ಮಂಜುನಾಥ ಬಿಎ ಎಲ್ಎಲ್ಬಿ ಕಲೆಕ್ಷನ್ ಜೈಹಿಂದ್!
ಈ ರೀತಿ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಶುಕ್ರವಾರ (ಸೆ.14) ಎರಡು ಕನ್ನಡ ಚಿತ್ರಗಳು ಮಂಜುನಾಥ ಬಿಎ ಎಲ್ಎಲ್ಬಿ ಹಾಗೂ ಜೈಹಿಂದ್ ಬಿಡುಗಡೆಯಾಗಿವೆ. ಜಗ್ಗೇಶ್ ಅಭಿನಯದ ಮಂಜುನಾಥ ಬಿ.ಎ, ಎಲ್ಎಲ್ಬಿ ಚಿತ್ರವನ್ನು ನೋಡಲು ಜನವೇ ಇಲ್ಲ. ಇನ್ನು ಜೈಹಿಂದ್ ಪರಿಸ್ಥಿತಿ ಕೇಳಲೇಬೇಡಿ. ಕಾರಣ ಗೊತ್ತೇ ಇದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಮುಷ್ಕರ ಹೂಡಿರುವುದು.
ಬಸ್ಸುಗಳಿಲ್ಲದೆ ಜನ ಚಿತ್ರಮಂದಿರದ ಕಡೆ ಹೆಜ್ಜೆ ಹಾಕಲು ಸಾಧ್ಯವಾಗುತ್ತಿಲ್ಲ. ಯಾವುದೇ ಥಿಯೇಟರ್ ನೋಡಿದರೂ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿವೆ. ವಿಶೇಷ ಎಂದರೆ ನವರಸ ನಾಯಕ ಜಗ್ಗೇಶ್ ಅವರು ಕೆಎಸ್ಆರ್ಟಿಸಿ ಉಪಾಧ್ಯಕ್ಷರೂ ಆಗಿರುವುದು. ಅವರಿಗೆ ಹೀಗಾಗುತ್ತದೆ ಎಂದರೆ ಇನ್ನು ಜನಸಾಮಾನ್ಯರ ಪಾಡೇನು?
ಸಿನೆಮಾ ಕತೆ ಬಿಡಿ. ಜಗ್ಗೇಶ್ ಪಾಡು ಈಗ ಉಗುಳುವಂಗೂ ಇಲ್ಲ ನುಂಗುವಂಗೂ ಇಲ್ಲ ಎಂಬಂತಾಗಿದೆ. ಸಾರಿಗೆ ನೌಕರರ ಮುಷ್ಕರದ ಬಿಸಿ ಅವರ ಚಿತ್ರಕ್ಕೂ ತಟ್ಟಿದೆ. ಬಸ್ಸುಗಳಿಲ್ಲದೆ ಜನ ಅವರ 'ಮಂಜುನಾಥ ಬಿಎ, ಎಲ್ಎಲ್ಬಿ' ಚಿತ್ರವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಚಿತ್ರದ ಕಲೆಕ್ಷನ್ಗೆ ಭಾರಿ ಹೊಡೆತ ಎಂಬುದು ಮೇಲ್ಮೋಟಕ್ಕೆ ಗೊತ್ತಾಗುತ್ತದೆ.
"ಬನ್ನಿ ನಿಮಗೂ ಹಾಕಸ್ತೀನಿ" ಎಂದು ಅವರು ಕರೆಯುತ್ತಿದ್ದರೂ ಜನ ಬಸ್ಸುಗಳಿಲ್ಲದೆ ನೀವು ಹಾಕ್ಸೋದು ಬೇಡ ನಾವು ಬರೋದು ಬೇಡ ಎನ್ನುತ್ತಿದ್ದಾರೆ. ಕರ್ನಾಟಕದಾದ್ಯಂತ ಸುಮಾರು 90ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ 'ಮಂಜುನಾಥ, ಬಿಎ ಎಲ್ಎಲ್ ಬಿ' ಚಿತ್ರಮಂದಿರಗಳು ಬಣಗುಡುತ್ತಿವೆ.
ಒಂದು ವೇಳೆ ಮುಷ್ಕರ ಅಂತ್ಯವಾದರೆ ಅಷ್ಟೊ ಇಷ್ಟೋ ಕಲೆಕ್ಷನ್ ಆಗಬಹುದು. ಇಲ್ಲದಿದ್ದರೆ ಚಿತ್ರಮಂದಿರದ ಬಾಡಿಗೆ ಕಟ್ಟೋದು ಕಷ್ಟವಾಗುತ್ತದೆ ಎನ್ನುತ್ತವೆ ಗಾಂಧಿನಗರ ಮೂಲಗಳು. ಜಗ್ಗೇಶ್ ಚಿತ್ರ ತೆರೆಕಂಡು ಸರಿಸುಮಾರು ಒಂದು ವರ್ಷವೇ ಕಳೆದುಹೋಗಿದೆ. ಮಂಜುನಾಥ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಅಷ್ಟೋ ಇಷ್ಟೋ ನಿರೀಕ್ಷೆ ಇತ್ತು.
ರೀಮಾವೋರಾ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಗಿರಿಜಾ ಲೋಕೇಶ್, ಶಂಕರ್ ಪಾಟೀಲ್, ಚಿದಾನಂದ್ ಮುಂತಾದವರಿದ್ದಾರೆ. ಅಂದಹಾಗೆ 'ಮಂಜುನಾಥ, ಬಿಎ ಎಲ್ಎಲ್ಬಿ' ಚಿತ್ರ ಮಲಯಾಳಂನ 'ಹಲೋ' ಚಿತ್ರದ ರೀಮೇಕ್. (ಒನ್ಇಂಡಿಯಾ ಕನ್ನಡ)


Click it and Unblock the Notifications











