ಶೀರ್ಷಿಕೆ ವಿವಾದದಲ್ಲಿ ರಾಗಿಣಿ ದ್ವಿವೇದಿ ಸಿನಿಮಾ
ತುಪ್ಪದ ಬೆಡಗಿ ರಾಗಿಣಿ ಸಿನಿಮಾಗೆ ಈಗ ಟೈಟಲ್ ಸಮಸ್ಯೆ ಎದುರಾಗಿದೆ. ತಮ್ಮ ಹುಟ್ಟುಹಬ್ಬದ ದಿನ ರಾಗಿಣಿ ಅಭಿನಯಿಸುವ ಹೊಚ್ಚ ಹೊಸ ಸಿನಿಮಾ 'ನಾನೇ...ನೆಕ್ಸ್ಟ್ ಸಿ.ಎಂ' ಅನೌನ್ಸ್ ಆಗಿತ್ತು. ಈಗ ಈ ಚಿತ್ರಕ್ಕೆ ಟೈಟಲ್ ಕಮಿಟಿಯಿಂದ ವಿರೋಧ ವ್ಯಕ್ತವಾಗಿದೆ.
ಶೀರ್ಷಿಕೆ ಸಮಿತಿಯ ಸದಸ್ಯರಿಗೆ 'ನಾನೇ...ನೆಕ್ಸ್ಟ್ ಸಿ.ಎಂ' ಅನ್ನುವ ಟೈಟಲ್ ದುರಹಂಕಾರದ ಪರಮಾವಧಿ ಅಂತ ಅನಿಸಿದೆ. ಹೀಗಾಗಿ, 'ನಾನೇ' ಅಂತ ಮಾತ್ರ ಟೈಟಲ್ ಕೊಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಟೈಟಲ್ ಕಮಿಟಿ ಒಮ್ಮತ ಅಭಿಪ್ರಾಯಕ್ಕೆ ಬಂದಿದೆ.

''ನಾನೇ ನೆಕ್ಸ್ಟ್ ಸಿ.ಎಂ ಅನ್ನೋದು ದುರಹಂಕಾರದ ಪರಮಾವಧಿ. ಟೈಟಲ್ ಕೊಡಬೇಕಾದರೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕಲಾವಿದರು ಯಾರು. ಅವರ ಹಿನ್ನಲೆ ಏನು? 'ನಾಟಿಕೋಳಿ' ಅಂತಹ ಸಿನಿಮಾ ಮಾಡುವ ಕಲಾವಿದರು 'ನೆಕ್ಸ್ಟ್ ಸಿ.ಎಂ' ಅಂತ ಸಿನಿಮಾ ಮಾಡ್ತಾರೆ ಅಂದ್ರೆ ಅದು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತೆ''. [ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ']
''ಸಿನಿಮಾ ಕೂಡ ಪ್ರಭಾವಿ ಮಾಧ್ಯಮ. ಸರ್ಕಾರಕ್ಕೆ ಸವಾಲು ಒಡ್ಡುವ ಸಿನಿಮಾ ಟೈಟಲ್ ಕೊಟ್ಟು ವಿವಾದ ಆಗಬಾರದು ಅಂತ ನಾವು ನಿರ್ಧರಿಸಿದ್ದೇನೆ'' ಅಂತ ಕೆ.ಎಫ್.ಸಿ.ಸಿಯ ಶೀರ್ಷಿಕೆ ಸಮಿತಿಯ ಸದಸ್ಯ ಕೃಷ್ಣೇಗೌಡ ಹೇಳುತ್ತಾರೆ.

