twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿಮಾಗಳಲ್ಲಿ 'ಗಣೇಶನ ಮಹಿಮೆ': ಹಬ್ಬದ ದಿನ ಈ ಸನ್ನಿವೇಶಗಳನ್ನು ಒಮ್ಮೆ ನೋಡಿ

    |

    ದೇಶದೆಲ್ಲಡೆ ಗೌರಿ ಗಣೇಶ ಹಬ್ಬದ ಸಡಗರ ಜೋರಾಗಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಗಣೇಶ ಚತುರ್ಥಿಯ ಹೆಸರಿನಲ್ಲಿ ಎಲ್ಲಡೆ ಗಣೇಶನ ಹಬ್ಬ ಆಚರಿಸುತ್ತಾರೆ. ಸಿನಿಮಾ ತಾರೆಯರು ಕೂಡ ವಿಘ್ನನಿವಾರಕನನ್ನು ಮನೆಗೆ ಸ್ವಾಗತಿಸಿ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿ ಸಂಭ್ರಮಿಸುತ್ತಾರೆ. ಸರ್ವವ್ಯಾಪಿ ವಿನಾಯಕ ಸಿನಿಮಾಗಳಲ್ಲೂ ದರ್ಶನ ಕೊಟ್ಟಿದ್ದಾನೆ

    ಗಣೇಶ ಹಬ್ಬ ಅಂದಾಕ್ಷಣ ಕನ್ನಡ ಸಿನಿಮಾಗಳಲ್ಲಿರುವ ಸಾಕಷ್ಟು ಗಣೇಶನ ಭಕ್ತಿ ಗೀತೆಗಳು ನೆನಪಾಗುತ್ತದೆ. ಫಣಿ ರಾಮಚಂ ದ್ರ ನಿರ್ದೇಶನದ ಗಣೇಶನ ಹೆಸರಿನ ಸಿನಿಮಾಗಳು ಕೂಡ ಕಣ್ಮುಂದೆ ಬರುತ್ತವೆ. ಇನ್ನು ಕೆಲ ಸಿನಿಮಾಗಳಲ್ಲಿ ಗಣೇಶನನ್ನು ಕೂರಿಸಿ ಹಾಡು ಹಾಡಿ ಕುಣಿಯುವ ಸನ್ನಿವೇಶಗಳು ಇವೆ. ಆದರೆ ಗಣೇಶನೇ ಕಥೆಗೆ ತಿರುವು ಕೊಡುವಂತಹ ಒಂದಷ್ಟು ಸಿನಿಮಾಗಳು ಕನ್ನಡದಲ್ಲಿವೆ. ವಿಘ್ನ ನಿವಾರಕನನ್ನು ಕಥೆಯಲ್ಲಿ ತಂದು ನಿರ್ದೇಶಕರು ಗೆದ್ದಿದ್ದಾರೆ.

    ಟ್ವಿಟರ್‌ನಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ಚತುರ್ಥಿ!ಟ್ವಿಟರ್‌ನಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ಚತುರ್ಥಿ!

    ಗಣಪ ಅಂದರೆ ಸಾಕು ಎಲ್ಲರಿಗೂ ಅದೇನೋ ಪ್ರೀತಿ, ವಿನಾಯಕನ್ನು ಕಂಡರೆ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಮನಸ್ಸಿನಲ್ಲಿ ಅದ್ಭುತ ಭಾವ ಮೂಡುತ್ತದೆ. ಡೊಳ್ಳು ಹೊಟ್ಟೆ, ಆನೆ ತಲೆ, ಇಲಿ ವಾಹನ ಎಲ್ಲವೂ ಆಕರ್ಷಣೀಯ. ದಶಕಗಳಿಂದ ಗಣೇಶನನ್ನು ಕನ್ನಡ ಸಿನಿಮಾಗಳಲ್ಲಿ ತೋರಿಸುವ ಪ್ರಯತ್ನ ನಡೀತಾನೆ ಇದೆ. ಹಬ್ಬದ ಸಂಭ್ರಮದಲ್ಲಿ ಅಂತಹ ಕೆಲ ಇಂಟ್ರೆಸ್ಟಿಂಗ್ ಸನ್ನಿವೇಶಗಳನ್ನು ನಾವು ನಿಮಗೆ ಹೊತ್ತು ತಂದಿದ್ದೇವೆ. ಮುಂದೆ ಓದಿ.

