'ಜಯನಗರ 4ನೇ ಬ್ಲಾಕ್' ಒಂದು ವಿಭಿನ್ನ ಕಿರುಚಿತ್ರ

ಇದೊಂದು ಕಿರು ಚಿತ್ರವಾದರೂ ಬದುಕಿಗೊಂದು ಕನ್ನಡ ಹಿಡಿಯುವ ಪ್ರಯತ್ನ. ಸ್ನೇಹಕ್ಕೆ ಯಾವ ವಯಸ್ಸಿನ ಅಂತಸ್ತಿನ ಅಂತರ ಇಲ್ಲ ಎಂದು ಸಾರುವ ಚಿತ್ರ. 'ಜಯನಗರ್ 4ನೇ ಬ್ಲಾಕ್' ಮೂರು ಜೀವಗಳ ಸುತ್ತ ನಡೆಯುವ ಘಟನೆ. ಕಳೆದ ವಾರ ರೇಣುಕಾಂಬ ಡಿಜಿಟಲ್ ಚಿತ್ರಮಂದಿರದಲ್ಲಿ ಮಾಧ್ಯಮಕ್ಕೆ ಪ್ರದರ್ಶನ ಮಾಡಲಾಗಿತ್ತು.
ರಾಷ್ಟ್ರ ಖ್ಯಾತಿ ನಿರ್ದೇಶಕ ಟಿ ಎಸ್ ನಾಗಾಭರಣ, ಕುಂಚ ಕಲಾವಿದ ಬಿ ಕೆ ಎಸ್ ವರ್ಮಾ, ಕಿರುತೆರೆ ನಿರ್ದೇಶಕ ಕಲಾಗಂಗೋತ್ರಿ ಮಂಜು, ಅಂತರಾಷ್ಟ್ರೀಯ ಖ್ಯಾತಿಯ ಕೃಪಾಕರ್ ಹಾಗೂ ಸೇನಾನಿ ಸಹ ಈ ಕಿರುಚಿತ್ರವನ್ನು ನೋಡಿ ಮೆಚ್ಚುಗೆ ತಿಳಿಸಿದರು.
ಬದುಕಿನ ಘಟನೆಗಳು ಈ ರೀತಿ ಕಿರು ಚಿತ್ರವಾಗುವುದು ವಿರಳ. ಇಲ್ಲಿ ಸೆರೆ ಹಿಡಿರುವ ವಿಚಾರಗಳು ಮನಸ್ಸಿಗೆ ಮುದ ನೀಡುತ್ತದೆ. ಸಿನಿಮಾವನ್ನು ಪೆನ್ನಿನ ಹಾಗೆ ಬಳಸಬೇಕು. ದೃಶ್ಯ ಮಾಧ್ಯಮ ಒಳ್ಳೆ ಸಂದೇಶವನ್ನು ಸಾರಬೇಕು ಎಂದು ಅಭಿಪ್ರಾಯ ಪಟ್ಟರು ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ.
ಕುಂಚ ಕಲಾವಿದ ಬಿ ಕೆ ಎಸ್ ವರ್ಮಾ 26 ನಿಮಿಷದಲ್ಲಿ ಎರಡು ಘಂಟೆಯಲ್ಲಿ ಹೇಳುವ ವಿಚಾರ ಇಲ್ಲಿ ಹೇಳಲಾಗಿದೆ. ಇದು ಪ್ರಶಂಸನನೀಯ ಎಂದರು. ಇದೊಂದು ಉತ್ತಮ ಪ್ರಯತ್ನ. ಇಂತಹ ಪ್ರತಿಭೆಗಳು ಬರಬೇಕು ಎಂದು ಅಂತರಾಷ್ಟ್ರೀಯ ವನ್ಯ ಮೃಗಗಳ ಚಿತ್ರ ನಿರ್ದೇಶಕ ಸೇನಾನಿ ಅಭಿಪ್ರಾಯ ಪಟ್ಟರು.
ಏನಿದು ಜಯನಗರ 4ನೇ ಬ್ಲಾಕ್? ನಾಯಕನಾಗಬೇಕಂಬ ಆಸೆಯೊಂದಿಗೆ ಬೆಂಗಳೂರಿಗೆ ಬಂದು ಅಲೆದು ಸಾಕಾಗಿ ಸಂಜೆಯ ಹೊತ್ತಿಗೆ ಜಯನಗರ 4ನೇ ಬ್ಲಾಕ್ ಬಂದು ಕೂರುತ್ತಾನೆ ಧನಂಜಯ್. ಅವರ ಸ್ನೇಹಿತರು ಹಿರಿಯರಾದ ವೆಂಕಿ, ಹೂ ಮಾರುವ ರಾಣಿ ನೀನು ಹೀರೋ ತರಹ ಎಂದು ಧನಂಜಯ್ ರನ್ನು ಗುರುತಿಸುವ ಸ್ನೇಹಿತರ ಸುತ್ತ ಈ ಕಿರುಚಿತ್ರ ಮಾಡಲಾಗಿದೆ. ಮನುಷ್ಯ ಸಂಬಂಧ ಜೊತೆಗೆ ಮಾನವೀಯ ಗುಣಗಳ ಮೌಲ್ಯವನ್ನು ಸಹ ಇಲ್ಲಿ ಹೇಳಲಾಗಿದೆ.
ಸತ್ಯ ಪ್ರಕಾಷ್ ಅವರ ನಿರ್ದೇಶನ, ಬಿ ಎಸ್ ಕೆಂಪರಾಜ್ ಅವರ ಸಂಕಲನ, ಲವಿತ್ ಅವರ ಛಾಯಾಗ್ರಹಣ, ಸ್ಟೀವ್ ಕೌಶಿಕ್ ಅವರ ಸಂಗೀತ, ಕಥೆ ಹಾಗೂ ಸಂಭಾಷಣೆ ಧನಂಜಯ್, ಚಿತ್ರಕಥೆ ನಟರಾಜ್ ಎಸ್ ಭಟ್, ಧನಂಜಯ್ ಹಾಗೂ ಡಿ ಸತ್ಯಪ್ರಕಾಶ್ ಅವರದು. ತಾರಾಗಣದಲ್ಲಿ ಸುಬ್ಬರಾಯರು (ರಾಷ್ಟ್ರ ಪ್ರಶಸ್ತಿ ಪುರಸ್ಕೃತ), ಧನಂಜಯ್, ದಿವ್ಯಾ, ಧರ್ಮಣ್ಣ ಕಡೂರು, ಬಿಂಬಶ್ರೀ ಹಾಗೂ ಪ್ರಿಯಾಂಕಾ ಇದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











