"ಇದಕ್ಕಿಂತ ದೊಡ್ಡ ಪ್ರಶಸ್ತಿ ಇದ್ದರೂ ಕೊಡಬೇಕು": ಅಪ್ಪು ನೆನೆದು ವಿನೋದ್ ರಾಜ್ ಭಾವುಕ!
ಇಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಈ ಗೌರವ ಸ್ವೀಕರಿಸಲಿದ್ದಾರೆ. ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗುತ್ತಿರುವ ಬಗ್ಗೆ ಮಾತನಾಡುತ್ತಾ ವಿನೋದ್ ರಾಜ್ ಭಾವುಕರಾಗಿದ್ದಾರೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಇದ್ದರೆ ಕೊಡಬೇಕು ಎಂದಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೀತಿದೆ. ಸೂಪರ್ ಸ್ಟಾರ್ ರಜಿನಿಕಾಂತ್, ತೆಲುಗು ನಟ ಯಂಗ್ ಟೈಗರ್ ಎನ್ಟಿಆರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತ ನಟ ವಿನೋದ್ ಪ್ರಭಾಕರ್, ಅಪ್ಪು ನೆನೆದು ಕಣ್ಣೀರಾಗಿದ್ದಾರೆ.
ಬಹಳ ಚಿಕ್ಕ ವಯಸ್ಸಿನಲ್ಲಿ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲಾ ಬಿಟ್ಟು ಹೊರಟುಬಿಟ್ಟರು. ದೇವರು ಈ ರೀತಿ ಮಾತನಾಡಬಾರದಿತ್ತು. ಇದಕ್ಕಿಂತಲೂ ಉತ್ತಮ ಪ್ರಶಸ್ತಿ ಇದ್ದರೆ ಅಪ್ಪುಗೆ ಕೊಡಬೇಕು ಎಂದು ವಿನೋದ್ ರಾಜ್ ಹೇಳಿದ್ದಾರೆ.

ಮನಸ್ಸಿಗೆ ಬಹಳ ನೋವಾಗುತ್ತದೆ
ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿನೋದ್ ರಾಜ್, "ಸಂತೋಷಕ್ಕಿಂತ ಜಾಸ್ತಿ ಮನಸ್ಸಿಗೆ ನೋವಾಗುತ್ತದೆ. ಬದುಕಿದ್ದಾಗ ಸಿಗದ ಪ್ರಶಸ್ತಿ ತೀರಿಕೊಂಡ ಮೇಲೆ ಸಿಗುತ್ತಲ್ವಾ, ಎಷ್ಟು ಬೇಜಾರಾಗುತ್ತದೆ ಮನಸ್ಸಿಗೆ. ಆದರೆ ಅವರು ಮಾಡಿದ ಉತ್ತಮವಾದ ಕೆಲಸಗಳು ಏನಿತ್ತೋ ಅದನ್ನೆಲ್ಲಾ ಗುರ್ತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಮೊನ್ನೆ 'ಗಂಧದಗುಡಿ' ಸಿನಿಮಾ ಬಿಡುಗಡೆ ಆಯಿತು. ಆತನಲ್ಲಿರುವ ಆಸಕ್ತಿ ನೋಡಿ ಆಶ್ಚರ್ಯ ಆಯಿತು. ನಾವು ಕಾಡು ಪ್ರಾಣಿಗಳ ಜೊತೆ ಇಲ್ಲಿ ಸೋಲದೇವನಹಳ್ಳಿ ಕಾಡಿನಲ್ಲಿ ಓಡಾಡುತ್ತೀವಿ. ಪುನೀತ್ ಅವರಿಗೆ ಯಾಕೆ ಈ ಆಸೆ ಬಂತು ಎನ್ನುವುದೇ ದೊಡ್ಡ ಅಚ್ಚರಿ."

ಅಪ್ಪು ನೆನೆದು ವಿನೋದ್ ರಾಜ್ ಭಾವುಕ
"ಎಲ್ಲೋ ಒಂದು ಕಡೆ ಕಾಡಿನ ಕಡೆ ಆಯಪ್ಪನ ಮನಸ್ಸು ಸೆಳೆದು ಬಿಡ್ತಾ, ಸಾಕು ಎನ್ನಿಸಿಬಿಡ್ತಾ? ಆ ಮಟ್ಟಿಗೆ ಹೋಯಿತಾ ಅವರ ಮನಸ್ಸು ಅನ್ನುವುದು. ಪ್ರಕೃತಿ ಜೊತೆ ನೀರಿನ ಜೊತೆ ಗಿಡ ಮರಗಳ ಜೊತೆ. ನಾವು ಎಲ್ಲಾ ಸಾಕು ಎಂದು ಹಲವು ವರ್ಷ ತೋಟದಲ್ಲಿ ಇದ್ದೆವು. ಕರ್ನಾಟಕದಲ್ಲಿ ಇಷ್ಟು ಕಾಡು ಇದೆ. ತಮ್ಮ ಊರಿನ ಪಕ್ಕದಲ್ಲಿ ಇಷ್ಟು ಎತ್ತರದ ಬೆಟ್ಟ ಇದ್ಯಾ ಎನ್ನುವ ಮಾತನ್ನು ಹೇಳುತ್ತಾರೆ. ಅವರಿಗೆ ಗೊತ್ತಿಲ್ಲದನ್ನು ಕಂಡು ಹಿಡಿಯಲು ಹೋಗಿ ಮಾಡಿರುವ ಸಾಧನೆ ದೊಡ್ಡದು. ನನ್ನ ತಾಯಿ ಹೇಳುತ್ತಿದ್ದರು. ಚಿಕ್ಕಂದಿನಿಂದಲೂ ಲೀಲಾವತಿಯವರೇ ತುಂಬಾ ಒಳ್ಳೆಯವರು ಎಂದು ಹೇಳುತ್ತಿದ್ದರು" ಎನ್ನುತ್ತಾ ವಿನೋದ್ ರಾಜ್ ಗದ್ಗರಿತರಾಗಿದ್ದಾರೆ.

