ಹನುಮ ಜಯಂತಿಯಂದೇ 'ಪಾದರಾಯ' ಸಿನಿಮಾ ಘೋಷಣೆ: ಚಿತ್ರದ ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್?
'ವಿಕ್ರಾಂತ್ ರೋಣ' ಸೂಪರ್ ಹಿಟ್ ನಂತರ ನಿರ್ಮಾಪಕ ಜಾಕ್ ಮಂಜು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಮೈನಾ ನಾಗಶೇಖರ್ ಹೀರೊ ಆಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು 'ಪಾದರಾಯ'.
ಹೀರೊ ಆಗಿ ನಟಿಸುವುದರ ಜೊತೆಗೆ ನಾಗಶೇಖರ್ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. 'ಪಾದರಾಯ' ಅಂದರೆ ಆಂಜನೇಯ. 2016ರ ಸಮಯದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಅಂಜನಾದ್ರಿಯ ಸುತ್ತಾಮುತ್ತಾ ತುಂಗಾ ಬ್ಯಾಕ್ವಾಟರ್ನಲ್ಲಿ ಕಥೆ ನಡೆಯಲಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಇಂದು ದಿಢೀರನೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ.
'ಪಾದರಾಯ' ಕಥೆಗೂ ಆಂಜನೇಯ ಪಾದಕ್ಕೂ ನಂಟಿದೆ ಅಂತೆ. ಅದು ಏನು ಅನ್ನುವುದನ್ನು ತೆರೆಮೇಲೆ ನೋಡಬೇಕು ಎಂದು ನಿರ್ಮಾಪಕರು, ನಿರ್ದೇಶಕರು ಹೇಳಿದ್ದಾರೆ. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್. ಎಲ್ಲಾ ರಾಜ್ಯಗಳಿಗೂ ಸಲ್ಲುವ ಕಥೆ. ಹಾಗಾಗಿ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ಬರಲಿದೆ. ಸತ್ಯಾ ಹೆಗಡೆ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿರಲಿದೆ.

ಅಯೋಧ್ಯೆಯಿಂದ ಬೆಂಗಳೂರಿನವರೆಗೂ ಕಥೆ ಸಾಗಿ ಬರುತ್ತದೆಯಂತೆ. ನಾಯಕಿಯ ಹುಡುಕಾಟ ಶುರುವಾಗಿದ್ದು, ಶೀಘ್ರದಲ್ಲೇ ಮಾಹಿತಿ ಸಿಗಲಿದೆ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರಾ? ಎನ್ನುವ ಪ್ರಶ್ನೆಗೆ ಈಗಲೇ ಅದೆಲ್ಲಾ ಮಾತನಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿ 'ಪಾದರಾಯ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ.

ಜನವರಿಯಲ್ಲಿ 'ಪಾದರಾಯ' ಸಿನಿಮಾ ಸೆಟ್ಟೇರಲಿದೆ. ಮತ್ತೊದ್ಕಡೆ ನಾಗಶೇಖರ್ ನಿರ್ದೇಶನದ ತೆಲುಗಿನ 'ಗುರ್ತುಂದಾ ಶೀತಾಕಾಲಂ' ಬಿಡುಗಡೆಗೆ ಸಿದ್ಧವಾಗಿದೆ. ಇದು ಕನ್ನಡದ 'ಲವ್ ಮಾಕ್ಟೇಲ್' ಸಿನಿಮಾ ರೀಮೇಕ್. ಇನ್ನು 'ನವೆಂಬರ್ ಮಳೆಯಿಲ್ ನಾನುಂ ಅವಳುಂ' ಎನ್ನುವ ತಮಿಳು ಚಿತ್ರದಲ್ಲಿ ನಾಗಶೇಖರ್ ಹೀರೊ ಆಗಿ ನಟಿಸುತ್ತಿದ್ದಾರೆ. 'ಪಾದರಾಯ' ಸಿನಿಮಾ ಪೋಸ್ಟರ್ ತೆಲುಗಿನ 'ಯಾತ್ರಾ' ಚಿತ್ರದ ಪೋಸ್ಟರ್ ನೆನೆಪಿಸುವಂತಿದೆ. ಆದರೆ ಅದಕ್ಕೂ ಈ ಚಿತ್ರಕ್ಕೆ ಸಂಬಂಧ ಇಲ್ಲ ಎಂದು ನಿರ್ದೇಶಕರು ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











