ಮಂಡ್ಯದಲ್ಲಿ ಹೋಗಿ ಮಾತಾಡಿ, ಇಲ್ಲಿ ಬೇಡ: ಶಿವಣ್ಣನಿಗೆ ಕುಮಾರ್ ಬಂಗಾರಪ್ಪ ಟಾಂಗ್
Recommended Video

ಎಲ್ಲರ ಚಿತ್ತ ಮಂಡ್ಯ ಕಡೆ ಇದೆ. ದೇಶದ ಚುನಾವಣೆಗಿಂತ ಮಂಡ್ಯ ಲೋಕಸಭೆ ಚುನಾವಣೆ ರಾಜ್ಯಕ್ಕೆ ಪ್ರತಿಷ್ಠೆಯಾಗಿದೆ. ನಿಖಿಲ್ ಕುಮಾರ್ ಮತ್ತು ಸುಮಲತಾ ಸ್ಪರ್ಧಿಸಿದ್ದರೇ, ದರ್ಶನ್, ಯಶ್, ಸಿಎಂ, ಮಾಜಿ ಸಿಎಂ, ಮಾಜಿ ಪ್ರಧಾನಿ ಹೀಗೆ ಇಡೀ ಸರ್ಕಾರವೇ ಮಂಡ್ಯದಲ್ಲಿ ಬೀಡುಬಿಟ್ಟಿದೆ.
ಇದೀಗ, ಮಂಡ್ಯ ರಾಜಕೀಯಕ್ಕೆ ಸೆಡ್ಡು ಹೊಡೆಯವತ್ತ ಶಿವಮೊಗ್ಗ ರಾಜಕಾರಣವೂ ಸಾಗುತ್ತಿದೆ. ಹೌದು, ನಾನು ಯಾರ ಪರವೂ ಪ್ರಚಾರ ಮಾಡಲ್ಲ ಎಂದಿದ್ದ ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಶಾಸಕ ಹಾಗೂ ಸಂಬಂಧಿ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿಗಷ್ಟೆ ಭದ್ರಾವತಿಗೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್ ಅವರ ನಡೆಯನ್ನ ಕುಮಾರ್ ಬಂಗಾರಪ್ಪ ಪ್ರಶ್ನಿಸಿದ್ದಾರೆ. 'ನೀವೇನಾದರೂ ಮಾತನಾಡುವಾಗಿದ್ದರೇ ಮಂಡ್ಯದಲ್ಲಿ ಹೋಗಿ ಮಾತಾಡಿ, ಭದ್ರಾವತಿಯಲ್ಲಿ ಬೇಡ' ಎಂದು ಕಿಡಿಕಾರಿದ್ದಾರೆ. ಹ್ಯಾಟ್ರಿಕ್ ಹೀರೋ ಬಗ್ಗೆ ಬಂಗಾರಪ್ಪ ಪುತ್ರ ಹೀಗೇಳಲು ಕಾರಣವೇನು? ಶಿವಣ್ಣ ಏನು ಹೇಳಿದ್ದರು? ಮುಂದೆ ಓದಿ....

ಶಿವಣ್ಣ ವಿರುದ್ಧ ಬಂಗಾರಪ್ಪ ಪುತ್ರ ಗರಂ
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ, ಶಿವಮೊಗ್ಗಕ್ಕೆ ಭೇಟಿ ನೀಡಿ ಸಹೋದರನ ಗೆಲುವಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದಿದ್ದರು. ನಂತರ ನಟ ಶಿವರಾಜ್ ಕುಮಾರ್ ಕೂಡ ಕವಚ ಚಿತ್ರದ ಪ್ರಮೋಷನ್ ಗಾಗಿ ಭದ್ರಾವತಿಗೆ ಭೇಟಿ ನೀಡಿದ್ದರು. ಈ ವೇಳೆ ಶಿವರಾಜ್ ಕುಮಾರ್ ಮಾತನಾಡಿದ್ದ ಮಾತುಗಳು ಈಗ ಕುಮಾರ್ ಬಂಗಾರಪ್ಪ ಅವರನ್ನ ಕೆರಳಿಸಿದೆ.