    80ರ ದಶಕದಲ್ಲಿ ಬಂದಿತ್ತು 'ಗಣೇಶನ ಮಹಿಮೆ'

    80ರ ದಶಕದಲ್ಲಿ ಬಂದಿತ್ತು 'ಗಣೇಶನ ಮಹಿಮೆ'

    ಮಣಿ ಮುರುಗನ್ ನಿರ್ದೇಶನ 'ಗಣೇಶನ ಮಹಿಮೆ' ಸಿನಿಮಾ 1981ರಲ್ಲಿ ತೆರೆಕಂಡಿತ್ತು. ಬಡ ರಾಮಪ್ಪ(ಸುಂದರ್ ಕೃಷ್ಣ ಅರಸ್) ಹಾಗೂ ಗೌರಿ(ಶ್ರೀಲಲಿತಾ) ದಂಪತಿಗೆ ಗಣೇಶ ಹಬ್ಬದ ದಿನ ಹೊಲದಲ್ಲಿ ಉಳುಮೆ ಮಾಡುವಾಗ ಗಣೇಶನ ವಿಗ್ರಹ ಸಿಗುತ್ತದೆ. ಆ ವಿಗ್ರಹವನ್ನು ಮನೆಗೆ ತಂದು ಪೂಜಿಸಲು ಪ್ರಾರಂಭಿಸುತ್ತಿದ್ದಂತೆ ಆತನಿಗೆ ಅದೃಷ್ಟ ಖುಲಾಯಿಸುತ್ತದೆ. ದೊಡ್ಡ ಶ್ರೀಮಂತನಾಗುತ್ತಾನೆ. ಆದರೆ ಅವರ ಮಗ ಗಣೇಶ(ಅಶೋಕ್)ನಿಗೆ ವಿಘ್ನ ನಿವಾರಕನನ್ನು ಕಂಡರೆ ಭಕ್ತಿ ಇರುವುದಿಲ್ಲ. ಇದು ಮುಂದೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೊನೆಗೆ ತಪ್ಪಿನ ಅರಿವಾಗಿ ದೇವರ ಶರಣು ಹೋಗುತ್ತಾನೆ. ಯೂಟ್ಯೂಬ್‌ನಲ್ಲಿ ಸಿನಿಮಾ ಇದೆ ಒಮ್ಮೆ ನೋಡಿ.

    'ಉದ್ಭವ' ಕಥೆಗೆ ಗಣೇಶನಿಂದಲೇ ತಿರುವು

    'ಉದ್ಭವ' ಕಥೆಗೆ ಗಣೇಶನಿಂದಲೇ ತಿರುವು

    1990ರಲ್ಲಿ ತೆರೆಕಂಡು ಪ್ರೇಕ್ಷಕರ ಮನಗೆದ್ದ ಸಿನಿಮಾ 'ಉದ್ಭವ'. ಬಿ.ವೈಕುಂಠರಾಜು ಬರೆದ ಪುಟ್ಟ ಕಥೆ ಆಧರಿಸಿ ಕೂಡ್ಲು ರಾಮಕೃಷ್ಣ ಸೊಗಸಾದ ಸಿನಿಮಾ ಕಟ್ಟಿಕೊಟ್ಟಿದ್ದರು. ಚಿತ್ರದ ನಾಯಕ ಹೆಸರು ರಾಘವೇಂದ್ರ ರಾಯ. ಕೆಲಸ ಕಳೆದುಕೊಂಡಿರುವ ಸರ್ಕಾರಿ ಅಧಿಕಾರಿ. ಆದರೆ ಮಹಾನ್ ಚಾಲಾಕಿ. ಸುಳ್ಳು ಹೇಳಿ ಏನ್ ಬೇಕಾದರೂ ಮಾಡುವಂತಹ ಚತುರ. ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಏರಿಯಾ ರಸ್ತೆ ಅಗಲೀಕರಣ ಆಗುತ್ತದೆ ಎಂದು ಸುದ್ದಿ ಹಬ್ಬಸುತ್ತಾನೆ. ರಸ್ತೆ ಅಗಲೀಕರಣವಾದರೆ ಅಂಗಡೆಇಗಳು ಒಡೆಯುತ್ತಾರೆ. ನಷ್ಟವಾಗುತ್ತದೆ ಎಂದು ಎಲ್ಲರೂ ಅಂಗಡಿ ಮಾಲೀಕರು ಸಹಾಯಕ್ಕಾಗಿ ರಾಘಣ್ಣನ ಬಳಿ ಹೋಗುತ್ತಾರೆ. ಎಷ್ಟು ಬೇಕಾದರೂ ಹಣ ಕೊಡುತ್ತೀವಿ ಎನ್ನುತ್ತಾರೆ. ಹಣ ವಸೂಲಿ ಮಾಡಿಕೊಂಡ ರಾಘಣ್ಣ ರಸ್ತೆಯಲ್ಲಿ ಗಣೇಶ ಕೂರಿಸಲು ಹಾಕಿದ್ದ ಶಾಮಿಯಾನದ ಕೆಳಗೆ ಗಣೇಶನನ್ನು ಉದ್ಭವ ಮಾಡುತ್ತಾನೆ. ಅಲ್ಲಿಂದ ಮುಂದೆ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತದೆ. ರಾಘವೇಂದ್ರ ರಾಯನ ಪಾತ್ರದಲ್ಲಿ ಅನಂತ್‌ ನಾಗ್ ನಟಿಸಿದ್ದರು.