ಹಾಗಾದ್ರೆ, ಟೈಟಲ್ ಅನೌನ್ಸ್ ಆಗುವ ಮುನ್ನ ಶೀರ್ಷಿಕೆ ಸಮಿತಿಗೆ ಮಾಹಿತಿ ಇರಲಿಲ್ವಾ ಅಂತ ನೀವು ಕೇಳಬಹುದು. ಇದೇ ಪ್ರಶ್ನೆ ನಿರ್ಮಾಪಕ ಕಮ್ ಟೈಟಲ್ ಕಮಿಟಿ ಸದಸ್ಯ ಕೃಷ್ಟೇಗೌಡ ಮುಂದೆ ಬಂದಾಗ, ''ಟೈಟಲ್ ಗಾಗಿ ನಮಗೆ ಅಪೀಲ್ ಬಂದಿತ್ತು. ಶೀರ್ಷಿಕೆ ನೋಡಿ ಇದು ಸರ್ಕಾರಕ್ಕೆ ಮುಜುಗರ ತರಬಹುದು ಅನ್ನುವ ಕಾರಣಕ್ಕೆ ನಾವು ಅಪ್ರೂವ್ ಮಾಡಿರಲಿಲ್ಲ. ಅಷ್ಟು ಬೇಗ ಚಿತ್ರತಂಡ ಸಿನಿಮಾನ ಅನೌನ್ಸ್ ಮಾಡಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ'' ಅಂತಾರೆ. [ಸ್ಯಾಂಡಲ್ವುಡ್ನಲ್ಲಿ 'ರಾ' ಹೆಸರಿನ ಚೆಲುವೆಯರ ಗರಂ ಹವಾ]
ಇನ್ನೂ ನಿರ್ದೇಶಕ ಮುಸ್ಸಂಜೆ ಮಹೇಶ್ ಹೇಳುವುದೇ ಬೇರೆ. ''ಶೀರ್ಷಿಕೆ ಸಮಿತಿಯ ವಿರೋಧದ ಬಗ್ಗೆ ನಮಗಿನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ನಮ್ಮ ಕ್ಯಾಮರಾಮೆನ್ ಕಮ್ ಪ್ರೊಡ್ಯೂಸರ್ ಜೆ.ಜೆ.ಕೃಷ್ಣ ಕೂಡ ಶೀರ್ಷಿಕೆ ಸಮಿತಿಯಲ್ಲಿದ್ದಾರೆ. ಹೀಗಾಗಿ ನಾವು ಅಧ್ಯಕ್ಷ ಥಾಮಸ್ ರಿಂದ ಮೌಖಿಕ ಅನುಮತಿ ಪಡೆದಿದ್ವಿ. ಅಂದು ಒಪ್ಪಿ ಇಂದು ವಿರೋಧ ಯಾಕೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ದೇಶಕ ಮುಸ್ಸಂಜೆ ಮಹೇಶ್ ಹೇಳಿದರು. [ವಿವಾದಗ್ರಸ್ತ ಕನ್ನಡ ಚಲನಚಿತ್ರ ಶೀರ್ಷಿಕೆಗಳು]

''ಯಾವುದೇ ಕಾರಣಕ್ಕೂ ನಾವು ಟೈಟಲ್ ಬದಲಿಸುವುದಿಲ್ಲ. ಇದರಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುವಂಥದ್ದೇನಿಲ್ಲ'' ಅಂತಾರೆ ನಿರ್ದೇಶಕ ಮುಸ್ಸಂಜೆ ಮಹೇಶ್. ಒಟ್ನಲ್ಲಿ, ಇಲ್ಲಿಯವರೆಗೂ ಒಳ್ಳೆ ಕಾರಣಕ್ಕೆ ಸುದ್ದಿ ಮಾಡಿದ್ದ 'ನಾನೇ..ನೆಕ್ಸ್ಟ್ ಸಿ.ಎಂ' ಸಿನಿಮಾ ಈಗ ಟೈಟಲ್ ಹಗ್ಗ-ಜಗ್ಗಾಟದಲ್ಲಿ ಸಿಲುಕಿಕೊಂಡಿದೆ. ಇದರಿಂದ ಮುಕ್ತಿ ಎಂದೋ..?


Click it and Unblock the Notifications











