ಅಮೋಘ 2ನೇ ವಾರಕ್ಕೆ ಕಾಲಿಟ್ಟ 'ಗಂಧದ ಗುಡಿ': ಅಪ್ಪು ಕನಸಿನ ಚಿತ್ರದ ಮೊದಲ ವಾರದ ಕಲೆಕ್ಷನ್ ಎಷ್ಟು?
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಕನಸಿನ ಸಿನಿಮಾ 'ಗಂಧದ ಗುಡಿ' ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 28ಕ್ಕೆ ತೆರೆಗೆ ಬಂದಿದ್ದ ಈ ಡಾಕ್ಯುಡ್ರಾಮಾ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪೇಯ್ಡ್ ಪ್ರೀಮಿಯರ್ ಶೋಗಳಿಂದ ಹೌಸ್ಫುಲ್ ಪ್ರದರ್ಶನ ಕಂಡಿದ್ದ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು.
ಕನ್ನಡನಾಡಿನ ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ, ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಅಪ್ಪು- ಅಮೋಘವರ್ಷ ಈ ಡಾಕ್ಯುಮೆಂಟರಿ ಸಿನಿಮಾ ನಿರ್ಮಿಸಿದ್ದಾರೆ. ಕರ್ನಾಟಕದ ಮಣ್ಣಿನ ಘಮವನ್ನು ಪ್ರಪಂಚಕ್ಕೆ ಪರಿಚಯಿಸುವ ಕನಸಿನೊಂದಿಗೆ ಪುನೀತ್ ರಾಜ್ಕುಮಾರ್ ಈ ಸಾಹಸಕ್ಕೆ ಕೈ ಹಾಕಿದ್ದರು. ಪ್ರೇಕ್ಷಕರು ಪುನೀತ್ ರಾಜ್ಕುಮಾರ್ ಜೊತೆಗೆ ಕರ್ನಾಟಕದ ಕಾಡು, ನದಿ, ಬೆಟ್ಟ, ಜಲಪಾತವನ್ನು ನೋಡುತ್ತಾ ಬೆರಗಾಗಿದ್ದಾರೆ. ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪದೇ ಪದೇ 'ಗಂಧದ ಗುಡಿ' ಸಿನಿಮಾ ನೋಡುತ್ತಿರುವ ಅಭಿಮಾನಿಗಳು ಕೂಡ ಇದ್ದಾರೆ.
ಅಪ್ಪು ಇಲ್ಲದೇ ಇದ್ದರೂ ಅವರ ಕನಸು, ಪ್ರಯತ್ನ ಸಾಕಾರವಾಗಿದೆ. ಸರ್ಕಾರ ಕೂಡ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ. ಕರ್ನಾಟಕದ ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತಿನ ಪರಿಚಯ ಮಾಡಿಸುವುದರ ಜೊತೆಗೆ ಅದರ ಉಳಿಸುವ ಬಗ್ಗೆ ಒಂದೊಳ್ಳೆ ಸಂದೇಶ ಇರುವ 'ಗಂಧದ ಗುಡಿ' ಸಿನಿಮಾ ಎಲ್ಲರನ್ನು ತಲುಪಬೇಕಿದೆ. ಆ ಕೆಲಸ ಯಶಸ್ವಿಯಾಗಿ ನೆರವೇರಿದೆ.

ಮೊದಲ ವಾರ 20 ಕೋಟಿ ಕಲೆಕ್ಷನ್
ಬರೀ ಪ್ರೀಮಿಯರ್ ಶೋಗಳಿಂದಲೇ 'ಗಂಧದ ಗುಡಿ' ಸಿನಿಮಾ 18 ಲಕ್ಷ ರೂ. ಕಲೆಕ್ಷನ್ ಮಾಡಿತ್ತು. ಇನ್ನು ಚಿತ್ರದಲ್ಲಿ ಕಳೆದ ಶುಕ್ರವಾರ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಮೊದಲ ದಿನ ಒಟ್ಟು 5 ಕೋಟಿ ಗಳಿಕೆ ಕಂಡಿದ್ದ ಸಿನಿಮಾ 2ನೇ ದಿನ 4.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಟ್ರೇಡ್ ಎಕ್ಸ್ಪರ್ಟ್ ಲೆಕ್ಕ ಕೊಟ್ಟಿದ್ದರು. ಇನ್ನು ಒಂದು ವಾರಕ್ಕೆ 20 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ ಎನ್ನಲಾಗ್ತಿದೆ. ಅದರಲ್ಲೂ ರಾಜ್ಯೋತ್ಸವ ರಜೆ ದಿನ ದೊಡ್ಡಮಟ್ಟದಲ್ಲೇ ಸಿನಿಮಾ ಗಳಿಕೆ ಕಂಡಿದೆ. ಆ ಮೂಲಕ ಚಿತ್ರ ಬ್ಲಾಕ್ಬಸ್ಟರ್ ಲಿಸ್ಟ್ ಸೇರಿಕೊಂಡಿದೆ.

