ರಿವೈಸಿಂಗ್ ಕಮಿಟಿ ಮೆಟ್ಟಿಲೇರಿದ 'ಖತರ್ನಾಕ್' ಚಿತ್ರ
ಆರಂಭದಿಂದಲೂ 'ಖತರ್ನಾಕ್' ಚಿತ್ರ ಸುದ್ದಿ ಮಾಡುತ್ತಲೇ ಇದೆ. ಈ ಚಿತ್ರಕ್ಕೆ ಮೊದಲು ಉಮೇಶ್ ರೆಡ್ಡಿ ಎಂದು ಹೆಸರಿಡಲಾಗಿತ್ತು. ಶೀರ್ಷಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ ಖತರ್ನಾಕ್ ಎಂದು ಬದಲಾಯಿಸಲಾಯಿತು.
ಇತ್ತೀಚೆಗೆ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಅರ್ಹತಾಪತ್ರವನ್ನು ನೀಡಲು ಮುಂದಾಗಿತ್ತು. ಆದರೆ ನಮ್ಮ ಸಿನಿಮಾಗೆ ಎ ಅರ್ಹತಾ ಪತ್ರ ಬೇಡವೆಂದಿರುವ ನಿರ್ಮಾಪಕ ಆದಿತ್ಯ ರಮೇಶ್ ಅವರು ದೆಹಲಿಯ ರಿವೈಸಿಂಗ್ ಕಮಿಟಿ ಮೆಟ್ಟಿಲೇರಿದ್ದಾರೆ.
ಆದಿತ್ಯ ರಮೇಶ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಖತರ್ನಾಕ್' ಚಿತ್ರವನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆಗಳನ್ನು ನಡೆಸಿದ್ದಾರೆ. ಖತರ್ನಾಕ್ ಚಿತ್ರಕ್ಕೆ ಯು ಅಥವಾ ಯು/ಎ ಸರ್ಟಿಫಿಕೇಟ್ ಸಿಗಬೇಕು ಎಂಬುದು ನಿರ್ಮಾಪಕರ ಅಭಿಪ್ರಾಯ.ತಮ್ಮ ಚಿತ್ರದಲ್ಲಿ ಅಶ್ಲೀಲತೆ ಇಲ್ಲ. ಎಲ್ಲರೂ ಕುಳಿತು ನೋಡಬಹುದಾದಂತಹ ಚಿತ್ರ ಎಂಬುದು ನಿರ್ಮಾಪಕರ ಅಭಿಪ್ರಾಯ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಮಳವಳ್ಳಿ ಸಾಯಿಕೃಷ್ಣ. ಕಥೆ, ಚಿತ್ರಕಥೆ, ಸಂಭಾಷಣೆ ಸಹ ನಿರ್ದೇಶಕರದ್ದೇ. ಈ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿಕುಮಾರ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಸಹ ನಿರ್ದೇಶನವಿದೆ.
ಚಿತ್ರದ ಪಾತ್ರವರ್ಗದಲ್ಲಿ ರವಿಕಾಳೆ, ರವಿವರ್ಮ, ರೂಪಿಕಾ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮುರಳಿಮೋಹನ್, ತುಳಸಿಶಿವಮಣಿ, ರವೀಂದ್ರನಾಥ್, ತುಮಕೂರು ಮೋಹನ್, ಶೋಭಾರಾಘವೇಂದ್ರ ಮುಂತಾದವರಿದ್ದಾರೆ. ರೂಪಿಕಾ ಅವರ ಖತರ್ನಾಕ್ ಚಿತ್ರಗಳು ಈಗಾಗಲೆ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












