ಅವರು ಕನ್ನಡವನ್ನೇ ಮಾತನಾಡಲ್ಲ; ಬೇರೆ ರಾಜ್ಯಗಳಿಗೆ ಹೋಗಿ ಕನ್ನಡ ಮರೆತವರಿಗೆ ಚಾಟಿ ಬೀಸಿದ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ತಮ್ಮ ನೆಚ್ಚಿನ ನಟ ದರ್ಶನ್ ಅಭಿನಯದ ಹೊಸ ಚಿತ್ರವನ್ನು ಸುಮಾರು ಇಪ್ಪತ್ತು ತಿಂಗಳುಗಳ ಬಳಿಕ ಚಿತ್ರಮಂದಿರದಲ್ಲಿ ವೀಕ್ಷಿಸಲು ಅಭಿಮಾನಿಗಳು ಕಾತರತೆಯಿಂದ ಕಾಯುತ್ತಿದ್ದಾರೆ. ಇನ್ನು ಸರ್ಕಾರಿ ಶಾಲೆಯ ಮಹತ್ವದ ಕುರಿತಾಗಿ ತಯಾರಾಗಿರುವ ಕ್ರಾಂತಿ ಚಿತ್ರ ಒಂದೊಳ್ಳೆ ಸಂದೇಶವನ್ನೊಂದಿದ್ದು ಕ್ರಾಂತಿ ಮಾಡಲಿದೆ ಎಂಬ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಚಿತ್ರದ ಹೈಪ್ ಹೆಚ್ಚಿಸಲು ಚಿತ್ರತಂಡ ಹಾಡುಗಳನ್ನು ವಿಭಿನ್ನವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದೆ.
ಇದರ ನಡುವೆಯೇ ಚಿತ್ರದ ಪ್ರಚಾರ ಕಾರ್ಯಗಳನ್ನು ಯುಟ್ಯೂಬ್ ಸಂದರ್ಶನಗಳ ಮೂಲಕ ಚಿತ್ರತಂಡ ಮಾಡುತ್ತಿದ್ದು, ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸಂದರ್ಶನಗಳಲ್ಲಿ ಭಾಗವಹಿಸಿ ಮಾತನಾಡಿರುವುದು ವಿಶೇಷವಾಗಿದೆ. ಸಂದರ್ಶನದಲ್ಲಿ ಕ್ರಾಂತಿ ಚಿತ್ರದ ಬಗ್ಗೆ ಮಾತ್ರವಲ್ಲದೇ ಬೇರೆ ವಿಷಯಗಳ ಬಗ್ಗೆಯೂ ಸಹ ಮಾತನಾಡಿರುವ ದರ್ಶನ್ ಹೇಳಿಕೆಗಳು ವೈರಲ್ ಆಗಿದ್ದು, ಒಳ್ಳೆಯ ವೀಕ್ಷಣೆಗಳನ್ನೂ ಸಹ ಪಡೆದುಕೊಳ್ಳುತ್ತಿದೆ.
ಇನ್ನು ಕ್ರಾಂತಿ ಚಿತ್ರ ಅಕ್ಷರ ಕ್ರಾಂತಿ ಮಾಡಲಿದೆ ಎಂದು ಈಗಾಗಲೇ ಹೇಳಿರುವ ಚಿತ್ರತಂಡ ಚಿತ್ರದಲ್ಲಿ ಕನ್ನಡ ಭಾಷೆಯ ಮಹತ್ವವನ್ನು ಸಾರಿ ಹೇಳಲಿದೆ ಎನ್ನುವುದು ಖಾತರಿಯಾಗಿದೆ. ಹೀಗಾಗಿಯೇ ಸಂದರ್ಶನವೊಂದರಲ್ಲಿ ಕನ್ನಡ ಭಾಷೆ ಹಾಗೂ ಭಾಷಾಭಿಮಾನದ ಕುರಿತಾದ ಚರ್ಚೆ ಎದುರಾದಾಗ ಮುಕ್ತವಾಗಿ ಮಾತನಾಡಿದ ದರ್ಶನ್ ಚಿತ್ರರಂಗಗಳಲ್ಲಿನ ಭಾಷಾಭಿಮಾನದ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ.