"ದೇವರೇ ಮೋಸ ಮಾಡಿಬಿಟ್ಟನಾ?"
"ಸಂತೋಷಕ್ಕಿಂತ ಅಳು ಬರ್ತಿದೆ. ಪುನೀತ್ ಇಲ್ಲ ಎನ್ನುವುದು ಮನಸ್ಸಿಗೆ ನೋವಾಗುತ್ತಿದೆ. ತಂದೆಗಿಂತ ಈ ವ್ಯಕ್ತಿ ಬೇರೆ. ಚಿಕ್ಕ ವಯಸ್ಸು. ಹಾರ್ಟ್ ಅಟ್ಯಾಕ್ ಬರಬಾರದಪ್ಪಾ. ಹೃದಯದಲ್ಲೇ ದೇವರು ಇದ್ದಾನೆ ಎನ್ನುತ್ತಾರೆ. ದೇವರೇ ಮೋಸ ಮಾಡಿಬಿಟ್ಟನಾ? ಕರ್ನಾಟಕ ರತ್ನಕ್ಕಿಂತ ಉತ್ತಮವಾದ ಪ್ರಶಸ್ತಿ ಇದ್ದರೆ ಪುನೀತ್ ಅವರಿಗೆ ಸರ್ಕಾರ ಕೊಡಬೇಕಿತ್ತು. ಚಿಕ್ಕ ವಯಸ್ಸಿನಲ್ಲಿ ಆಯಪ್ಪಾ ಮನಸ್ಸಿನಲ್ಲಿ ಏನೇನಿತ್ತೋ ? ಇನ್ನು ಎಷ್ಟು ಆಸೆ ಆಕಾಂಕ್ಷೆ ಇತ್ತೋ ? ಒಬ್ಬನೇ ನಿಂತು ಮಾಡಬೇಕು ಎನ್ನುವುದು ಬಂದು, ತನಗೆ ತಾನೇ ಕನ್ನಡಿಯಾಗಿ, ಯಜಮಾನನಾಗಿ, ಕೆಲಸಗಾರನಾಗಿ ಎಲ್ಲವನ್ನು ಮಾಡಿದ್ದಾರೆ. ಹಾಗಾಗಿ ಅವರ ಸಾಧನೆಗೆ ಏನು ಕೊಟ್ಟರೂ ಸಾಲದು."

"ಒಬ್ಬರೇ ನಿಂತು ಎಲ್ಲ ಮಾಡಿದರು"
"ಎಲ್ಲವೂ ವಿಸ್ಮಯವೇ. ಹುಟ್ಟಿದ ನಾಲ್ಕೈದು ತಿಂಗಳಿಗೆ ಪಾತ್ರ ಮಾಡ್ತಾರೆ. ಅವರ ಸಿನಿಮಾಗಳನ್ನು ನೋಡಿದರೆ ಅವರ ಕಣ್ಣಲ್ಲಿ ನಗು ಇದೆ, ದೂರದೃಷ್ಟಿಯೂ ಇದೆ. ಆ ದೂರದೃಷ್ಟಿ ಎಲ್ಲರಿಗೂ ಬರುವುದಿಲ್ಲ. ಜನಸೇವೆ ಜೊತೆ ಧನ ಸೇವೆ, ಶಕ್ತಿಧಾಮ ಇದನ್ನೆಲ್ಲಾ ನೋಡಿದರೆ ಬಹಳ ಆಶ್ಚರ್ಯ ಆಗುತ್ತದೆ. ಯಾವುದನ್ನು ಅಪೇಕ್ಷೆಪಡದೇ ಅವರು ಎಲ್ಲವನ್ನು ಮಾಡಿದ್ದರು. ಇದನ್ನು ಎಲ್ಲರೂ ಕಲಿಯಬೇಕು" ಎಂದು ವಿನೋದ್ ರಾಜ್ ಹೇಳಿದ್ದಾರೆ.


Click it and Unblock the Notifications











