ನವೀನ್ ಕೃಷ್ಣ ಯಾಕಿಂತಾ ನಿರ್ಧಾರ ತೆಗೆದುಕೊಂಡಿದ್ದಾರೆ?
ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅಚ್ಚುಕಟ್ಟಾದ ಅಭಿನಯದಿಂದ ತಂದೆಗೆ ತಕ್ಕ ಮಗ ಎನಿಸಿಕೊಂಡ ನಟ ನವೀನ್ ಕೃಷ್ಣ. ತಮ್ಮ ಸಿನಿಮಾ ಜೊತೆಗೆ ಮನಮೋಹಕ ಅಭಿನಯದಿಂದ ಕಲಾವಿದ ಅಂತ ಕೂಡ ಕರೆಸಿಕೊಂಡ ನಟ ನವೀನ್ ಕೃಷ್ಣ. ಆದರೆ ಅದ್ಯಾಕೋ ಅದೃಷ್ಟ ನವೀನ್ ಕೃಷ್ಣರ ಕೈ ಹಿಡಿಯಲೇ ಇಲ್ಲ. ಎಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸ್ಟಾರ್ ಡ್ರಮ್ ನವೀನ್ ಕೃಷ್ಣ ಕೈ ಹಿಡಿಯಲೇ ಇಲ್ಲ.
ಇದೀಗ ನವೀನ್ ಕೃಷ್ಣ ಇನ್ನು ಹೀರೋ ಆಗೋದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅದ್ಯಾಕೋ ನಟನೆ ಸಾಕು ಅನ್ನಿಸಿದೆಯಂತೆ. ಇತ್ತೀಚೆಗೆ ತನ್ನ ಆತ್ಮೀಯ ಗೆಳೆಯರೊಬ್ಬರು ಆಕಸ್ಮಿಕ ಮರಣಕ್ಕೆ ತುತ್ತಾದಾಗ ಗೆಳೆಯನಿಗೊಂದು ಶಾರ್ಟ್ ಫಿಲಂ ಮಾಡಿದ್ದರು. ಮತ್ತು ತಾವೇ ಮಾಧ್ಯಮಗಳಿಂದ ಫೋನ್ ಮಾಡಿ ಇದನ್ನು ಪ್ರಸಾರ ಮಾಡುವಂತೆ ಮನವಿಯೂ ಮಾಡಿಕೊಂಡಿದ್ದರು.[ನನ್ನ ಸಿನಿಮಾ ಆಸ್ಕರ್ ಗೆ ಹೋಗಬಹುದು - ನವೀನ್ ಕೃಷ್ಣ]

ನವೀನ್ ಕೃಷ್ಣ ನಟಿಸಿದ್ದ 'ಆಕ್ಟರ್' ಚಿತ್ರ ಇತ್ತೀಚೆಗೆ ತೆರೆಕಂಡಿತ್ತು. ದಯಾಳ್ ಪದ್ಮನಾಭ್ ನಿರ್ದೇಶನದ ಚಿತ್ರಕ್ಕೆ ವಿಮರ್ಶಕರ ಜೈಕಾರವೂ ಸಿಕ್ಕಿತ್ತು. 'ಹಗ್ಗದ ಕೊನೆ' ಅನ್ನುವ ಪರ್ಫಾಮೆನ್ಸ್ ಓರಿಯಂಟೆಡ್ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿ ಮೆಚ್ಚುಗೆ ಗಳಿಸಿದ್ದರು ಕನ್ನಡದ ಹಿರಿಯ ಪೋಷಕ ನಟ ಶ್ರೀನಿವಾಸಮೂರ್ತಿ ಪುತ್ರ.[ವಿಮರ್ಶೆ : ಬಣ್ಣದ ಬದುಕಿಗೆ ಕನ್ನಡಿ ಹಿಡಿಯುವ 'ಆಕ್ಟರ್' ]

ಪಾತ್ರಕ್ಕೆ ತಕ್ಕ ಅಭಿನಯ ನೀಡುವುದರಲ್ಲಿ ಯಾವತ್ತೂ ಹಿಂದೆ ಬೀಳದ ನಟನಿಗೆ ಅಂದುಕೊಂಡಂತಹ ಪಾತ್ರಗಳು ಸಿಗಲಿಲ್ಲ. ಹೀರೋಯಿಸಂ ಮೆರೆಯುವ 'ಧಿಮಾಕು'ದಂತಹ ಚಿತ್ರಗಳಲ್ಲಿ ನಟಿಸಿದರೂ ಈ ಕಲಾವಿದ ಕನ್ನಡ ಚಿತ್ರರಂಗದಲ್ಲಿ ಅದ್ಯಾಕೋ ಏನೋ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಳ್ಳಲೇ ಇಲ್ಲ.

ನವೀನ್ ಕೃಷ್ಣ ಈಗ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ. ಆದರೆ ಇಂತಹ ನಟ ನಟನೆ ಬಿಟ್ಟು ಹೊರ ಬರಬಾರದು. ಅವರು ಮತ್ತಷ್ಟು ಅದ್ಭುತ ಪಾತ್ರಗಳನ್ನು ಮಾಡ್ಬೇಕು ಅನ್ನೋದು ಕನ್ನಡ ಚಿತ್ರ ಪ್ರೇಮಿಗಳ ಅಭಿಲಾಷೆ.


Click it and Unblock the Notifications