ಬೇರೆ ಭಾಷೆಯವರು ಕನ್ನಡ ಮಾತನಾಡಲ್ಲ
'ನ್ಯೂಸ್ ಅಲರ್ಟ್' ಎಂಬ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ದರ್ಶನ್ ಪರಭಾಷಾ ನಟರು, ನಟಿಯರು ಹಾಗೂ ನಿರ್ದೇಶಕರು ಯಾವುದೇ ಸಂದರ್ಶನದಲ್ಲಾದರೂ ಅವರ ಭಾಷೆಯಲ್ಲಿ ಮಾತನಾಡ್ತಾರೆ, ಅವರ ನೆಲದಲ್ಲಿ ಅವರೂ ಇಂಗ್ಲಿಷ್ ಭಾಷೆಯನ್ನೂ ಸಹ ಬಳಸುವುದಿಲ್ಲ ಎಂದರು. ಮುಂದುವರಿದು ಮಾತನಾಡಿ ಅದೇ ನಾವು ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷೆಯಲ್ಲಿ ಮಾತನಾಡ್ತೇವೆ, ಆದರೆ ಅವರು ನಮ್ಮ ಕರ್ನಾಟಕಕ್ಕೆ ಬಂದಾಗ ಕನ್ನಡದಲ್ಲಿ ಮಾತನಾಡುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನೇ ಉದಾಹರಣೆ!
ಹೀಗೆ ನಮ್ಮವರು ಮಾತ್ರ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆ ಮಾತನಾಡ್ತಾರೆ, ಆದ್ರೆ ಅವರು ಮಾತ್ರ ಕರ್ನಾಟಕದಲ್ಲಿಯೂ ಅವರದ್ದೇ ಭಾಷೆ ಮಾತನಾಡ್ತಾರೆ ಕನ್ನಡ ಮಾತನಾಡುವುದಿಲ್ಲ ಎಂದ ದರ್ಶನ್ ಇದಕ್ಕೆ ತಮ್ಮನ್ನೇ ಉದಾಹರಣೆಯನ್ನಾಗಿ ನೀಡಿದರು. ಉದಾಹರಣೆಗೆ ನಾನೇ ಇದ್ದೀನಿ, ನಾನೇ ಬೇರೆ ರಾಜ್ಯಗಳಿಗೆ ಹೋದಾಗ ಅವರ ಭಾಷೆಯಲ್ಲೇ ಮಾತನಾಡಿದ್ದೀನಿ ಎಂದು ಒಪ್ಪಿಕೊಂಡು ಇದು ಬದಲಾಗಬೇಕು ಎಂದು ಹೇಳಿದರು.

ಬೆಳವಣಿಗೆಗೆ ನಮ್ಮ ಭಾಷೆ ಸಾಕು
ಇನ್ನು ಪರಭಾಷಾ ಕಲಾವಿದರು ಇಂಗ್ಲಿಷ್ ಬಳಸದೇ ತಮ್ಮದೇ ಭಾಷೆಯನ್ನು ಎಲ್ಲೆಡೆ ಬಳಸಿ ಮಾತನಾಡುತ್ತಿದ್ದು, ಅವರು ಬೆಳೆಯುತ್ತಿಲ್ವ ಎಂದು ಪ್ರಶ್ನೆಯನ್ನು ಹಾಕಿದರು ಹಾಗೂ ಬೆಳೆಯಲು ನಮ್ಮ ಭಾಷೆಯನ್ನು ಬಳಸಿದರೆ ಸಾಕು, ಪರಭಾಷೆಗಳನ್ನು ಬಳಸಬೇಕಿಲ್ಲ, ನಮ್ಮ ತನವನ್ನು ಬಿಟ್ಟುಕೊಡಬಾರದು ಎಂದು ದರ್ಶನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರದ ಹಾಡುಗಳ ಬಗ್ಗೆ ಮಾಹಿತಿ
ಕ್ರಾಂತಿ ಚಿತ್ರದ ಮೊದಲ ಹಾಡು ಧರಣಿ ಡಿಸೆಂಬರ್ 10ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದ್ದು ಉಳಿದ ಹಾಡುಗಳನ್ನೂ ಸಹ ಇದೇ ಮಾದರಿಯಲ್ಲಿ ರಾಜ್ಯದ ವಿವಿಧ ನಗರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿ ಕ್ರಾಂತಿ ಕ್ರೇಜ್ ಹೆಚ್ಚಿಸುವ ಕೆಲಸ ಮಾಡಲಿದೆ ಚಿತ್ರತಂಡ.


Click it and Unblock the Notifications











