ವಿಶ್ವದಾಖಲೆ ನಿರ್ದೇಶಕ ರಾಮ ನಾರಾಯಣನ್
ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳ ನಿರ್ದೇಶಕ ರಾಮ ನಾರಾಯಣನ್ (65) ವಿಧಿವಶರಾಗಿದ್ದಾರೆ. ಅವರು ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರು. ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ (ಜೂ.22) ರಾತ್ರಿ ಮೃತಪಟ್ಟಿದ್ದಾರೆ.
ಮೂವತ್ತಾರು ವರ್ಷಗಳಲ್ಲೇ ಅತ್ಯಧಿಕ ಎಂದರೆ 125 ಚಿತ್ರಗಳನ್ನು ನಿರ್ದೇಶಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾಗಿದ್ದರು. ತಮ್ಮ ಕಮರ್ಷಿಯಲ್ ಚಿತ್ರಗಳಲ್ಲಿ ಪ್ರಾಣಿಗಳಿಗೂ ವಿಶಿಷ್ಟ ಸ್ಥಾನವನ್ನು ಕಲ್ಪಿಸಿ ಕೊಟ್ಟಂತಹ ಖ್ಯಾತಿ ರಾಮ ನಾರಾಯಣನ್ ಅವರಿಗೆ ಸಲ್ಲುತ್ತದೆ. [ಕಲ್ಪನ ಚಿತ್ರ ವಿಮರ್ಶೆ]

ಗೀತರಚನೆಕಾರನಾಗಬೇಕು ಎಂದು ಕನಸು ಹೊತ್ತು ಬಂದ ರಾಮ ನಾರಾಯಣನ್ ಬಳಿಕ ಸಂಭಾಷಣೆಕಾರರಾಗಿ, ನಿರ್ದೇಶಕರಾಗಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದರು. ಕನ್ನಡದಲ್ಲಿ ಹೆಚ್ಚಾಗಿ ಬೇಬಿ ಶ್ಯಾಮಿಲಿ ಅವರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭೈರವಿ, ಶಾಂಭವಿ, ದಾಕ್ಷಾಯಣಿ ಚಿತ್ರಗಳನ್ನು ಅವರು ತೇನಂಡಲ್ ಫಿಲಂಸ್ ಲಾಂಛನದಲ್ಲಿ ನಿರ್ದೇಶಿಸಿದ್ದಾರೆ.
ರಾಮ ನಾರಾಯಣನ್ ನಿರ್ದೇಶನದ ಕಟ್ಟಕಡೆಯ ಕನ್ನಡ ಚಿತ್ರ 'ಕಲ್ಪನ'. ತಮಿಳಿನ 'ಕಾಂಚನ' ಚಿತ್ರದ ರೀಮೇಕ್ ಆದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ನಾರಾಯಣನ್ ಅವರ ಚಿತ್ರಗಳಲ್ಲಿ ಶ್ರುತಿ ಅವರಿಗೂ ಖಾಯಂ ಪಾತ್ರ ಇರುತ್ತಿತ್ತು. ಹೊಸಬರೊಂದಿಗಿನ ಅವರ 'ವಿಲ್ಲಾ ರಂಗ' ಚಿತ್ರ ಇನ್ನೂ ತೆರೆಕಂಡಿಲ್ಲ. (ಏಜೆನ್ಸೀಸ್)


Click it and Unblock the Notifications