ತೆರಿಗೆ ವಿನಾಯಿತಿ ಕಥೆ ಏನಾಯ್ತು?
ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು 'ಗಂಧದ ಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದರು. ಆದರೆ ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಪ್ರೇಕ್ಷಕರು ಸಂಪೂರ್ಣ ಟಿಕೆಟ್ ಹಣ ತೆತ್ತು ಸಿನಿಮಾ ನೋಡುವಂತಾಗಿದೆ. ತೆರಿಗೆ ವಿನಾಯಿತಿ ಆಗಿದ್ದರು ಮತ್ತಷ್ಟು ಜನ ಈ ಸಂದೇಶಾತ್ಮಕ ಸಿನಿಮಾ ನೋಡಲು ಸಹಾಯಕವಾಗುತ್ತಿತ್ತು.

ಎರಡನೇ ವಾರಕ್ಕೆ 'ಗಂಧದ ಗುಡಿ'
ಡಾಕ್ಯುಡ್ರಾಮಾ ಸಿನಿಮಾ 'ಗಂಧದ ಗುಡಿ' ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಸಿಕ್ಕಿದ್ದಷ್ಟೇ ಶೋಗಳು ಈ ವಾರವೂ ಸಿಕ್ಕಿದೆ. 'ಬನಾರಸ್' ಬಿಟ್ಟರೆ ಯಾವುದೇ ದೊಡ್ಡ ಸಿನಿಮಾ ಈ ವಾರ ತೆರೆಗೆ ಬಂದಿಲ್ಲ. ಹಾಗಾಗಿ ಅಪ್ಪು ಸಿನಿಮಾ ಭರ್ಜರಿ ಓಟ ಮುಂದುವರೆದಿದೆ. ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ಗೆ ಬರಲು ಇನ್ನು ಉತ್ಸುಕರಾಗಿದ್ದಾರೆ.

ಅಪ್ಪುಗೆ ಅತ್ಯುತ್ತಮ ಬೀಳ್ಗೊಡುಗೆ
250ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ 'ಗಂಧದ ಗುಡಿ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಅಭಿಮಾನಿಗಳು ಹಬ್ಬದ ರೀತಿ ಚಿತ್ರವನ್ನು ಸ್ವಾಗತಿಸಿ ಸಂಭ್ರಮಿಸಿದರು. ಬಹಳ ಅದ್ಭುತವಾಗಿ ಮೂಡಿ ಬಂದಿದ್ದ ಸಿನಿಮಾ ನೋಡುಗರಿಗೆ ಅದ್ಭುತ ಅನುಭವ ನೀಡ್ತಿದೆ. ಮುಂದಿನ ಪೀಳಿಗೆಗೆ ಒಳ್ಳೆ ಉಡುಗೊರೆ ಆಗಿದೆ. ಕರ್ನಾಟಕದ ಕಾನನದಲ್ಲಿ ರಿಯಲ್ ಹೀರೊ ಜೊತೆ ರಿಯಲ್ ಪಯಣ ಮಾಡಿ ಬಂದ ಪ್ರೇಕ್ಷಕರು ಪುನೀತರಾಗಿದ್ದಾರೆ. ಇದು ನಿಜಕ್ಕೂ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ಗೆ ಅತ್ಯುತ್ತಮ ಬೀಳ್ಗೊಡುಗೆ.


Click it and Unblock the Notifications