    'ಮತ್ತೆ ಉದ್ಭವ' ಚಿತ್ರದಲ್ಲೂ ಗಣೇಶನ ಕಥೆ

    'ಮತ್ತೆ ಉದ್ಭವ' ಚಿತ್ರದಲ್ಲೂ ಗಣೇಶನ ಕಥೆ

    ಎರಡು ವರ್ಷಗಳ ಹಿಂದೆ 'ಉದ್ಭವ' ಸಿನಿಮಾ ಸೀಕ್ವೆಲ್ ಪ್ರೇಕ್ಷಕರ ಮುಂದೆ ಬಂದಿತ್ತು. ಕೋಡ್ಲು ರಾಮಕೃಷ್ಣ ಹಿಂದಿನ ಸಿನಿಮಾ ಕಥೆಯನ್ನು ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ 30 ವರ್ಷಗಳ ನಂತರ ಕಥೆ ಮುಂದುವರೆಸಿದ್ದರು. 'ಉದ್ಭವ' ಗಣಪತಿ ದೇವಸ್ಥಾನದ ಸುತ್ತ 'ಮತ್ತೆ ಉದ್ಭವ' ಸಿನಿಮಾ ಕಥೆ ಗಿರಕಿ ಹೊಡೆದಿತ್ತು. ಪ್ರೀಕ್ವೆಲ್‌ನಲ್ಲಿ ಅನಂತ್ ನಾಗ್ ಮಾಡಿದ್ದ ರಾಘವೇಂದ್ರ ರಾಯರ ಪಾತ್ರವನ್ನು ರಂಗಾಯಣ ರಘು ಮಾಡಿದ್ದರೆ, ಅವರ ಮಗನಾಗಿ ಪ್ರಮೋದ್ ನಟಿಸಿದ್ದರು. ತಂದೆ, ಮಗ ಸೇರಿ ಹೇಗೆಲ್ಲಾ ಮೋಸ ಮಾಡಿ ಹಣ ಮಾಡುತ್ತಾರೆ ಅನ್ನುವುದನ್ನು ಸಿನಿಮಾದಲ್ಲಿ ಹೇಳಲಾಗಿತ್ತು.

