ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೆ.ಎಸ್ ರವಿಕುಮಾರ್ ಅವರ ಚಿತ್ರದಲ್ಲಿ ಬ್ಯುಸಿಯಾಗಿರುವಾಗಲೇ 'ಹೆಬ್ಬುಲಿ' ಚಿತ್ರದ ಕಾರ್ಯಗಳು ನಡೆಯುತ್ತಿವೆ. 'ಗಜಕೇಸರಿ' ನಿರ್ದೇಶಕ ಕೃಷ್ಣ ಅವರ ನಿರ್ದೇಶನದಲ್ಲಿ ಸುದೀಪ್ 'ಹೆಬ್ಬುಲಿ' ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರಲಿದೆ.
ಎಂ.ಎನ್.ಕೆ ಮೂವೀಸ್ ಪ್ರೊಡಕ್ಷನ್ಸ್ ಅರ್ಪಿಸುವ 'ಹೆಬ್ಬುಲಿ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡೋದು ಯಾರು ಅನ್ನೋ ಕನ್ ಫ್ಯೂಶನ್ ಗೆ ಇದೀಗ ಬ್ರೇಕ್ ಬಿದ್ದಿದೆ.
ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಗೆ ಮ್ಯೂಸಿಕ್ ಕಂಪೋಸ್ ಮಾಡೋದು ಪಕ್ಕಾ ಆಗಿದೆ. ಈ ಮೊದಲು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡ್ತಾರೆ ಅಂತ ಅಂತೆ-ಕಂತೆಗಳ ಸುದ್ದಿಯಾಗಿತ್ತು.
ಆದರೆ ಇದೀಗ ಎಲ್ಲಾ ಗಾಸಿಪ್ ಗಳಿಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ತೆರೆ ಎಳೆದಿದ್ದಾರೆ. ಈ ಬಗ್ಗೆ ಅರ್ಜುನ್ ಜನ್ಯ ಅವರು, 'ಹೆಬ್ಬುಲಿ' ಚಿತ್ರದ ಕಥೆ ವಿಭಿನ್ನವಾಗಿದೆ, ಅಲ್ಲದೇ ಈ ಚಿತ್ರ ಸುದೀಪ್ ಅವರಿಗೆ ಹೊಸ ಆಯಾಮವನ್ನು ಸೃಷ್ಟಿಸಲಿದೆ. ಸದ್ಯಕ್ಕೆ ಚಿತ್ರದ ಕಥೆಗೆ ತಕ್ಕಂತೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದೇನೆ ಎಂದಿದ್ದಾರೆ.

ಜೊತೆಗೆ ಸುದೀಪ್ ಅವರು ಸ್ಟಾರ್ ಗಿರಿ ತೋರಿಸುವಂತ ಸಂಗೀತ ನೀಡುವಂತೆ ನನ್ನನ್ನು ಕೇಳಲಿಲ್ಲ, ಒಟ್ನಲ್ಲಿ ಚಿತ್ರಕ್ಕೆ ಸೂಕ್ತವಾದ ಹಾಡುಗಳನ್ನು ಅಪೇಕ್ಷಿಸುತ್ತಾರೆ. ಇನ್ನು 'ಹೆಬ್ಬುಲಿ' ಚಿತ್ರಕ್ಕೆ ಈ ಬಾರಿ ಹೊಸ ಟ್ರೆಂಡ್ ಸೃಷ್ಟಿಸುವಂತಹ ಸಂಗೀತ ನೀಡಲಿದ್ದೇವೆ, ಅದು ಖಂಡಿತ ಸುದೀಪ್ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಬಹು ಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.
ಚಿತ್ರದ ಪ್ರೋಮೋ ವಿಭಿನ್ನವಾಗಿ ಮಾಡಲು ನಾನು ಮತ್ತು ನಿರ್ದೇಶಕ ಕೃಷ್ಣ ಅವರು ಬಹಳ ಶ್ರಮಿಸಿದ್ದೇವೆ, ಇದಕ್ಕಾಗಿ ನಿರ್ದೇಶಕರು ಹೆಚ್ಚಿನ ಸಮಯ ನೀಡಿದ್ದಾರೆ ಹೀಗಾಗಿ ಪ್ರೋಮೋಗಳ ಕೆಲಸ ಈಗಾಗಲೇ ನಡೆಯುತ್ತಿದೆ, ಅಂದುಕೊಂಡಂತೆ ನಡೆದರೆ ನವೆಂಬರ್ ನಲ್ಲಿ 'ಹೆಬ್ಬುಲಿ' ಚಿತ್ರದ ಪ್ರೋಮೋ ಬಿಡುಗಡೆಯಾಗುತ್ತದೆ ಎಂದಿದ್ದಾರೆ.
ಸುದೀಪ್ ಅವರ ಹೆಬ್ಬುಲಿ ಚಿತ್ರದೊಂದಿಗೆ ಮುಂಗಾರು ಮಳೆ-2, ಪಟಾಕಿ, ಮಾರುತಿ 800, ಲಕ್ಷ್ಮಣ, ನಾನೇ ಸಿ.ಎಂ ಮುಂತಾದ ಚಿತ್ರಗಳು ಅರ್ಜುನ್ ಜನ್ಯಾ ಅವರ ಕೈಯಲ್ಲಿವೆ.
ಈ ಮೊದಲು ಸುದೀಪ್ ಅವರ ತೆಲುಗಿನ 'ಅತ್ತಾರೆಂಟಿಕಿ ದಾರೇದಿ' ರಿಮೇಕ್ ಚಿತ್ರವಾದ 'ರನ್ನ' ಸಿನಿಮಾಕ್ಕೆ ತೆಲುಗು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು 'ಜಂಗಲ್ ಮೇ ಸಿಂಗಲ್ ಶೇರ್' ಎಂಬ ಹಾಡಿಗೆ ಧ್ವನಿಯಾಗಿದ್ದರು.


Click it and Unblock the Notifications











