'ಪುನೀತ್ ಆನಂದಗೂಡಿ'ನಲ್ಲಿ ಅಪ್ಪು ಸ್ಮರಣೆ, ಅನ್ನಸಂತರ್ಪಣೆ
ರಾಜ್ಯದೆಲ್ಲೆಡೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು, ಅಪ್ಪುವಿನ ಪ್ರಥಮ ವರ್ಷದ ಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಲೆವೆಡೆ ರಕ್ತದಾನ ಶಿಬಿರಗಳು, ಅನ್ನಸಂತರ್ಪಣೆ, ಸಸಿ ನೆಡುವ ಕಾರ್ಯಕ್ರಮಗಳು ಜೋರಾಗಿ ನಡೆದಿವೆ.
ದಾವಣಗೆರೆ ನಗರದ ಎಂಸಿಸಿ, ಬಿ ಬ್ಲಾಕ್ನಲ್ಲಿನ ಈಜುಕೊಳದ ಬಳಿಯ ಉದ್ಯಾನವನದಲ್ಲಿನ 'ಪುನೀತ್ ಆನಂದಗೂಡು' ವಿನ ಪುನೀತ್ ರಾಜಕುಮಾರ್ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಪುನೀತ್ ಅವರನ್ನು ಸ್ಮರಿಸಿಕೊಳ್ಳಲಾಯಿತು. ಇದೇ ವೇಳೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಆದರೂ ಜನರು, ಅಭಿಮಾನಿಗಳು ಸೇರಿದಂತೆ ಕೋಟ್ಯಂತರ ಜನರ ಮನಸಿನಿಂದ ಮಾಸಿಲ್ಲ. ಪ್ರತಿಯೊಬ್ಬರ ಹೃದಯದಲ್ಲಿಯೂ ಸಾಮ್ರಾಟರಾಗಿ ಶಾಶ್ವತವಾಗಿ ನೆಲೆಸಿದ್ದಾರೆ.

ಕರ್ಪೂರ ಹೊತ್ತಿಸಿ ಪೂಜಿಸುವ
ಪುನೀತ್ ಅವರ ನೆನಪು ಶಾಶ್ವತಗೊಳಿಸಬೇಕೆಂಬ ಉದ್ದೇಶದಿಂದ ಪುನೀತ ಆನಂದಗೂಡು ಹೆಸರಿಟ್ಟು ಪ್ರತಿಮೆ ಮಾಡಿಸಲಾಗಿತ್ತು. ಈ ಪ್ರತಿಮೆ ಎಲ್ಲರನ್ನು ಸೆಳೆಯುತ್ತಿದೆ. ಪುನೀತ್ ರಾಜಕುಮಾರ್ ಅವರ ನೆನಪು ಮಾಡಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಮೆ ಅಲಂಕರಿಸಿ ಕರ್ಪೂರ ಹೊತ್ತಿಸಿ ಪೂಜಿಸುವ ಮೂಲಕ ನಮನ ಸಲ್ಲಿಸಲಾಯಿತು.

ಮಹಾನ್ ನಟ ಪುನೀತ್ ರಾಜ್ಕುಮಾರ್
ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜಕುಮಾರ್ ರಾಜ್ಯ ಮಾತ್ರವಲ್ಲ ದೇಶ, ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಮಹಾನ್ ನಟ. ಸಾಮಾಜಿಕ ಸೇವೆ ಮೂಲಕ ಪ್ರತಿಯೊಬ್ಬರನ್ನೂ ತಲುಪಿದ ಸಾಧಕ. ಗಂಧದ ಗುಡಿ ಮೂಲಕ ಕಾನನದ ಸೊಬಗು ತೋರಿಸುವ ಪುಣ್ಯದ ಕೆಲಸ ಮಾಡಿದ್ದಾರೆ. ಅಪ್ಪು ಅಂದರೆ ಆದರ್ಶ, ಸಾರ್ಥಕ ಬದುಕು, ಜನಪ್ರಿಯತೆ, ಸಿಂಪ್ಲಿಸಿಟಿ, ವ್ಯಕ್ತಿತ್ವ ಎಂದು ಬಣ್ಣಿಸಿದರು.

ಪುನೀತ್ ಆದರ್ಶ ನಮ್ಮೊಂದಿಗಿದೆ
ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮ ಮಧ್ಯೆ ಇಲ್ಲದಿದ್ದರೂ ಸಿನಿಮಾ, ಗಾಯನ, ಆದರ್ಶ, ಸಾಮಾಜಿಕ ಸೇವೆ ಮೂಲಕ ಮನಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕೋಟ್ಯಂತರ ಜನರು ಈಗಲೂ ಅಪ್ಪು ಇಲ್ಲ ಎಂಬುದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅಷ್ಟರ ಮಟ್ಟಿಗೆ ನಮ್ಮೊಳಗೆ ಇದ್ದಾರೆ. 'ಗಂಧದ ಗುಡಿ' ಸಿನಿಮಾ ನೋಡಿದ ಪ್ರತಿಯೊಬ್ಬರೂ ಭಾವುಕರಾಗಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಎಲ್ಲೇ ಹೋದರೂ ಅಪ್ಪು ಅಪ್ಪು ಘೋಷಣೆ
ಎಲ್ಲೇ ಹೋದರೂ ಅಪ್ಪು ಅಪ್ಪು ಎಂಬ ಘೋಷಣೆ ಕೇಳಿ ಬರುತ್ತಿದೆ. ಅಪ್ಪು ಎಂದಾಕ್ಷಣ ಮನಸ್ಸಿಗೆ ಬೇಸರ ಆಗುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ಎಲ್ಲರನ್ನು ಬಿಟ್ಟು ಹೋದದ್ದು ಕನ್ನಡ ಚಿತ್ರರಂಗ ಮಾತ್ರವಲ್ಲ, ಕರುನಾಡಿಗೆ ದೊಡ್ಡ ನಷ್ಟ. ಅಪ್ಪು ಅವರಿಗೆ ಅಭಿಮಾನಿಗಳು ದೇವರ ಸ್ಥಾನ ನೀಡಿದ್ದಾರೆ. ಆನಂದಗೂಡಿನಲ್ಲಿ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮುಖಂಡರಾದ ಕೆ. ಜಿ. ಶಿವಕುಮಾರ್, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ. ಶೆಟ್ಟಿ, ಮಲ್ಲಿಕಾರ್ಜುನ್, ಅಲೆಕ್ಸಾಂಡರ್, ಯುವರಾಜ್, ವಾರ್ಡ್ನ ಮುಖಂಡರು, ಸಾರ್ವಜನಿಕರು ಹಾಜರಿದ್ದರು.


Click it and Unblock the Notifications











