ಮತ್ತೆ ಸುದ್ದಿಗೆ ಬಂದ ಹುಚ್ಚಾ ವೆಂಕಟ್: ಈ ಬಾರಿ ಮಾಡಿದ್ದಾರೆ ಒಳ್ಳೆ ಕೆಲಸ
ಅಲ್ಲೆಲ್ಲೊ ಒಮ್ಮೆ ರಸ್ತೆಯಲ್ಲಿ ಕಾರಿನ ಮೇಲೆ ಕಲ್ಲು ಹಾಕಿ, ಇನ್ಯಾವುದೊ ಟೋಲ್ನಲ್ಲಿ ಯಾರೊ ಯುವತಿಯನ್ನು 'ನನ್ನನ್ನು ಮದುವೆಯಾಗು' ಎಂದು ಕೇಳಿ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.
ಈ ಮುನ್ನಾ ಏನೇ ನಡೆದರು, ಯಾವುದೇ ಸುದ್ದಿಯಾದರೂ ಅದರ ಬಗ್ಗೆ ವಿಡಿಯೋ ಹರಿಬಿಡುತ್ತಿದ್ದ ಅಥವಾ ಚಾನೆಲ್ಗಳ ಚರ್ಚೆಗಳಲ್ಲಿ ಪ್ರತಿಷ್ಠಾಪನೆಯಾಗುತ್ತಿದ್ದ ಹುಚ್ಚಾ ವೆಂಕಟ್ ಆ ನಂತರ ಬಹುವಾಗಿ ಕಾಣಿಸಿಕೊಂಡಿರಲಿಲ್ಲ.
ಈಗ ಲಾಕ್ಡೌನ್ ಸಮಯದಲ್ಲಿ ಹುಚ್ಚಾ ವೆಂಕಟ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಈ ಬಾರಿ ಒಂದೊಳ್ಳೆ ಕೆಲಸ ಮಾಡಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಹುಚ್ಚಾ ವೆಂಕಟ್.

ಸಂಕಷ್ಟದಲ್ಲಿರುವವರಿಗೆ ದಿನಸಿ ವಿತರಣೆ
ಹುಚ್ಚಾ ವೆಂಕಟ್ ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ದಿನಸಿ ಕಿಟ್ಗಳನ್ನು ವಿತರಿಸಿದ್ದಾರೆ. ಮೀನಂಗಡಿ, ಮಾಂಸದಂಗಡಿ, ಪಾನಿಪುರಿ ಅಂಗಡಿ ಇನ್ನಿತರೆ ಬೀದಿ ಬದಿ ವ್ಯಾಪಾರಿಗಳಿಗೆ ಹುಚ್ಚಾ ವೆಂಕಟ್ ದಿನಸಿ ವಿತರಿಸಿದ್ದಾರೆ.

ಎಲ್ಲರೂ ಸಹಾಯ ಮಾಡಲು ಮುಂದಾಗಿ: ಹುಚ್ಚಾ ವೆಂಕಟ್
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಹುಡುಗರು. ಇನ್ನೂ ಹಲವಾರು ಮಂದಿಗೆ ಸಹಾಯ ಮಾಡಿರುವ ಹುಚ್ಚಾ ವೆಂಕಟ್, ಎಲ್ಲಾ ಗಣ್ಯರೂ ಸಹ ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.

'ನಾನು ಬಡವ, ಆದರೆ ಸಹಾಯ ಮಾಡುತ್ತಿದ್ದೇನೆ'
ತಮ್ಮ ಸಹಾಯದ ಬಗ್ಗೆ ವಿಡಿಯೋ ಮಾಡಿರುವ ಹುಚ್ಚಾ ವೆಂಕಟ್, 'ನಾನೂ ಸಹ ಬಡವ, ನನ್ನ ಪರಿಸ್ಥಿತಿಯೂ ಬಹಳ ಕೆಟ್ಟದಾಗಿದೆ ಆದರೆ ನಾನು ಜನರಿಗೆ ಸಹಾಯ ಮಾಡಬೇಕು ಎಂದು ನಿರ್ಣಯಿಸಿದ್ದೇನೆ. ಸಮಾಜಕ್ಕೆ ಕೊಟ್ಟು-ಕೊಟ್ಟು ನಾನು ಬಡವನಾದೆ ಆದರೆ ಸಹಾಯ ಮಾಡಬೇಕು ಎಂಬ ತುಡಿತ ಹೋಗಿಲ್ಲ' ಎಂದಿದ್ದಾರೆ ಹುಚ್ಚಾ ವೆಂಕಟ್.

ಸಿನಿಮಾ ನಿರ್ದೇಶಿಸುತ್ತಿರುವ ಹುಚ್ಚಾ
ಹುಚ್ಚಾ ವೆಂಕಟ್ 'ತಿಕ್ಲ ಹುಚ್ಚಾ ವೆಂಕಟ್' ಎಂಬ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವು ಇಸ್ರೋ ಹಾಗೂ ಇನ್ನಿತರೆ ವಿಜ್ಞಾನಿಗಳ ಆಶೀರ್ವಾದದಿಂದ ನಿರ್ಮಿಸಲ್ಪಡುತ್ತಿದೆ ಎಂದು ಪೋಸ್ಟರ್ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











