ಜಾತಿ ಆಧರಿತ ಮೀಸಲಾತಿ ನಿಲ್ಲಿಸಿ: ಮುಖ್ಯ ಮಂತ್ರಿ ಚಂದ್ರು
ನಟ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಜಾತಿ ಮೀಸಲಾತಿ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಚಂದ್ರು ಅವರ ಅಭಿಪ್ರಾಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
''ಜಾತಿ ಆಧಾರದ ಮೇಲೆ ನೀಡುವ ಮೀಸಲಾತಿಯನ್ನು ನಿಲ್ಲಿಸಬೇಕು ಆರ್ಥಿಕ ಸ್ಥಿತಿಯ ಆಧಾರದಲ್ಲಿ ಸರ್ಕಾರವು ಮೀಸಲಾತಿ ನೀಡಬೇಕು'' ಎಂದು ಮುಖ್ಯಮಂತ್ರಿ ಚಂದ್ರು.
''ಸರ್ಕಾರಗಳು ಎಲ್ಲ ಜಾತಿಗಳಲ್ಲಿನ ಬಡವರನ್ನು ಗುರುತಿಸಿ ಅವರಿಗೆ ಮೀಸಲಾತಿ ನೀಡಲಿ ಎಂದಿರುವ ಈ ಹಿರಿಯ ನಟ, ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿಯ ಅಗತ್ಯವೂ ಇದೆ ಎಂದಿದ್ದಾರೆ.
ಅತಿ ಹಿಂದುಳಿದ ಜಾತಿಗಳ ಜಾಗೃತ ವೇದಿಕೆ ಗೌರವಾಧ್ಯಕ್ಷರಾಗಿರುವ ಮುಖ್ಯಮಂತ್ರಿ ಚಂದ್ರು ತುಮಕೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇಲಿನಂತೆ ಹೇಳಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅವರ ಅಭಿಪ್ರಾಯಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ, ಇನ್ನೂ ಹಲವರು ಮೀಸಲಾತಿಯ ಉದ್ದೇಶ ಮುಖ್ಯಮಂತ್ರಿ ಚಂದ್ರು ಅವರಿಗೆ ಅರ್ಥವಾದಂತಿಲ್ಲ ಎಂದು ಟೀಕಿಸಿದ್ದಾರೆ.

ಬಲಿಷ್ಠ ಸಮಯದಾಯವನ್ನು 2ಎಗೆ ಸೇರಿಸಬೇಡಿ: ದ್ವಾರಕನಾಥ್
ಇದೇ ಸಭೆಯಲ್ಲಿ ಮಾತನಾಡಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್, ''2ಎ ಗೆ ಯಾವುದೇ ಬಲಿಷ್ಠ ಸಮುದಾಯ ಬರಬಾರದು ಎಂಬುದು ನಮ್ಮ ಒಕ್ಕೊರಲ ಒತ್ತಾಯವಾಗಿದೆ. ಇದರಿಂದ102 ಜಾತಿ ಮತ್ತು ಪ್ರವರ್ಗ 1 ರಲ್ಲಿ 95 ಜಾತಿಗಳಿಗೆ ಅನ್ಯಾಯ ಆಗಲಿದೆ. ಅತಿ ಹಿಂದುಳಿದ ಅನೇಕ ಅಸಹಾಯಕ ಸಮುದಾಯಗಳಿಗೆ ಇನ್ನೂ ಕೂಡ 1% ಮೀಸಲಾತಿ ತಲುಪಿಲ್ಲ. ದೊಡ್ಡ ಸಮುದಾಯ ಬಂದು ಇಲ್ಲಿ ಸೇರಿಕೊಂಡರೆ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಶಾಸನ ಸಭೆ ಮತ್ತು ಲೋಕಸಭೆಯಲ್ಲಿ ಕೇವಲ ಎಸ್ಸಿ ಎಸ್ಟಿಗೆ ಮಾತ್ರ ಮೀಸಲಾತಿ ಕೊಟ್ಟಿದ್ದಾರೆ. ಹಿಂದುಳಿದ ವರ್ಗಗಳಿಗೂ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮೀಸಲಾತಿ ಕೊಡಬೇಕು ಎಂಬ ಒತ್ತಾಯ ಇದೆ. ಪಂಚಮ ಸಾಲಿಗರಿಗೆ 2ಎ ಮೀಸಲಾತಿ ಕೊಡಬಾರದು'' ಎಂದು ಆಗ್ರಹಿಸಿದರು.

