ನಿರ್ಮಾಪಕ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು: ಹಲ್ಲೆ, ನಿಂದನೆ ಆರೋಪ
ನಿರ್ಮಾಪಕ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು: ಹಲ್ಲೆ, ನಿಂದನೆ ಆರೋಪ
ಜನಪ್ರಿಯ ಸಿನಿಮಾ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ನೀಡಿರುವುದು ಜ್ಞಾನಭಾರತಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು.
ಮುನಿರತ್ನ ವಿರುದ್ಧ ವಿದ್ಯಾರ್ಥಿಗಳು ನೀಡಿರುವ ದೂರಿನಂತೆ, ಇಂದು (ಜೂನ್ 12) ರಂದು ಮಧ್ನಾಹ್ನ ಬಿಜೆಪಿ ಪಕ್ಷ ಶಾಸಕ ಮುನಿರತ್ನ ಅವರ ಬೆಂಬಲಿಗರು ಜ್ಞಾನಭಾರತಿ ವಿವಿಗೆ ಸೇರಿದ ಸ್ಥಳದಲ್ಲಿ ಬಿಜೆಪಿ ಪಕ್ಷದ ಬಂಟಿಂಗ್, ಪ್ಲೆಕ್ಸ್ಗಳನ್ನು ಕಟ್ಟುತ್ತಿದ್ದರು, ಇದನ್ನು ಜ್ಞಾನಭಾರತಿ ವಿವಿಯ ಕೆಲ ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮುನಿರತ್ನ ಬೆಂಬಲಿಗರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತಿನ ಚಕಮಕಿ ನಡೆದ ಕೂಡಲೆ ಸ್ಥಳಕ್ಕೆ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದ್ದಾರೆ. ಅದೇ ಸಮಯಕ್ಕೆ ಅಲ್ಲಿದ್ದ ಮುನಿರತ್ನರ ಗನ್ಮ್ಯಾನ್ ಇವರೆಲ್ಲರು ವಿದ್ಯಾರ್ಥಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ವಿದ್ಯಾರ್ಥಿಗಳ ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಜೀಪು ಹತ್ತಿಸಿದ್ದಾರೆ.
''ಹಾಸ್ಟೆಲ್ನಲ್ಲಿ ಬಿಟ್ಟಿ ಊಟ ತಿಂದುಕೊಂಡು ಇರುವುದು ಬಿಟ್ಟು ಇವೆಲ್ಲ ಮಾಡುತ್ತೀರ ಸೂ_ ಮಕ್ಕಳ ಎಂದು ಬೈದಿದ್ದಾರೆ ಎಂದು ವಿದ್ಯಾರ್ಥಿಗಳು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮುಂದುವರೆದು, ನಮ್ಮ ಜಾತಿಗಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿ, ನಮ್ಮ ಕೈಯಲ್ಲಿದ್ದ ಮೊಬೈಲ್ಗಳನ್ನು ಕಸಿದುಕೊಂಡ ಅವುಗಳಲ್ಲಿದ್ದ ಘಟನೆಯ ವಿಡಿಯೋಗಳನ್ನು ಡಿಲೀಟ್ ಮಾಡಿ ನಮ್ಮನ್ನೆಲ್ಲ ಬಲವಂತದಿಂದ ಪೊಲೀಸ್ ವ್ಯಾನ್ಗೆ ಹತ್ತಿಸಿ ಠಾಣೆಗೆ ಕರೆದೊಯ್ದು ಕೂರಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳು, ಮುನಿರತ್ನರ ಗನ್ಮ್ಯಾನ್ ಹಾಗೂ ವಿವಿ ಆವರಣದಲ್ಲಿ ನಿಯಮ ಬಾಹಿರವಾಗಿ ರಾಜಕೀಯ ಪಕ್ಷದ ಫ್ಲೆಕ್ಸ್, ಬ್ಯಾನರ್ ಕಟ್ಟಿದ ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಮುನಿರತ್ನ ಬೆಂಬಲಿಗರು ವಿದ್ಯಾರ್ಥಿ ನಾಯಕ ಲೋಕೇಶ್ ರಾಮ್ ಸೇರಿದಂತೆ ಹಲವರ ವಿರುದ್ಧ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ನಿರ್ಮಾಪಕ ಮುನಿರತ್ನ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ದಾಖಲಾಗಿವೆ. ನಿರ್ಮಾಪಕರಾಗುವ ಮುಂಚೆ ಕ್ರಿಮಿನಲ್ ಕಾರ್ಯಗಳಲ್ಲಿ ಮುನಿರತ್ನ ತೊಡಗಿಕೊಂಡಿದ್ದರು ಎನ್ನಲಾಗುತ್ತದೆ. ಕುಖ್ಯಾತ ರೌಡಿ ಕೊರಂಗು ಅವರ ಸಹೋದರ ಮುನಿರತ್ನ ವಿರುದ್ಧವೂ ಈ ಮೊದಲು ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಮುನಿರತ್ನ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು. ಮುನಿರತ್ನ ನಕಲಿ ಚುನಾವಣಾ ಗುರುತಿನ ಚೀಟಿಗಳನ್ನು ಬಳಸಿ ನಕಲಿ ಮತದಾನ ಮಾಡಿಸಿದ್ದಾರೆಂಬ ಆರೋಪ ಹೊರಿಸಲಾಗಿತ್ತು. ಆದರೆ ಆ ಬಳಿಕ ನಡೆದ ರಾಜಕೀಯ ಪಲ್ಲಟದಲ್ಲಿ ಸ್ವತಃ ಮುನಿರತ್ನ ಬಿಜೆಪಿ ಪಾಲಾದರು.


Click it and Unblock the Notifications











