ಹೇಮಶ್ರೀಯನ್ನು ಕೊಂದಿದ್ದು ಕ್ಲೋರೋಫಾರಂ ಓವರ್ಡೋಸ್
ಹೇಮಶ್ರೀ ಸಾವು ಸಂಭವಿಸಿದ್ದು ಹೇಗೆ ಎಂಬುದರ ಬಗ್ಗೆ ನಾನಾ ಊಹಾಪೋಹಗಳು ಎದ್ದಿದ್ದವು. ಈಗ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಹೆಬ್ಬಾಳ ಠಾಣೆ ಪೊಲೀಸರನ್ನು ತಲುಪಿದ್ದು, ಹೇಮಶ್ರೀ ಸತ್ತಿದ್ದು, ಆಕೆಯನ್ನು ಪ್ರಜ್ಞೆ ತಪ್ಪಿಸಲು ಅಧಿಕ ಪ್ರಮಾಣದಲ್ಲಿ ಕ್ಲೋರೋಫಾರಂ ನೀಡಿದ್ದರಿಂದ ಎಂಬುದು ಖಚಿತವಾಗಿದ್ದು, ಕೊಲೆಗಾರ ಆಕೆಯ ಗಂಡ ಜೆಡಿಎಸ್ ನಾಯಕ ಸುರೇಂದ್ರ ಬಾಬು ಎಂಬುದು ಈ ಪರೀಕ್ಷೆಯಿಂದ ದೃಢಪಟ್ಟಿದೆ.
ಕಿರುತೆರೆಯಲ್ಲಿ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಹೇಮಶ್ರೀ ಸಾವು ಅ.12ರಂದು ಸಂಭವಿಸಿದಾಗ ಆಕೆಯ ಹೊಟ್ಟೆಯಲ್ಲಿ ಕಪ್ಪು ದ್ರಾವಣ ಸಿಕ್ಕಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಆಕೆ ವಿಷಪ್ರಾಶನದಿಂದ ಸತ್ತಳಾ ಅಥವಾ ಕೊಲ್ಲಲಾಯಿತಾ ಎಂಬ ಸಂದೇಹಗಳು ಎದ್ದಿದ್ದವು. ಆಕೆಯ ಮೇಲೆ ಇದ್ದ ಕೆಲ ಗಾಯದ ಗುರುತುಗಳು ಕೂಡ ಅನುಮಾನಗಳಿಗೆ ಕಾರಣವಾಗಿತ್ತು.
ಈಗ ಈ ಎಲ್ಲ ಸಂದೇಹಗಳಿಗೆ ಉತ್ತರ ಸಿಕ್ಕಿದ್ದು, ಆಕೆ ಹೆಚ್ಚಿ ಪ್ರಮಾಣದಲ್ಲಿ ಕ್ಲೋರೋಫಾರಂ ನೀಡಿದ್ದರಿಂದಲೇ ಸಾವಿಗೀಡಾಗಿದ್ದಾಳೆ ಎಂದು ತಿಳಿದುಬಂದಿದೆ. ಆದರೆ, ಆ ಪ್ರಮಾಣ ಎಷ್ಟು ಎಂಬ ಬಗ್ಗೆ ಇನ್ನೂ ನಿಖರ ಉತ್ತರ ಸಿಕ್ಕಿಲ್ಲ. ಈ ಕುರಿತು ಹೆಚ್ಚಿನ ವಿವರ ಒದಗಿಸಬೇಕೆಂದು ಹೆಬ್ಬಾಳ ಪೊಲೀಸರು ಪರೀಕ್ಷೆ ನಡೆಸಿದ ವೈದ್ಯರನ್ನು ಕೋರಿದ್ದಾರೆ.
ಮತ್ತೊಂದು ಸಂಗತಿಯನ್ನು ಪರೀಕ್ಷೆ ನಡೆಸಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಬಹಿರಂಗಪಡಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಹೇಳುವ ಪ್ರಕಾರ, ಕ್ಲೋರೋಫಾರಂ ನೀಡಿದ ನಂತರ 2 ಗಂಟೆಗಳ ಕಾಲ ಹೇಮಶ್ರೀ ಇನ್ನೂ ಜೀವಂತವಾಗಿದ್ದಳು. ನಂತರವೇ ಆಕೆಯ ಸಾವು ಸಂಭವಿಸಿದೆ. ಆದರೆ, ವೈದ್ಯರು ಹೇಳುವುದೇನೆಂದರೆ ಕ್ಲೋರೋಫಾರಂನಿಂದಲೇ ಹೇಮಶ್ರೀ ಜೀವ ಅಂತ್ಯವಾಯಿತು.


Click it and Unblock the Notifications












