೆ ಮೂಡಿಸಿದ ತಮ್ಮ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳಾಗುತ್ತಿದೆ. ಇದೇ ಸಂದರ್ಭದಲ್ಲಿ 'ಬೆಳ್ಳಿಹೆಜ್ಜೆ'ಯನ್ನು ಭಿನ್ನವಾಗಿ ಆಚರಿಸಲು ಅಕಾಡೆಮಿ ಮುಂದಾಗಿದೆ. ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್, ಅಂಜದಗಂಡು ರವಿಚಂದ್ರನ್ ಅವರನ್ನು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಸೆಪ್ಟೆಂಬರ್ 12ರ ಶುಕ್ರವಾರ ಕಾರ್ಯಕ್ರಮ ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಅಂದು ರವಿಚಂದ್ರನ್ ಅವರು ತಮ್ಮ ವೃತ್ತಿಬದುಕಿನ ಏರಿಳಿತಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸಹೋದ್ಯೋಗಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಐವತ್ತರ ಸಂಭ್ರಮಾಚರನೆ ಅಂಗವಾಗಿ ಬೆಳ್ಳಿಹೆಜ್ಜೆಯಲ್ಲಿ ಭಾಗವಹಿಸಿದ ಅತಿಥಿಗಳ ಕುರಿತಾದ ನೆನಪಿನ ಸಂಚಿಕೆಯನ್ನೂ ಬಿಡುಗಡೆ ಮಾಡಲಾಗುತ್ತಿದೆ. ಅಪರೂಪದ ಛಾಯಾಚಿತ್ರಗಳ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಇದುರವರೆಗೂ ಬೆಳ್ಳಿಹೆಜ್ಜೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಸರೋಜಾದೇವಿ, ಪ್ರತಿಮಾ ದೇವಿ, ದ್ವಾರಕೀಶ್, ಜಯಂತಿ, ಲೀಲಾವತಿ, ಭಾರತಿ ವಿಷ್ಣುವರ್ಧನ್, ಪಿ.ಬಿ.ಶ್ರೀನಿವಾಸ್, ಪ್ರಣಯರಾಜ ಶ್ರೀನಾಥ್, ಅನಂತನಾಗ್, ಸಿದ್ದಲಿಂಗಯ್ಯ, ಭಗವಾನ್, ಹಂಸಲೇಖ, ರಮೇಶ್ ಅರವಿಂದ್ ಮುಂತಾದವರು ತಾವು ನಡೆದ ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಇವರೆಲ್ಲರನ್ನೂ ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