    ಕಥೆಗೆ ತಿರುವು ಕೊಡುವ ಗಣೇಶ ವಿಸರ್ಜನೆ ಘಟನೆ

    ಕಥೆಗೆ ತಿರುವು ಕೊಡುವ ಗಣೇಶ ವಿಸರ್ಜನೆ ಘಟನೆ

    1991ರಲ್ಲಿ ತೆರೆಕಂಡ 'ಕಿಲಾಡಿ ಗಂಡು' ಚಿತ್ರದಲ್ಲೂ ಇಂತದ್ದೆ ಒಂದು ಸನ್ನಿವೇಶ ಇದೆ. ವಿಷ್ಣು(ಸುನಿಲ್) ಹಾಗೂ ಕಂಠಿ(ಅರವಿಂದ್) ಇಬ್ಬರು ಕಾಲೇಜು ಸ್ಟೂಡೆಂಟ್ಸ್. ಇಬ್ಬರದ್ದೂ ಬೇರೆ ಬೇರೆ ತಂಡ. ವಿಷ್ಣು ಎಲ್ಲದರಲ್ಲೂ ಕಂಠಿಗೆ ಎದುರಾಗಿ ನಿಲ್ಲುತ್ತಾನೆ. ಕಂಠಿ ಇಷ್ಟಪಡುವ ಹುಡುಗಿ ಸೌಮ್ಯ(ತಾರಾ) ಕೂಡ ವಿಷ್ಣುನ ಪ್ರೀತಿಸುತ್ತಿರುತ್ತಾಳೆ. ಕಾಲೇಜ್ ಎಲೆಕ್ಷನ್‌ನಲ್ಲೂ ವಿಷ್ಣು ಗೆಲ್ತಾನೆ. ಇದನ್ನು ಸಹಿಸದ ಕಂಠಿ ತನ್ನ ಗ್ಯಾಂಗ್ ಜೊತೆ ಸೇರಿಕೊಂಡು ವಿಷ್ಣುನ ಕೊಲ್ಲುವ ತಂತ್ರ ರೂಪಿಸುತ್ತಾನೆ. ಕಾಲೇಜಿನಲ್ಲಿ ಗಣೇಶನನ್ನು ಕೂರಿಸಿ ವಿಸರ್ಜನೆ ಮಾಡುವಾಗ ಗಣೇಶನ ಜೊತೆಗೆ ವಿಷ್ಣುನ ಕೂಡ ನೀರಿನಲ್ಲಿ ಮುಳುಗಿಸಿ ಸಾಯಿಸುತ್ತಾರೆ. ಡಿಟೆಕ್ಟೀವ್ ರಘುವೀರ್(ಟೈಗರ್ ಪ್ರಭಾಕರ್) ಈ ಕೊಲೆಯ ರಹಸ್ಯವನ್ನು ಭೇದಿಸುವ ಕಥೆ ಸಿನಿಮಾದಲ್ಲಿದೆ.

    ಗಣೇಶನನ್ನು ಬಾವಿಗೆ ಹಾಕಿದ್ದ ಉಪೇಂದ್ರ

    ಗಣೇಶನನ್ನು ಬಾವಿಗೆ ಹಾಕಿದ್ದ ಉಪೇಂದ್ರ

    ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ 'ಎ' ಚಿತ್ರದಲ್ಲೂ ಒಂದು ವಿಭಿನ್ನ ಸನ್ನಿವೇಶ ಇದೆ. ನಿಜ ಜೀವನದಲ್ಲಿ ಮಹಾನ್ ಆಸ್ತಿಕರಾಗಿರುವ ಉಪ್ಪಿ, ಸಿನಿಮಾಗಳಲ್ಲಿ ಚಿತ್ರವಿಚಿತ್ರ ಸನ್ನಿವೇಶಗಳನ್ನು ಕಟ್ಟುತ್ತಾರೆ. 'ಎ' ಚಿತ್ರದಲ್ಲಿ ಗಣೇಶ ಹಬ್ಬದ ದಿನ ದೇವಸ್ಥಾನದಲ್ಲಿ ಕೂರಿಸಿದ್ದ ಗಣೇಶನನ್ನು ಬಾವಿಗೆ ಎತ್ತಿ ಹಾಕಿ, ಅಲ್ಲಿ ತಾವೇ ಕೂರುತ್ತಾರೆ. ಗನ್ ಹಿಡಿದು ಅಬ್ಬರಿಸಿ, ಅರ್ಚಕರಿಂದ ಪೂಜೆ ಕೂಡ ಮಾಡಿಸಿಕೊಳ್ಳುತ್ತಾರೆ. 'ಐಯಾಮ್ ಗಾಡ್ ಗಾಡ್ ಈಸ್ ಗ್ರೇಟ್' ಎಂದು ಡೈಲಾಗ್ ಹೊಡಿತ್ತಾರೆ. ಅಭಿಮಾನಿಗಳಿಗೆ ಈ ಸನ್ನಿವೇಶ ಬಹಳ ಇಷ್ಟ. 'ಎ' ಸಿನಿಮಾ ಸೂಪರ್ ಹಿಟ್ ಆಗಿತ್ತು.

    English summary
    God Ganesha is the Turning Point for these Kannada Movies, Know More.
    Tuesday, August 30, 2022, 19:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X