'ಶೃಂಗಾರ' ಚಿತ್ರದಿಂದ ಹೊರಬಿದ್ದ ಕನಸುಗಾರ ಕ್ರೆಜಿಸ್ಟಾರ್
ಕವಿರತ್ನ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿರುವ 'ಶೃಂಗಾರ' ಚಿತ್ರದಿಂದ ಪ್ರೇಮಲೋಕದ ಮಾಂತ್ರಿಕ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೊರಬಿದ್ದಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ, ಚಿತ್ರದ ನಿರ್ಮಾಪಕರು ತಮಗೆ ಇದುವರೆಗೂ ಸಂಭಾವನೆ ನೀಡಿಲ್ಲ ಎಂಬುದು.
ಚಿತ್ರದ ಮುಹೂರ್ತದಂದು ಸಂಭಾವನೆ ನೀಡುವುದಾಗಿ ಚಿತ್ರದ ನಿರ್ಮಾಪಕ ಶಂಕರ್ ಹೇಳಿದ್ದರು. ಆದರೆ ಇದುವರೆಗೂ ತಮಗೆ ಯಾವುದೇ ಸಂಭಾವನೆ ನೀಡಿಲ್ಲ. ಹಾಗಾಗಿ ಈ ಚಿತ್ರದಿಂದ ತಾವು ಹಿಂದೆ ಸರಿಯುತ್ತಿರುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ತನ್ನ ಪುತ್ರರ 'ಅಪೂರ್ವ' ಹಾಗೂ "ರಣಧೀರ, ಪ್ರೇಮಲೋಕದಲ್ಲಿ.." ಚಿತ್ರಗಳಲ್ಲಿ ತೊಡಗಿಕೊಳ್ಳುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. [ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್]

ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು, ಇಂದು (ಜು.14) ಸಂಜೆ ರವಿ ಅವರ ಬಳಿ ಮಾತನಾಡುತ್ತೇನೆ. ಸಮಸ್ಯೆ ಏನು ಎಂದು ತಿಳಿದುಕೊಂದು ಬಗೆಹರಿಸುತ್ತೇನೆ. ಅವರು ಮತ್ತೆ ಶೃಂಗಾರ ಚಿತ್ರದಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ರವಿಚಂದ್ರನ್ ಮಾತ್ರ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಅದ್ವಿತೀಯ ತಾರೆ ಲಕ್ಷ್ಮಿ ರೈ ಹಾಗೂ ಅಪೂರ್ವ ತಾರೆ ರಾಗಿಣಿ ದ್ವಿವೇದಿ. ಜಿ.ಎಸ್.ವಿ.ಸೀತಾರಾಮ್ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.
ಡೇಟ್ಸ್ ಸಿಗಲಿಲ್ಲ ಎಂಬ ಕಾರಣ ನೀಡಿ ಒಂದು ಚಿತ್ರದಿಂದ ನಾಯಕಿ ಬದಲಾಗುವುದು, ಆ ಜಾಗಕ್ಕೆ ಮತ್ತೊಬ್ಬ ನಾಯಕಿ ಬರುವುದು ಸ್ಯಾಂಡಲ್ ವುಡ್ ನಲ್ಲಿ ಸರ್ವೇ ಸಾಮಾನ್ಯ ಸಂಗತಿ. ಆದರೆ ಚಿತ್ರದ ಹೀರೋ ಒಬ್ಬರು ಚಿತ್ರದಿಂದ ಹೊರಬಿದ್ದಿದ್ದಾರೆ ಎಂದರೆ ಕೇವಲ ಸಂಭಾವನೆ ಅಷ್ಟೇ ಅಲ್ಲದೆ ಇನ್ನೇನೋ ಬಲವಾದ ಕಾರಣ ಇದ್ದೇ ಇರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)


Click it and Unblock the Notifications











