ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ 'ಮುಗುಳುನಗೆ'
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿಯ ಬಹುನಿರೀಕ್ಷೆಯ 'ಮುಗುಳುನಗೆ' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಸತತವಾಗಿ ತಮಿಳುನಾಡು, ಕೇರಳ, ಹಾಗೂ ಕರ್ನಾಟಕ ರಾಜ್ಯಾದ್ಯಂತ ಶೂಟಿಂಗ್ ಮಾಡಿರುವ 'ಮುಗುಳುನಗೆ' ಈಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ.
ಚಿತ್ರೀಕರಣ ಮುಕ್ತಾಯ ಮಾಡಿದ ಸಂಭ್ರಮವನ್ನ ಚಿತ್ರತಂಡ ಅದ್ಧೂರಿಯಾಗಿ ಆಚರಿಸಿಕೊಂಡಿದೆ. ಚಿತ್ರದ ಕೊನೆಯ ಸಾಂಗ್ ಶೂಟಿಂಗ್ ಮಾಡುವ ಮೂಲಕ ಚಿತ್ರದ ಕೊನೆಯ ದೃಶ್ಯವನ್ನ ಮುಗಿಸಿದ್ದಾರೆ. ಚಿತ್ರೀಕರಣ ಮುಗಿಸಿದ ಸಂತಸಕ್ಕೆ ಸಂಪ್ರದಾಯವಾಗಿ ಕುಂಬಳಕಾಯಿ ಒಡೆದು ಸಂಭ್ರಮಿಸಿದೆ.

ಅಂದ್ಹಾಗೆ, 'ಗಾಳಿಪಟ' ಚಿತ್ರದ ನಂತರ ಭಟ್ ಹಾಗೂ ಗಣೇಶ್ ಅವರ ಕಾಂಬಿನೇಷನ್ ಚಿತ್ರ ಇದಾಗಿದ್ದು, ನಾಲ್ಕು ಕಥೆಗಳ ಜೊತೆ ಎಮೋಷನಲ್ ಕಾಮಿಡಿಯ ಶೈಲಿಯಲ್ಲಿ ರಂಜಿಸಲು ಸ್ಟಾರ್ ಜೋಡಿ ಸಿದ್ದವಾಗಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ನಾಯಕಿಯರಿದ್ದು, 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಆರೋರ, ಆಶಿಕಾ, ನಿಖಿತಾ ನಾರಾಯಣ್ ಮತ್ತು ವಿಶೇಷ ಪಾತ್ರದಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.
ಉಳಿದಂತೆ 'ಮುಗುಳುನಗೆ' ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಸೈಯದ್ ಸಲಾಂ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ಹಾಗೂ ಗಣೇಶ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.


Click it and Unblock the Notifications











