ಮಂತ್ರಾಲಯಕ್ಕೆ ರಜನಿಕಾಂತ್ ರು.10 ಕೋಟಿ ದಾನ
ಇತ್ತೀಚೆಗೆ ಅವರು ಆಂಧ್ರಪ್ರದೇಶದ ಕರ್ನೂರು ಜಿಲ್ಲೆಯ ವಿಶ್ವವಿಖ್ಯಾತ ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 10 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ. ಈ ಹಣವನ್ನು ಮಠದ ಅಭಿವೃದ್ಧಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿಕೊಳ್ಳಬಹುದಾಗಿದೆ.
ರಾಯರ ಸನ್ನಿಧಾನಕ್ಕೆ ಕುಟುಂಬ ಸಮೇತರಾಗಿ ಆಗಾಗ ರಜನಿಕಾಂತ್ ಅವರು ಭೇಟಿ ನೀಡುತ್ತಿರುತ್ತಾರೆ. ವರನಟ ಡಾ.ರಾಜ್ ಕುಮಾರ್ ಅವರಂತೆಯೇ ರಜನಿಕಾಂತ್ ಸಹ ರಾಯರ ಮಹಾನ್ ಆರಾಧಕರು. ರಜನಿ ಅವರು 'ಶ್ರೀರಾಘವೇಂದ್ರ' (1985) ಎಂಬ ಚಿತ್ರದಲ್ಲಿ ರಾಯರ ಭಕ್ತನಾಗಿ ಅಭಿನಯಿಸಿದ್ದಾರೆ.
ಇದಿಷ್ಟೇ ಅಲ್ಲದೆ ರಜನಿಕಾಂತ್ ಅವರ ಮನೆಗೆ ಆಗಾಗ ಭೇಟಿ ನೀಡುವ ಅತಿಥಿಗಳಿಗೆ ರಾಯರ ಫೋಟೋಗಳನ್ನು ಉಡುಗೊರೆಯಾಗಿ ನೀಡುತ್ತಾ ಬರುತ್ತಿದ್ದಾರೆ. ರಜನಿ ಅವರ ದಾನಕ್ಕೆ ಸಂಬಂಧಪಟ್ಟಂತೆ ರಾಯರ ಮಠ ಪತ್ರಿಕಾ ಹೇಳಿಕೆಯನ್ನೂ ನೀಡಿದೆ.
"ರಜನಿಕಾಂತ್ ಅವರು ಮಾಡಿರುವ ದಾನವನ್ನು ಮಠದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಹಳೆಯ ಕಟ್ಟಡವನ್ನು ಜೀರ್ಣೋದ್ಧಾರ ಮಾಡುತ್ತೇವೆ. 25 ಕೊಠಡಿಗಳಿಗೆ ಹವಾನಿಯಂತ್ರಣ ಸೌಲಭ್ಯ ಹಾಗೂ 100 ಸಾಮಾನ್ಯ ಕೊಠಡಿಗಳನ್ನು ನಿರ್ಮಿಸುತ್ತೇವೆ" ಎಂದಿದ್ದಾರೆ.
2009ರಲ್ಲಿ ಉಂಟಾದ ಪ್ರವಾಹದ ಕಾರಣ ಮಠದ ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಗಿತ್ತು. ಅಲ್ಲಿನ ಲಾಡ್ಜ್ಗಳು, ಅಡುಗೆ ಮನೆ, ರಸ್ತೆ ಸೇರಿದಂತೆ ಸುಮಾರು ರು.100 ಕೋಟಿಯಷ್ಟು ಆಸ್ತಿಪಾಸ್ತಿ ನಾಶವಾಗಿದ್ದ ಘಟನೆಯನ್ನು ಮಂತ್ರಾಲಯಕ್ಕೆ ಆಗಮಿಸುವ ಭಕ್ತರು ಇನ್ನೂ ಮರೆತಿಲ್ಲ. (ಏಜೆನ್ಸೀಸ್)


Click it and Unblock the Notifications












