ಅಪ್ಪನ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ರೈಡರ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿ, ರಾಜ್ಯದಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ನಿಖಿಲ್ ನಟನೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದ್ದು, ನಟನಾಗಿ ನಿಖಿಲ್ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ವಿಮರ್ಶಕರು ಬಣ್ಣಿಸಿದ್ದಾರೆ.
'ರೈಡರ್' ಸಿನಿಮಾದ ವಿಷಯವಾಗಿ ಇತ್ತೀಚಿಗೆ ಮಾಧ್ಯಮಗಳ ಬಳಿ ಮಾತನಾಡಿದ್ದ ನಿಖಿಲ್ ತಂದೆ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ''ಕನ್ನಡ ಚಿತ್ರರಂಗಕ್ಕೆ ನಟರ ಅವಶ್ಯಕತೆಯಿದೆ. ಹೀಗಾಗಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ. ನಟರ ಕೊರತೆಯನ್ನು ನಿಖಿಲ್ ಕುಮಾರ್ ನೀಗಿಸಲಿ ಎಂಬುದು ದೇವರ ಇಚ್ಛೆ ಎಂದು ಭಾವಿಸಿದ್ದೇನೆ'' ಎಂದಿದ್ದರು. ಎಚ್ಡಿಕೆಯವರ ಈ ಹೇಳಿಕೆ ನಿಖಿಲ್ ರಾಜಕೀಯ ಭವಿಷ್ಯದ ಬಗ್ಗೆ ಅನುಮಾನ ಮೂಡಿಸಿತ್ತು.
ನಿಖಿಲ್ ರಾಜಕೀಯಕ್ಕೆ ಬರುವುದು ತಂದೆಯವರಿಗೆ ಇಷ್ಟವಿಲ್ಲವೇ, ನಿಖಿಲ್ ನಟನಾಗಿಯೇ ಉಳಿಯಲಿ ಎಂಬುದು ಎಚ್ಡಿ ಕುಮಾರಸ್ವಾಮಿಯವರ ಬಯಕೆಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ ಏರ್ಪಟ್ಟಿತ್ತು. ಇಂದು ಹಾಸನಕ್ಕೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ, ತಂದೆಯವರ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತಂದೆಯವರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ: ನಿಖಿಲ್
''ತಂದೆಯವರ ಮಾತನ್ನು ತಪ್ಪಾಸಿ ಅರ್ಥೈಸಲಾಗಿದೆ. ಅವರ ಮಾತಿನ ಉದ್ದೇಶ ನಾನು ರಾಜಕೀಯ ಬಿಟ್ಟು ಸಿನಿಮಾ ರಂಗದಲ್ಲಿಯೇ ಮುಂದುವರೆಯಲಿ ರಾಜಕೀಯ ಬೇಡ ಎಂಬುದಲ್ಲ. ನನ್ನನ್ನು ನಾಡಿನ ಜನ ಗುರುತಿಸಿರುವುದು ಕಲಾವಿದನಾಗಿ. ಅದರ ಬಗ್ಗೆ ನನಗೆ, ತಂದೆಯವರಿಗೆ ಹೆಮ್ಮೆ ಇದೆ. 'ರೈಡರ್' ಸಿನಿಮಾ ನೋಡಿದವರು ನನ್ನ ನಟನೆ ಬಗ್ಗೆ, ಒಟ್ಟಾರೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ನಮ್ಮ ತಂದೆಯವರು ನೀನು ಸಿನಿಮಾಗಳನ್ನು ಮಾಡಬೇಕು, ಯಾವುದೇ ಕಾರಣಕ್ಕೂ ಸಿನಿಮಾ ಬಿಡಬಾರದು ಎಂದು ಸಲಹೆ ನೀಡಿದ್ದಾರೆ. ರಾಜಕೀಯದ ವಿಷಯ ಬಂದಾಗ ಅದರದ್ದೇ ಆದ ವೇದಿಕೆಯಲ್ಲಿ ಅದನ್ನು ಮುಂದುವರೆಸುತ್ತೇನೆ'' ಎಂದಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ಕನ್ನಡ ಚಿತ್ರರಂಗಕ್ಕೆ ನಟರ ಅವಶ್ಯಕತೆಯಿದೆ. ಹೀಗಾಗಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ. ನಟರ ಕೊರತೆಯನ್ನು ನಿಖಿಲ್ ಕುಮಾರ್ ನೀಗಿಸಲಿ ಎಂಬುದು ದೇವರ ಇಚ್ಛೆ ಎಂದು ಭಾವಿಸಿದ್ದೇನೆ. ಮೂರನೇ ಚಿತ್ರದಲ್ಲಿಯೇ ನಟನಾಗುವ ಎಲ್ಲಾ ಅರ್ಹತೆಯಿದೆ ಎಂಬುದನ್ನು ನಿಖಿಲ್ ತೋರಿಸಿದ್ದಾರೆ. ರಾಜಕಾರಣದ ಹಿನ್ನೆಲೆಯಲ್ಲಿ ಮೊದಲು ಸಿನಿಮಾದ ಬಗ್ಗೆ ಗಮನ ನೀಡಿರಲಿಲ್ಲ. ಈ ಸಿನಿಮಾ ನೋಡಿದಾಗ, ಅವರು ರಾಜಕಾರಣಕ್ಕಿಂತ ಸಿನಿಮಾದಲ್ಲಿ ಇನ್ನೂ ಹೆಚ್ಚು ಸೇವೆ ಮಾಡಲಿ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತೇನೆ. ನಾನು ಅವನ ಜೊತೆಯಲ್ಲಿ ಮಾತಾಡೇಕು ಅಂತ ಇದ್ದೇನೆ. ರಾಜಕಾರಣಕ್ಕಿಂತ ಈ ಚಿತ್ರದಲ್ಲಿ ಮುಂದುವರೆಯುವ ಮುಖಾಂತರ, ನಮ್ಮ ನಾಡಿನಲ್ಲಿ ಪುನೀತ್ ಅಂತಹ ಅತ್ಯದ್ಭುತ ನಟ ನಮ್ಮ ಜೊತೆ ಇಲ್ಲ. ಆಕಸ್ಮಿತವಾದ ಸಾವನ್ನು ನಾವೇನು ಕಂಡಿದ್ದೇವೆ. ಇವತ್ತು ಅಂತಹ ಕಲಾವಿದನ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಿಖಿಲ್ ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಎಂದು ನಾನು ಬಯಸುತ್ತಿದ್ದೇನೆ'' ಎಂದಿದ್ದರು.

ರಾಜಕೀಯ ಮತ್ತು ನಿಖಿಲ್ ಕುಮಾರಸ್ವಾಮಿ
ಮಾಜಿ ಪ್ರಧಾನಿ ತಾತ, ಮಾಜಿ ಸಿಎಂ ಅಪ್ಪನನ್ನು ಹೊಂದಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಿನಿಮಾದಷ್ಟೆ ರಾಜಕೀಯದಷ್ಟೆ ಆಸಕ್ತಿ ಇದೆ. ಈಗಾಗಲೇ ಕಳೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರು ಸೋತಿರುವ ನಿಖಿಲ್, ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರ ಸಹ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಂಕ್ರಾಂತಿಗೆ ಹೊಸ ಸಿನಿಮಾ
ನಿಖಿಲ್ ಕುಮಾರಸ್ವಾಮಿ ಈವರೆಗೆ ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಇತ್ತೀಚಿನ ಸಿನಿಮಾ 'ರೈಡರ್' ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಇನ್ನೂ ಎರಡು ಸಿನಿಮಾಗಳಿಗೆ ನಿಖಿಲ್ ಸಹಿ ಹಾಕಿದ್ದಾರೆ. ನಿಖಿಲ್ರ ಮುಂದಿನ ಸಿನಿಮಾ ಸಂಕ್ರಾಂತಿಗೆ ಸೆಟ್ಟೇರಲಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸುಪ್ರಿತ್ ನಿರ್ಮಾಣ ಮಾಡಲಿದ್ದಾರೆ. ಅದರ ಬಳಿಕ ಮತ್ತೊಂದು ಸಿನಿಮಾದಲ್ಲಿಯೂ ನಿಖಿಲ್ ನಟಿಸಲಿದ್ದು ಆ ಸಿನಿಮಾವನ್ನು ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