ಶಾಸಕರೂ ಆಗಿದ್ದ ಮುಖ್ಯಮಂತ್ರಿ ಚಂದ್ರು
ಕನ್ನಡದ ಹಿರಿಯ ನಟರಾಗಿರುವ ಮುಖ್ಯಮಂತ್ರಿ ಚಂದ್ರು ರಾಜಕಾರಣಿಯೂ ಆಗಿದ್ದಾರೆ. 1985ರಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಚಂದ್ರು ಶಾಸಕರಾಗಿ ಆಯ್ಕೆ ಆಗಿದ್ದರು. ಆಗ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರೊಟ್ಟಿಗೆ ಆಪ್ತ ಬಂಧನವನ್ನು ಸಹ ಚಂದ್ರು ಹೊಂದಿದ್ದರು. 1989ರಲ್ಲಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲುಂಡರು. 1991 ರಲ್ಲಿ ಜನತಾ ದಳ ತೊರೆದ ಚಂದ್ರು ಬಿಜೆಪಿ ಸೇರ್ಪಡೆ ಆದರು. 1998ರಲ್ಲಿ ಪರಿಷತ್ಗೆ ನಾಮನಿರ್ದೇಶನಗೊಂಡು ಸೇವೆ ಸಲ್ಲಿಸಿದರು. ನಂತರ ಮತ್ತೆ 2004ರಲ್ಲಿ ಪರಿಷತ್ಗೆ ನಾಮನಿರ್ದೇಶನಗೊಂಡರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿಯೂ ನೇಮಕವಾದರು. ಬಳಿಕ 2014ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಚಂದ್ರು ಆ ನಂತರ ಕನ್ನಡ ಪರ ಹೋರಾಟಗಳಲ್ಲಿ ತಮ್ಮನ್ನು ಹೆಚ್ಚಿಗೆ ತೊಡಗಿಸಿಕೊಂಡರು.

ಹೇಳಿಕೆ ನೀಡಿದ್ದ ಉಪೇಂದ್ರ
ಜಾತಿ ಅಂಥಹಾ ಸೂಕ್ಷ್ಮ ವಿಷಯಗಳ ಬಗ್ಗೆ ಇತ್ತೀಚೆಗೆ ನಟ-ನಟಿಯರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಪ್ರತಿಯೊಬ್ಬರು ಸಹ ಭಿನ್ನ ಅಭಿಪ್ರಾಯಗಳನ್ನು ಹೊರಗೆ ಹಾಕುತ್ತಿದ್ದಾರೆ. ಇತ್ತೀಚೆಗೆ ವಿಡಿಯೋ ಒಂದರಲ್ಲಿ ಮಾತನಾಡಿದ್ದ ನಟ ಉಪೇಂದ್ರ, ''ಜಾತಿ ಕುರಿತು ನಾವು ಮಾತನಾಡದೇ ಇದ್ದರೆ ಅದು ಹೊರಟು ಹೋಗುತ್ತೆ. ಅದರ ಬಗ್ಗೆ ಮಾತನಾಡಿ ಅದನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದೇವೆ'' ಎಂದಿದ್ದರು.

ಉಪೇಂದ್ರ ಹೇಳಿಕೆಗೆ ಚೇತನ್ ಹಾಗೂ ಕಿರಣ್ ಆಕ್ಷೇಪ
ಉಪೇಂದ್ರ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ನಟ ಚೇತನ್ ಅಹಿಂಸ, ''ಜಾತಿ ಅಸಮಾನತೆ ಬಗ್ಗೆ ಮಾತನಾಡಿದರಷ್ಟೆ ಶೋಷಿತರಿಗೆ ನ್ಯಾಯ ಸಿಗಲು ಸಾಧ್ಯ. ಉಪೇಂದ್ರ ಅವರ ಹೇಳಿಕೆ ಸೂಕ್ತವಲ್ಲದ್ದು ಮತ್ತು ಬಾಲಿಶ'' ಎಂದಿದ್ದರು. ನಟ ಕಿರಣ್ ಶ್ರೀನಿವಾಸ್ ಸಹ ಈ ಬಗ್ಗೆ ಮಾತನಾಡಿ ಉಪೇಂದ್ರ ಅವರ ಹೇಳಿಕೆಯನ್ನು ಖಂಡಿಸಿದ್ದರು. ವರ್ಷಗಳಿಂದಲೂ ಕೆಲವು ಜಾತಿಯವರು ಶೋಷಣೆಗೆ ಒಳಪಟ್ಟಿದ್ದಾರೆ ಅದರ ಬಗ್ಗೆ ಮಾತನಾಡದೇ ಇದ್ದರೆ ಶೋಷಣೆ ನಿಲ್ಲುವುದಿಲ್ಲ ಬದಲಿಗೆ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.


Click it and Unblock the Notifications











