ಭಂಡಾರಿ ಸಹೋದರರ ಜೊತೆಗೆ RJ ರಶ್ಮಿಗೂ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕನ್ನಡ ಪ್ರೇಕ್ಷಕರು!
'ರಂಗಿತರಂಗ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿಂಚಿನ ಸಂಚಲನ ಮೂಡಿಸಿದ ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಇಲ್ಲಿಯವರೆಗೂ ಯಾವುದೇ ವಿವಾದಗಳಿಗೆ ಸಿಲುಕಿರಲಿಲ್ಲ. ಆದ್ರೆ, ಫಿಲ್ಟರ್ ಇಲ್ಲದೆ RJ Rapid ರಶ್ಮಿ ಶೋನಲ್ಲಿ ಮಾತನಾಡಲು ಹೋಗಿ, ಇದೀಗ ವಿನಾಕಾರಣ ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ ಭಂಡಾರಿ ಬ್ರದರ್ಸ್.
'ರಾಜರಥ' ಸಿನಿಮಾ ಬಿಡುಗಡೆಗೂ ಮುನ್ನ RJ Rapid ರಶ್ಮಿ ನಿರೂಪಣೆಯ ಶೋನಲ್ಲಿ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಹಾಗೂ ಅವಂತಿಕಾ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ....' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ RJ Rapid ರಶ್ಮಿ ಪ್ರಶ್ನಿಸಿದರು.
ಹೇಳಿ ಕೇಳಿ ಇದು ಫಿಲ್ಟರ್ ಇಲ್ಲದ ಶೋ. ಹೀಗಾಗಿ ಬೋಲ್ಡ್ ಆಗಿ ಉತ್ತರ ನೀಡಬೇಕು ಎಂಬ ಕಾರಣಕ್ಕೆ, ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು'' ಎಂದುಬಿಟ್ಟರು ಅನೂಪ್ ಭಂಡಾರಿ. ಅದೇ ಪ್ರಶ್ನೆ ನಿರೂಪ್ ಭಂಡಾರಿಗೆ ಬಂದಾಗ, ಒಂದು ಹೆಜ್ಜೆ ಮುಂದಕ್ಕೆ ಹೋಗಿ ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಎಂದರು.
ಅನೂಪ್ ಹಾಗೂ ನಿರೂಪ್ ಆಡಿರುವ ಈ ಮಾತಿನಿಂದ ಇದೀಗ ಕನ್ನಡ ಸಿನಿ ಪ್ರೇಕ್ಷಕರು ಕೋಪಿಸಿಕೊಂಡಿದ್ದಾರೆ. ಕನ್ನಡ ಪ್ರೇಕ್ಷಕರನ್ನ 'ಕಚಡ, ಲೋಫರ್' ಎಂದು ಕರೆದ ಭಂಡಾರಿ ಸಹೋದರರಿಗೆ ಸೋಷಿಯಲ್ ಮೀಡಿಯಾದಲ್ಲಿ ಮಹಾ ಮಂಗಳಾರತಿ ನಡೆಯುತ್ತಿದೆ. ಈ ನಡುವೆ ಅಂತಹ ಪ್ರಶ್ನೆ ಕೇಳಿ ವಿವಾದಕ್ಕೆ ಕಾರಣವಾದ RJ Rapid ರಶ್ಮಿಗೂ ನೆಟ್ಟಿಗರು ಬೆಂಡೆತ್ತಿ ಬ್ರೇಕ್ ಹಾಕುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನು ನೋಡಿ...

ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುವ ದರ್ದು ಯಾಕೆ.?
'RJ Rapid ರಶ್ಮಿ ಬೇಕಂತಲೇ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುವುದೇಕೆ.?' ಎಂದು ಪತ್ರಕರ್ತ ಚಿರು ಭಟ್ ಪ್ರಶ್ನಿಸಿದ್ದಾರೆ.

ಇದು ಮೊದಲೇನಲ್ಲ.!
RJ Rapid ರಶ್ಮಿ ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುತ್ತಿರುವುದು ಇದೇ ಮೊದಲೇನಲ್ಲ. ಯುವ ಗಾಯಕ ಸಂಜಿತ್ ಹೆಗ್ಡೆ ಅವರಿಗೂ RJ Rapid ರಶ್ಮಿ ಕೇಳಿದ ಕೆಲ ವಿವಾದಾತ್ಮಕ ಪ್ರಶ್ನೆಗಳನ್ನು ಚಿರು ಭಟ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ರಶ್ಮಿ 'ಕಚಡ'
''ಅನೂಪ್ ಹಾಗೂ ನಿರೂಪ್ ಗೆ ಅಂತಹ ಪ್ರಶ್ನೆ ಕೇಳಿದ ರಶ್ಮಿ ಕಚಡ'' ಎನ್ನುತ್ತಿದ್ದಾರೆ ನೆಟ್ಟಿಗರು.

ಬುದ್ಧಿ ಇಲ್ವಾ.?
''ಇಂತಹ ಪ್ರಶ್ನೆಗಳನ್ನು ಕೇಳುವ ಮೀಡಿಯಾದವರಿಗೆ ಬುದ್ಧಿ ಇಲ್ವಾ.?'' ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ.

ಅಸಹ್ಯ ಆಗುತ್ತೆ.!
'ಕಚಡ' ಎಂಬ ಪದಬಳಕೆಯನ್ನ ಅನೂಪ್ ಭಂಡಾರಿ ಮಾಡಿದ್ಮೇಲೆ, ರಶ್ಮಿ ತರಾಟೆಗೆ ತೆಗೆದುಕೊಳ್ಳುವುದು ಬಿಟ್ಟು ಹಲ್ಲು ಬಿಟ್ಟಿದ್ದಕ್ಕೆ ಕೆಲವರು ಮುನಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್.


Click it and Unblock the Notifications