ಶಿವಣ್ಣ ಏನು ಮಾತನಾಡಿದ್ದರು?
ಕವಚ ಸಿನಿಮಾ ಯಶಸ್ಸಿನ ಹಿನ್ನೆಲೆ ಭೇಟಿ ನೀಡಿದ ಶಿವಣ್ಣ ರಾಜಕೀಯ ಬೆಳವಣಿಗೆ ಬಗ್ಗೆಯೂ ಮಾತನಾಡಿದರು. 'ನನಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ, ಎಲ್ಲರ ಜೊತೆಯಲ್ಲೂ ಚೆನ್ನಾಗಿ ಇದ್ದೀನಿ. ಒಳ್ಳೆಯ ಅಭ್ಯರ್ಥಿಗಳಿಗೆ ಜನರು ಮತ ಹಾಕ್ತಾರೆ' ಎಂದರು. ಯಾರೇ ಆಗಲಿ ಮಾತನಾಡುವಾಗ ಹುಷಾರಾಗಿ ಮಾತಾನಾಡಿ, ಭಿನ್ನಾಭಿಪ್ರಾಯಗಳು ಬರಬಾರದು ಆ ರೀತಿ ಮಾತಾಡಿ' ಎಂದು ಕಿವಿಮಾತು ಹೇಳಿದ್ದರು.

ಮಂಡ್ಯಕ್ಕೆ ಹೋಗಿ ಮಾತಾಡಲಿ
''ಎಲ್ಲರೂ ದ್ವೇಷ ಇಟ್ಕೊಂಡು ಮಾತನಾಡಬಾರದು, ಕೆಟ್ಟದಾಗಿ ಮಾತಾಡಬಾರದು ಎಂದು ಹೇಳುತ್ತಿರುವ ಶಿವರಾಜ್ ಕುಮಾರ್ ಅವರು, ಇದನ್ನ ಮಂಡ್ಯದಲ್ಲಿ ಹೋಗಿ ಹೇಳಲಿ, ಭದ್ರಾವತಿಯಲ್ಲಿ ಬೇಡ. ಈ ಹಿಂದೆ ಅವರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಜೆಡಿಎಸ್ ಅಭ್ಯರ್ಥಿ ಪರ ಎಲ್ಲ ಸಿನಿತಾರೆಯರನ್ನ ಒತ್ತಾಯವಾಗಿ ಕರೆದುಕೊಂಡು ಬಂದು ಪ್ರಚಾರ ಮಾಡಿಸಿದ್ದು ನೋಡಿದ್ದೀವಿ'' ಎಂದು ಹೇಳಿ ಟಾಂಗ್ ನೀಡಿದರು.

ಕವಚ ತೆಗೆದು ರಾಜಕೀಯಕ್ಕೆ ಬರಲಿ
''ರಾಜ್ ಕುಮಾರ್ ಕುಟುಂಬದವರು ಅಲ್ಲಿ ರಾಜಕೀಯ ಬೇಡ ಎಂದು ಹೇಳಿ, ಇಲ್ಲಿ ಬಂದು ಕವಚ ಹಾಕ್ಕೊಂಡು ರಾಜಕೀಯ ಮಾಡೋದು ಬೇಡ. ನಿಮ್ಮ ಕವಚವನ್ನ ತೆಗೆದು ನೇರವಾಗಿ ಬಂದು, ಸಿನಿಮಾ ಆದರೂ ಮಾಡಿ ಅಥವಾ ರಾಜಕೀಯವಾದರೂ ಮಾಡಿ'' ಎಂದು ಕಿಡಿಕಾರಿದ್ದಾರೆ.

ಶಿವಣ್ಣ ಹೋಗಿದ್ದು ಕವಚ ಪ್ರಚಾರಕ್ಕೆ.!
ಅಂದ್ಹಾಗೆ, ಶಿವರಾಜ್ ಕುಮಾರ್ ದಂಪತಿ ಭದ್ರಾವತಿಗೆ ಹೋಗಿದ್ದರ ಹಿಂದೆ ಎರಡು ಕಾರಣವಿದೆ. ಗೀತಾ ಅವರು ಬಂದಿದ್ದು ಮಧುಬಂಗಾರಪ್ಪನ ಪರ ಕೆಲಸ ಮಾಡಲು. ಆದ್ರೆ, ಶಿವರಾಜ್ ಕುಮಾರ್ ಬಂದಿದ್ದು ಕವಚ ಸಿನಿಮಾದ ಥಿಯೇಟರ್ ವಿಸಿಟ್ ಗೆ. ಆದ್ರೆ, ಕುಮಾರ್ ಬಂಗಾರಪ್ಪ ಅವರು, ಇದು ಪ್ರಚಾರಕ್ಕಾಗಿ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.


Click it and Unblock the Notifications











