ಸೆನ್ಸಾರ್ ಆಫೀಸರ್ ವಿರುದ್ಧ ಹರಿಹಾಯ್ದ ಮದನ್ ಪಟೇಲ್

ರೀಜನಲ್ ಸೆನ್ಸಾರ್ ಆಫೀಸರ್ ಕೆ ನಾಗರಾಜು, ತಮ್ಮಲ್ಲಿ ಲಂಚ ಕೇಳಿದ್ದಾರೆಂಬ ಆರೋಪವನ್ನು ಮದನ್ ಪಟೇಲ್ ಮಾಡಿದ್ದಾರೆ. ಅವರು ಹೇಳುವ ಪ್ರಕಾರ, "ನನ್ನ ಸತ್ಯಾನಂದ ಚಿತ್ರವನ್ನು ಸೆನ್ಸಾರ್ ಮಾಡಲು ಸೆನ್ಸಾರ್ ಆಫೀಸರ್ ನಾಗರಾಜು ಲಂಚ ಕೇಳಿದ್ದಾರೆ. ಇಡೀ ಚಿತ್ರಕ್ಕೆ ರು. 5 ಲಕ್ಷ, ಹಾಗೂ ಪ್ರತಿಯೊಂದು ಹಾಡಿಗೆ ತಲಾ ರು. 50,000 ಲಂಚ ಕೇಳಿದ್ದಾರೆ.
ಈ ಕುರಿತು ನಾನು 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ' ಹಾಗೂ 'ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ' ಎರಡೂ ಕಡೆ ದೂರು ಸಲ್ಲಿಸಿದ್ದೇನೆ. ಆದರೆ ಅದರಿಂದ ಇಲ್ಲಿಯವೆರೆಗೆ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ನಾನು ಈ ಸೆನ್ಸಾರ್ ಆಫೀಸರ್ ವಿರುದ್ಧ 'ಸಿಬಿಐ'ಗೆ ದೂರು ನೀಡಲಿದ್ದೇನೆ" ಎಂದು ಮದನ್ ಪಟೇಲ್ ಭಾನುವಾರ, ಆಗಸ್ಟ್ 12 ರಂದು ತಮ್ಮ ಪುತ್ರ ಮಯೂರ್ ಪಟೇಲ್ ನಾಯಕತ್ವದ 'ಪ್ಯಾಸೆಂಜರ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.
ಕೆಎಫ್ ಸಿಸಿ ಇರುವುದೇ ವೇಸ್ಟ್ ಎಂದು ಹರಿಹಾಯ್ದ ಮದನ್ ಪಟೇಲ್, ಇದು ಯಾವುದೇ ಸಮಸ್ಯೆಗೆ ಪರಿಹಾರ ಕೊಡಲು ಅಸಮರ್ಥವಾಗಿದೆ. ಅಲ್ಲೇ ನಡೆಯುವ ಭಿನ್ನಮತ ಚಟುವಟಿಕೆಗೂ ಅದು ಕಡಿವಾಣ ಹಾಕಲು ವಿಫಲವಾಗಿದೆ. ಇನ್ನೂ ಅಲ್ಲಿಯೇ ನನಗೆ ನ್ಯಾಯ ಸಿಗುವುದೆಂಬ ಭರವಸೆ ನನಗಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ಸಿಬಿಐ ಮೊರೆ ಹೋಗಲಿದ್ದೇನೆ" ಎಂದು 'ಪ್ಯಾಸೆಂಜರ್' ಆಡಿಯೋ ಬಿಡುಗಡೆ ವೇಳೆ ಮದನ್ ಗುಡುಗಿದ್ದಾರೆ.
ಮುಂದುವರಿದ ಮದನ್ ಪಟೇಲ್, "ನನಗೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವಲ್ಲಿ ಯಾವುದೇ ರೀತಿಯ ಆಸಕ್ತಿಯಿಲ್ಲ. ಹಾಗೆಂದು ನಾನು ಕನ್ನಡ ವಿರೋಧಿ ಎಂದು ಅರ್ಥೈಸಬೇಕಾಗಿಲ್ಲ. ನನ್ನ ಖ್ಯಾತ ಸಾಹಿತಿ ಮಿತ್ರರೊಬ್ಬರ ಪ್ರಕಾರ, ಡಬ್ಬಿಂಗ ವಿರೋಧ ಸಲ್ಲದು. ನಾನು ಅಷ್ಟೇ, ಡಬ್ಬಿಂಗ್ ಸಂಸ್ಕೃತಿಯನ್ನು ಸ್ವಾಗತಿಸುತ್ತೇನೆ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











