ಬ್ರೇಕ್ ನಿರೀಕ್ಷೆಯಲ್ಲಿ ಆದಿತ್ಯ; ರಾಜ್ಯೋತ್ಸವಕ್ಕೆ ಎದೆಗಾರಿಕೆ
ಸುಮನಾ ಕಿತ್ತೂರು ಅವರು ನಿರ್ದೇಶಕಿಯಾಗಿ ಈಗಾಗಲೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಅವರ ನಿರ್ದೇಶನದ 'ಸ್ಲಂ ಬಾಲ' ಹಾಗೂ 'ಕಳ್ಳರ ಸಂತೆ' ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಈಗವರು ಕಾದಂಬರಿ ಆಧಾರಿತ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದ ಹೆಸರು 'ಎದೆಗಾರಿಕೆ'.
ಭೂಗತ ಜಗತ್ತಿನ ಕಥಾಹಂದರವನ್ನು 'ಎದೆಗಾರಿಕೆ' ಒಳಗೊಂಡಿದ್ದು, ಸುಪಾರಿ ಕಿಲ್ಲರ್ ಒಬ್ಬನ ಸುತ್ತ ಕತೆ ಸುತ್ತುತ್ತದೆ. ಇದೊಂದು ಭೂಗತ ಕಥಾಹಂದರದ ಕಾದಂಬರಿಯಾದರೂ ಅಗ್ನಿ ಶ್ರೀಧರ್ ಅವರ ಬರವಣಿಗೆ ಶೈಲಿ ಹೆಜ್ಜೆಹೆಜ್ಜೆಗೂ ಕುತೂಹಲ ಮೂಡಿಸುವಂತಿದೆ.
ಸುಮನಾ ಕಿತ್ತೂರು ನಿರ್ದೇಶನದ ಈ ಚಿತ್ರಕ್ಕೆ ಅಗ್ನಿಶ್ರಿಧರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಿ.ರಾಕೇಶ್ ಛಾಯಾಗ್ರಹಣ, ದೀಪಕ್ ಪಂಡಿತ್ ಸಂಗೀತ ನೀಡಿದ್ದಾರೆ. ಬೆಂಗಳೂರು, ಮುಂಬೈ, ಸಕಲೇಶಪುರ, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಮೊದಲು ಈ ಚಿತ್ರಕ್ಕೆ ಭಾವನಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಕಾರಣಾಂತರಗಳಿಂದ ಈ ಚಿತ್ರದಿಂದ ಹಿಂದೆ ಸರಿದರು. ತೆರವಾಗಿದ್ದ ಭಾವನಾ ಸ್ಥಾನಕ್ಕೆ 'ಒಲವೇ ಮಂದಾರ' ಖ್ಯಾತಿಯ ಆಕಾಂಕ್ಷಾ ಬಂದಿದ್ದಾರೆ.
ಆದಿತ್ಯ ನಾಯಕ ನಟನಾಗಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಅತುಲ್ ಕುಲಕರ್ಣಿ, ಅಚ್ಯುತಕುಮಾರ್, ಸೃಜನ್ ಲೋಕೇಶ್, ಧರ್ಮ, ಶರತ್ ಲೋಹಿತಾಶ್ವ, ಮೇಘನಾ ಮುಂತಾದವರಿದ್ದಾರೆ.
ಆದಿತ್ಯ ಈ ಚಿತ್ರದ ಮೂಲಕ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೆ ಚಿತ್ರದ ಪೋಸ್ಟರ್ ಗಳು ಹಾಗೂ ಸ್ಟಿಲ್ಸ್ ಆಕರ್ಷವಾಗಿದ್ದು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಲಹ ಮೂಡಿಸಿದೆ. ಚಿತ್ರದ ಟ್ರೇಲರ್ ಸಹ ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











