ಕಿಚ್ಚ ಸುದೀಪ್ 'ರನ್ನ' ಶೀರ್ಷಿಕೆ ಅಂತರಾರ್ಥ ಏನು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರ 'ರನ್ನ' ಈಗಾಗಲೆ ಸದ್ದಿಲ್ಲದಂಟೆ ಸೆಟ್ಟೇರಿದೆ. ಈ ಚಿತ್ರಕ್ಕೆ ವಿಕ್ಟರಿ ಹಾಗೂ ಅಧ್ಯಕ್ಷ ಚಿತ್ರಗಳ ನಿರ್ದೇಶಕ ನಂದಕಿಶೋರ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಬಿಗ್ ಬಾಸ್'ನ 'ಸಖತ್ ಸಂಡೇ ವಿತ್ ಸುದೀಪ್' (ಸೆ.7) ಕಾರ್ಯಕ್ರಮದಲ್ಲಿ 'ರನ್ನ' ಚಿತ್ರದ ಬಗೆಗಿನ ಕೆಲವು ಆಸಕ್ತಿಕರ ವಿಚಾರಗಳು ಅನಾವರಣಗೊಂಡವು. ಚಿತ್ರಕ್ಕೆ ರನ್ನ ಎಂದು ಶೀರ್ಷಿಕೆ ಇಡಲು ಕಾರಣ ಏನು ಎಂಬ ಗುಟ್ಟನ್ನು ನಂದಕಿಶೋರ್ ಬಿಟ್ಟುಕೊಟ್ಟರು.
ನನ್ನ ಶಿಷ್ಯ, ತಮ್ಮ, ಕುಟುಂಬ ಸದಸ್ಯ ಎಂದು ನಿರ್ದೇಶಕ ನಂದಕಿಶೋರ್ (ಸುಧೀರ್ ಅವರ ಪುತ್ರ) ಬಗ್ಗೆ ಸುದೀಪ್ ಹೆಮ್ಮೆಯಿಂದ ಹೇಳಿದರು. ರನ್ನ ಚಿತ್ರಕ್ಕೆ 'ಬುಲ್ ಬುಲ್' ಖ್ಯಾತಿಯ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದು ಅವರೂ ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್
ರನ್ನ ಚಿತ್ರವು ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಪವನ್ ಕಲ್ಯಾಣ್ ಅಭಿನಯಿಸಿದ್ದ ಈ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ಏಕತಾನತೆಯನ್ನು ಮುರಿದಂತಹ ಚಿತ್ರ ಇದು. ಸರಿಸುಮಾರು ರು.55 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.85 ಕೋಟಿ ಬಾಚಿತು.

ರನ್ನ ಎಂದರೆ ಒಂದು ಮಹಾ ಕವಿ ಹೆಸರು ಹೌದು
ಚಿತ್ರಕ್ಕೆ 'ರನ್ನ' ಎಂಬ ಶೀರ್ಷಿಕೆ ಇಡಲು ಕಾರಣ ಏನು ಎಂದು ನಿರ್ದೇಶಕ ನಂದಕಿಶೋರ್ ಅವರು ವಿವರ ನೀಡಿದರು. ರನ್ನ ಎಂದರೆ ಒಂದು ಮಹಾ ಕವಿ ಹೆಸರು ಹೌದು, ಪ್ರೀತಿಯಿಂದ ಕರೆಯುವ ಹೆಸರು ಹೌದು. ನನ್ನ ಗುರುಗಳನ್ನು ಅಷ್ಟು ಪ್ರೀತಿಸುತ್ತೀನಿ ಎಂಬ ಸಂಕೇತವಾಗಿ ಈ ಶೀರ್ಷಿಕೆಯನ್ನು ಇಟ್ಟಿದ್ದೇನೆ ಎಂದರು.

ದುರ್ಯೋಧನನಷ್ಟೇ ಛಲನವುಳ್ಳ ನಾಯಕ
ರನ್ನ ಬರೆದಿರುವುದು "ಛಲದಿಂ ದುರ್ಯೋಧನ" ಎಂಬ ಕಾವ್ಯ. ದುರ್ಯೋಧನನಿಗೆ ಛಲ ಎಷ್ಟಿತ್ತು ಎಂಬುದು ಇದುವರೆಗೂ ಯಾರೂ ಅಷ್ಟು ಛಲ ತೋರಿಸಿಲ್ಲ. ನನ್ನ ಸಿನಿಮಾದ ನಾಯಕ ಸಹ ಅಷ್ಟೇ ಛಲದಿಂದ ಬರುತ್ತಾನೆ, ಬದುಕುತ್ತಾನೆ ಎಂಬ ಸಂಕೇತವಾಗಿ ಆ ಟೈಟಲ್ ಇಟ್ಟಿದ್ದೇನೆ ಎಂದರು.

ರನ್ನ ಮೋಷನ್ ಪೋಸ್ಟರ್ ಬಿಡುಗಡೆ
ಇದೇ ಸಂದರ್ಭದಲ್ಲಿ ರನ್ನ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. "ನಾನೊಂಥರಾ ತ್ರಿಡಿ ಪಿಕ್ಚರ್ ಇದ್ದಾಗೆ. ಹತ್ತಿರದಿಂದ ನೋಡಿದರೂ ದೂರದಿಂದ ನೋಡಿದರೂ ಮಂಜು ಮಂಜಾಗೇ ಕಾಣಿಸ್ತೀನಿ. ತಾಳ್ಮೆ ಎಂಬ ಕನ್ನಡಕ ಹಾಕಿಕೊಂಡು ಕರೆಕ್ಟಗಾಗಿ ನೋಡಿದರೆ ಮಾತ್ರ ಈ ಆರಡಿ ಕಟೌಟ್ ಗೆ ಒಂದು ಕ್ಲಾರಿಟಿ ಸಿಗೋದು" ಎಂಬ ಡೈಲಾಗ್ ಮೋಷನ್ ಪೋಸ್ಟರ್ ನ ಪ್ರಮುಖ ಆಕರ್ಷಣೆಯಾಗಿತ್ತು.

ಚಿತ್ರದ ನಾಯಕಿ ಬುಲ್ ಬುಕ್ ರಚಿತಾ ರಾಮ್
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮೋಷನ್ ಪೋಸ್ಟರನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ನಂದಕಿಶೋರ್ ತಿಳಿಸಿದರು. ಸಮಯಾಭಾವದ ಕಾರಣಕ್ಕೋ ಏನೋ ನಾಯಕಿ ರಚಿತಾ ರಾಮ್ ಗೆ ಮಾತನಾಡಲು ಅವಕಾಶ ಸಿಗಲಿಲ್ಲ.


Click it and Unblock the Notifications











