ನಟಿ ಶಾಂತಮ್ಮ ಮೂಕ ನೋವಿಗೆ ಮಿಡಿದ ಚಿತ್ರರಂಗ
ಕನ್ನಡ ಚಿತ್ರರಂಗದ ಹಿರಿಯ ಪೋಷಕ ಕಲಾವಿದೆ ಶಾಂತಮ್ಮ (86) ಈ ಇಳಿವಯಸ್ಸಿನಲ್ಲಿ ಇಷ್ಟೆಲ್ಲಾ ಕಷ್ಟಗಳನ್ನು ಒಡಲಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದರೆ? ಕನ್ನಡ ಚಿತ್ರೋದ್ಯಮ ಈ ಹಿರಿಯ ಚೇತನದ ಮೂಕ ನೋವನ್ನು ಗಮನಿಸದಷ್ಟು ಮೂಕವಾಗಿತ್ತೇ? ಎಂಬ ಅನುಮಾನಗಳು ಇಂದು ಎಲ್ಲರನ್ನೂ ಕಾಡಿದವು.
ಇದಕ್ಕೆ ಕಾರಣವಾಗಿದ್ದು ಟಿವಿ ವಾಹಿನಿಗಳಲ್ಲಿ ಬಿತ್ತರವಾದ ಸುದ್ದಿಗಳು. ಈ ಹಿರಿಯ ಜೀವ ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದು ತಮ್ಮ ಸಂಕಷ್ಟವನ್ನು ಮುಖ್ಯಮಂತ್ರಿಗಳ ಬಳಿ ತೋಡಿಕೊಂಡಿದ್ದರು. ತಮಗೆ ಸಹಾಯ ಮಾಡಿ ಎಂಬುದಕ್ಕಿಂತಲೂ ಹೆಚ್ಚಾಗಿ ತಮ್ಮ ಇಬ್ಬರು ಮಕ್ಕಳೂ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ನೋವು ಅವರನ್ನು ಕಾಡುತ್ತಿತ್ತು.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕಿತ್ಸೆ ವೆಚ್ಚ ಭರಿಸುವ ಭರವಸೆಯನ್ನು ನೀಡಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ತಮ್ಮ ಮಗಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಮ್ಮ ಪುತ್ರನಿಗೂ ನಾಲ್ಕೈದು ತಿಂಗಳ ಹಿಂದೆ ಕ್ಯಾನ್ಸರ್ ಸೋಕಿದೆ. ವಯಸ್ಸಾದ ಕಾಲದಲ್ಲಿ ಮಕ್ಕಳಿಗೆ ಹೀಗಾಯಿತಲ್ಲಾ ಎಂಬ ನೋವು ತಮ್ಮನ್ನು ಕಾಡುತ್ತಿದೆ. ದೇವರ ದಯೆಯಿಂದ ತಾವು ಆರೋಗ್ಯವಾಗಿದ್ದೇನೆ ಎಂದಿದ್ದಾರೆ.
ತಮ್ಮ ಪುತ್ರ ರಾಜೇಂದ್ರ ಹಾಗೂ ಪುತ್ರಿ ಸುಮಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಇನ್ನು ತಮ್ಮ ಮೊಮ್ಮಗ ಕಿವುಡ ಮತ್ತು ಮೂಕ. ಇವರ ಚಿಕಿತ್ಸೆಗೆ ತಮ್ಮ ಶಕ್ತಿ ಮೀರಿ ಸಾಕಷ್ಟು ಖರ್ಚು ಮಾಡಿದ್ದೇವೆ. ಇನ್ನು ತಮ್ಮಿಂದಾಗದು. ದಯವಿಟ್ಟು ಸಹಾಯ ಮಾಡಿ ಎಂಬುದು ಅವರ ಮನವಿಯಾಗಿತ್ತು.
ಪೋಷಕ ಕಲಾವಿದೆ ಶಾಂತಮ್ಮನ ಸಂಕಷ್ಟ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮೊದಲು ಸ್ಪಂದಿಸಿದ್ದು ನಟ ದುನಿಯಾ ವಿಜಯ್. ಕೂಡಲೆ ರು.50 ಸಾವಿರದ ಚೆಕ್ ನ್ನು ತಮ್ಮ ಸಹಾಯಕನೊಂದಿಗೆ ಕಳುಹಿಸಿಕೊಟ್ಟರು. ತಾವು ಚಿತ್ರೀಕರಣದಲ್ಲಿರುವ ಕಾರಣ ಅವರನ್ನು ನೋಡಲು ಸಾಧ್ಯವಾಗುತ್ತಿಲ್ಲ. ಅವರು ತಮಗೂ ತಾಯಿ ಇದ್ದಂತೆ ಎಂದಿದ್ದಾರೆ ವಿಜಿ.
ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಅವರು ಧಾವಿಸಿ ಬಂದರು. ಅವರು ರು.1 ಲಕ್ಷ ರುಪಾಯಿಗಳ ಪರಿಹಾರವನ್ನು ನೀಡಿದರು. ತುಂಬಾ ಮೃದು ಸ್ವಭಾವದ ಶಾಂತಮ್ಮ ನವರು ನಾನು ಅಭಿನಯಿಸಿದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟಿವಿಗಳಲ್ಲಿ ಅವರು ಕಣ್ಣೀರು ಹಾಕಿದ್ದನ್ನು ನೋಡಿದಾಗ ನನಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ನಾನೂ ಒಬ್ಬ ಕಲಾವಿದೆಯಾಗಿ ನನಗೂ ಅವರ ಕಷ್ಟ ಗೊತ್ತಾಗುತ್ತದೆ. ನಮ್ಮ ಮನೆಯಲ್ಲೂ ವಯಸ್ಸಾದವರಿದ್ದಾರೆ. ಆವರು ಅತ್ತರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











